ಉಜಿರೆ: ವಿಜ್ಞಾನ, ಸಂಶೋಧನೆ ಮತ್ತು ತಂತ್ರಜ್ಞಾನದ ಉಪಯೋಗವು ಜನಸಾಮಾನ್ಯರ ಪ್ರಗತಿಗೆ ಉಪಯೋಗವಾಗಬೇಕು ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಪ್ರೊ. ನವಕಾಂತ ಭಟ್ ಹೇಳಿದರು.
ಇಲ್ಲಿನ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ‘ಮುಂದಿನ ದಶಕದಲ್ಲಿ ಸಂಶೋಧನೆ ಮತ್ತು ತಂತ್ರಜ್ಞಾನದಲ್ಲಿ ಸವಾಲುಗಳು’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಜಾಗತಿಕ ತಾಪಮಾನ ಏರಿಕೆ, ಪರಿಸರ ಮಾಲಿನ್ಯ ಇತ್ಯಾದಿ ಹತ್ತು - ಹಲವು ಕಾರಣಗಳಿಂದ ಬಡವರು ಮತ್ತು ಬಲ್ಲಿದರ ನಡುವಿನ ಅಂತರ ಹೆಚ್ಚಾಗುತ್ತಿದೆ. ಸರ್ವರಿಗೂ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ದೊರಕಿತ್ತಿದ್ದು ಆದಾಯ ಹೆಚ್ಚಾಗಿ ಮಾನವ ಪ್ರಗತಿ ಸೂಚ್ಯಂಕ ಹೆಚ್ಚಾಗಿದೆ. ಸಂಶೋಧನಾ ಕಾರ್ಯ ಹೆಚ್ಚಾಗುವುದರ ಜೊತೆಗೆ ಅದರ ಗುಣಮಟ್ಟವೂ ವೃದ್ಧಿಯಾಗಬೇಕು ಎಂದು ಹೇಳಿದರು.
ಮಂಗಳೂರಿನ ಎಂ.ಸಿ.ಎಫ್.ನ ಅಧಿಕಾರಿ ರಜನೀಕಾಂತ್ ಮಾತನಾಡಿ ಸಂಶೋಧಕರು ಜನಸಾಮಾನ್ಯರ ಬಳಿಗೆ ಹೋಗಿ ಸಮಸ್ಯೆಗಳ ಮಾಹಿತಿ ಪಡೆದು ಬಳಿಕ ಸಂಶೋಧನೆ ನಡೆಸಿದಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗವಾಗುತ್ತದೆ. ಸಂಶೋಧನಾ ಕಾರ್ಯಗಳು ಜನರ ಬೇಡಿಕೆಗಳನ್ನು ಈಡೇರಿಸಲು ಸಹಕಾರಿಯಾಗಬೇಕು ಎಂದು ಅವರು ಹೇಳಿದರು.
ಬೆಂಗಳೂರಿನ ಕೆ. ರಾಘವನ್ ಶುಭಾಶಂಸನೆ ಮಾಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸಂಶೋಧನಾ ಕಾರ್ಯ ಮಾಡಲು ಪ್ರೇರಣೆ ನೀಡಿ ಸೂಕ್ತ ಅವಕಾಶ ಕಲ್ಪಿಸಬೇಕು. ಸಂಶೋಧಕರಿಗೆ ತ್ಯಾಗ ಮನೋಭಾವ, ಪರಿಶ್ರಮ ಮತ್ತು ಸತತ ಪ್ರಯತ್ನ ಮಾಡುವ ಛಲ ಇರಬೇಕು. ಸಂಶೋಧನೆಯ ಫಲಿತಾಂಶವು ಶೀಘ್ರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದು ಅಭಿಪ್ರಾಯಪಟ್ಟರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ ಬಿ. ಯಶೋವರ್ಮ, ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ರಾಜ್ಕಿರಣ್ ಬಲ್ಲಾಳ್, ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ.ಎಂ.ಜಿ, ಅನಂತ ಪ್ರಸಾದ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.