ADVERTISEMENT

ಜು.1ರಿಂದ ಪ್ರಯಾಣ ದರ ಇಳಿಕೆ: ಭರವಸೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 9:05 IST
Last Updated 3 ಏಪ್ರಿಲ್ 2012, 9:05 IST

ಉಡುಪಿ:ವೊಲ್ವೊ ಬಸ್ ದರವನ್ನು ದಿಢೀರ್ ಏರಿಕೆ ಮಾಡಿರುವುದರಿಂದ ಮಂಗಳೂರು- ಉಡುಪಿ ಮಧ್ಯೆ ಪ್ರತಿ ನಿತ್ಯ ಸಂಚರಿಸವ ನೂರಾರು ಪ್ರಯಾಣಿಕರಿಗೆ ಹೊರೆಯಾಗಿದೆ.

 ಮಂಗಳೂರು- ಉಡುಪಿ ಪ್ರಯಾಣ ದರವನ್ನು 65ರಿಂದ 80 ರೂಪಾಯಿಗೆ ಮತ್ತು ಮಂಗಳೂರು- ಮಣಿಪಾಲ ದರವನ್ನು 70ರಿಂದ 80 ರೂಪಾಯಿಗೆ ಏರಿಸಲಾಗಿದ್ದು ಏಪ್ರಿಲ್ 1ರಿಂದ ಈ ದರ ಜಾರಿಗೆ ಬಂದಿದೆ. ಒಮ್ಮೆಲೆ 15ರೂಪಾಯಿ ದರ ಏರಿಕೆಗೆ ಪ್ರಯಾಣಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

`ಉಡುಪಿಯಿಂದ ಮಂಗಳೂರಿಗೆ ಪ್ರತಿ ದಿನ ವೊಲ್ವೊ ಬಸ್‌ನಲ್ಲಿ ಸಂಚರಿಸುತ್ತೇವೆ. ಆದರೆ ಈಗ ಪ್ರಯಾಣ ದರವರನ್ನು ಒಮ್ಮೆಲೆ ಏರಿಸಿರುವುದರಿಂದ ಹೊರೆಯಾಗಿದೆ. ಪ್ರತಿ ದಿನ ಹೆಚ್ಚುವರಿ 30 ರೂಪಾಯಿ ಭರಿಸಬೇಕಾಗಿದೆ. ಮಂಗಳೂರಿನಿಂದ ಉಡುಪಿ ಮತ್ತು ಮಣಿಪಾಲದ ದರವನ್ನು ಮಾತ್ರ ಹೆಚ್ಚಿಸಲಾಗಿದೆ.

ಮಧ್ಯೆ ಬರುವ ಊರುಗಳ ಪ್ರಯಾಣ ದರದಲ್ಲಿ ವ್ಯತ್ಯಾಸವಾಗಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸರಿಯಾದ ಉತ್ತರ ಸಿಗುತ್ತಿಲ್ಲ~ ಎಂದು ಮಂಗಳೂರಿನಿಂದ ಉಡುಪಿಗೆ ಪ್ರಯಾಣಿಸುವ ಬ್ಯಾಂಕ್ ಉದ್ಯೋಗಿಗಳು ದೂರಿದ್ದಾರೆ.

`ಬೇಡಿಕೆ ಋತು ಎಂದು ಈ ರೀತಿ ದರ ಏರಿಕೆ ಮಾಡಿರುವುದರಿಂದ ಪ್ರತಿ ನಿತ್ಯ ಸಂಚರಿಸುವವರಿಗೆ ಹೆಚ್ಚಿನ ಹೊರೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ದರ ಇಳಿಸಬೇಕು~ ಎಂದು ಮಣಿಪಾಲಕ್ಕೆ ಬರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಒತ್ತಾಯಿಸಿದ್ದಾರೆ.

`ಖಾಸಗಿ ಬಸ್‌ಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ದರ ಏರಿಕೆ ಮಾಡಲಾಗಿದೆ. ಇದರ ಹಿಂದೆ ದೊಡ್ಡ ಲಾಬಿ ಇದೆ~ ಎಂದು ಕೆಲವು ಪ್ರಯಾಣಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಜುಲೈ1ರಿಂದ ದರ ಇಳಿಕೆ:ಭರವಸೆ
 `ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುತ್ತದೆ (ಪೀಕ್ ಸೀಸನ್). ಆದ್ದರಿಂದ ಪ್ರತಿ ವರ್ಷ ಈ ಮೂರು ತಿಂಗಳಲ್ಲಿ ಪ್ರಮಾಣ ದರ ಹೆಚ್ಚಿಸಲಾಗುತ್ತದೆ. ಕೇಂದ್ರೀಯ ಕಚೇರಿಯ ಸೂಚನೆಯ ಹಿನ್ನೆಲೆಯಲ್ಲಿಯೇ ಎಲ್ಲ ವೊಲ್ವೊ, ರಾಜಹಂಸ ಮತ್ತು ಎ.ಸಿ. ಸ್ಲೀಪರ್ ಕೋಚ್ ಬಸ್‌ಗಳ ಪ್ರಯಾಣ ದರ ಹೆಚ್ಚಿಸಲಾಗಿದೆ. ಜುಲೈ1ರಿಂದ ಮತ್ತೆ ಸಾಮಾನ್ಯ ದರಗಳು ಜಾರಿಗೆ ಬರಲಿವೆ~ ಎಂದು ಮಂಗಳೂರು ವಿಭಾಗೀಯ ನಿಯಂತ್ರಣ ಅಧಿಕಾರಿ ಎಂ. ರಮೇಶ್ `ಪ್ರಜಾವಾಣಿ~ಗೆ ತಿಳಿಸಿದರು.ಖಾಸಗಿ ಬಸ್‌ಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇಲ್ಲ~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.