ADVERTISEMENT

ಕಾರ್ಕಳ: ಜಾನುವಾರು ರೇಬಿಸ್ ಉಲ್ಬಣ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 8:25 IST
Last Updated 10 ಫೆಬ್ರುವರಿ 2012, 8:25 IST

ಕಾರ್ಕಳ: ಇಲ್ಲಿನ ಪಟ್ಟಣ ಪ್ರದೇಶದಲ್ಲಿ ಜಾನುವಾರುಗಳ ರೇಬಿಸ್ ಪ್ರಕರಣ ಅಧಿಕವಾಗುತ್ತಿರುವುದು ಜನರಲ್ಲಿ ಆತಂಕ ಉಂಟುಮಾಡಿದೆ.

ಹದಿನೈದು ದಿನಗಳ ಹಿಂದೆ ಇಲ್ಲಿನ ಪೆರ್ವಾಜೆ ಶಾಲಾ ಪ್ರದೇಶದಲ್ಲಿ ರೇಬಿಸ್ ಕಾಯಿಲೆಗೆ ತುತ್ತಾದ ದನವೊಂದು ಅಡ್ಡಾದಿಡ್ಡಿ ಓಡಿ ಶಾಲಾಮಕ್ಕಳನ್ನು ಅಟ್ಟಿಸಿಕೊಂಡು ಬಂದು ಮಕ್ಕಳು ಬಿದ್ದು ಗಾಯಗೊಂಡ ಘಟನೆ ನಡೆದಿದೆ. ದನವನ್ನು ಕಟ್ಟಿಹಾಕಿ ಚಿಕಿತ್ಸೆ ನೀಡಲು ಯತ್ನಿಸಿದರೂ ಫಲಕಾರಿಯಾಗದೆ ದನ ಮೃತಪಟ್ಟಿತ್ತು.

ಇತ್ತೀಚೆಗೆ ಇಲ್ಲಿನ ತೆಳ್ಳಾರು ರಸ್ತೆಯಲ್ಲಿ ರೇಬಿಸ್ ಕಾಯಿಲೆಗೆ ತುತ್ತಾದ ದನವನ್ನು ಸಾರ್ವಜನಿಕರು ಹಿಡಿದು ಕಟ್ಟಿಹಾಕಿದ್ದರು. ಆ ದನವೂ ಚಿಕಿತ್ಸೆ ಫಲಿಸದೆ ಮೃತಪಟ್ಟಿತ್ತು. ಕಳೆದ ಎರಡು ದಿನಗಳಿಂದ ಇಲ್ಲಿನ ಅನಂತಶಯನದ ಕಾರ್ಲ ಕನ್‌ಸ್ಟ್ರಕ್ಷನ್‌ನ ಶಿವರಾಮ ಶೆಟ್ಟಿ ಕಂಪೌಂಡ್‌ನಲ್ಲಿ ದನವೊಂದು ನಡೆಯಲಾಗದ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಪರಿಸರದ ನಿವಾಸಿಗಳು ಅದು ರೇಬಿಸ್ ಕಾಯಿಲೆಗೆ ತುತ್ತಾಗಿದೆ ಎಂದು ಪುರಸಭೆಯ ಸದಸ್ಯರಿಗೆ ತಿಳಿಸಿದರು.

ಕಾಯಿಲೆಗೆ ತುತ್ತಾದ ಈ ದನವನ್ನು ಯಾರೂ ಕಟ್ಟಿ ಹಾಕಿಲ್ಲ. ಅದರ ಬಾಯಿಯಿಂದ ನೊರೆ ಬರುತ್ತಿದ್ದು, ಆಗಾಗ  ಕೆಮ್ಮುತ್ತಿದೆ. ದನದ ಹಿಂಭಾಗದಲ್ಲಿ ರಕ್ತ ಬರುತ್ತಿದೆ. ಅದು ನಿಂತಲ್ಲೇ ಸುತ್ತು ಹಾಕುವುದು ಬಿಟ್ಟರೆ ಅದಕ್ಕೆ ಚಲಿಸಲು ಸಾಧ್ಯವಿಲ್ಲ.  ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ರೇಬಿಸ್ ಕಾಯಿಲೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.