ADVERTISEMENT

ಕುಂದಾಪುರ ಪುರಸಭೆ: ಅಂಬೇಡ್ಕರ್ ಪುತ್ಥಳಿ ನಿರ್ಮಾಣ ವಿಳಂಬಕ್ಕೆ ಆಕ್ರೋಶ

ಲೆಕ್ಕಾಧಿಕಾರಿಯಿಂದ ಸದಸ್ಯರ ಹಕ್ಕುಚ್ಯುತಿ ಆರೋಪ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 6:53 IST
Last Updated 2 ಆಗಸ್ಟ್ 2025, 6:53 IST
ಕುಂದಾಪುರ ಪುರಸಭೆಯ ಸಾಮಾನ್ಯ ಸಭೆ ಮೋಹನದಾಸ ಶೆಣೈ ಅಧ್ಯಕ್ಷತೆಯಲ್ಲಿ ನಡೆಯಿತು
ಕುಂದಾಪುರ ಪುರಸಭೆಯ ಸಾಮಾನ್ಯ ಸಭೆ ಮೋಹನದಾಸ ಶೆಣೈ ಅಧ್ಯಕ್ಷತೆಯಲ್ಲಿ ನಡೆಯಿತು   

ಕುಂದಾಪುರ: ತಳ ಸಮುದಾಯದ ನಾಯಕ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಪುತ್ಥಳಿ ನಿರ್ಮಾಣಕ್ಕೆ ವಿರೋಧ ಬರುವುದರ ಹಿಂದೆ ಯಾರ ಕೈವಾಡವಿದೆ ಎಂದು ಕುಂದಾಪುರ ಪುರಸಭೆ ಸದಸ್ಯರು ಪಕ್ಷಭೇದ ಮರೆತು ಮುಖ್ಯಾಧಿಕಾರಿಯನ್ನು ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

ನಗರದ ಹೂವಿನ ಮಾರುಕಟ್ಟೆ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಬೇಡ್ಕರ್ ಪ್ರತಿಮೆ ಹಾಗೂ ವೃತ್ತ ರಚನೆಯ ವಿಳಂಬದ ಬಗ್ಗೆ ಪ್ರಶ್ನಿಸಿದ ಸದಸ್ಯರು ಈ ಹಿಂದಿನ ಸಭೆಗಳಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಂಡಿದ್ದರೂ ನಿರ್ಮಾಣ ಕಾರ್ಯ ವಿಳಂಬವಾಗಲು ಕಾರಣವೇನು ಎಂದು ಗಿರೀಶ್ ಜಿ.ಕೆ, ಚಂದ್ರಶೇಖರ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ ಕೇಳಿದರು. ಪೊಲೀಸರ ಅನುಮತಿ ಸಿಗಲಿಲ್ಲ ಎಂದಾಗ ಪ್ರತಿಕ್ರಿಯಿಸಿದ ಸದಸ್ಯರು, ಪೊಲೀಸರನ್ನು ಕೇಳಿ ಪುರಸಭೆ ನಿರ್ಣಯ ಮಾಡುವುದಲ್ಲ. ಪ್ರತಿಮೆ ಹಾಗೂ ವೃತ್ತ ನಿರ್ಮಾಣ ಕುರಿತು ಸುಪ್ರಿಂ ಕೋರ್ಟ್‌ ತೀರ್ಪು ಬಳಿಕವೂ ದೇಶದಲ್ಲಿ ಒಂದೇ ಒಂದು ಪ್ರತಿಮೆ ಹಾಗೂ ವೃತ್ತ ನಿರ್ಮಾಣ ನಡೆಯಲಿಲ್ಲವೇ ಎಂದು ಪ್ರಶ್ನಿಸಿದರು.

ಲೆಕ್ಕಾಧಿಕಾರಿ ಸಭೆಗೆ ಹಾಜರಾಗುತ್ತಿಲ್ಲ. ತಪ್ಪು ಮಾಹಿತಿ ನೀಡುತ್ತಾರೆ. ಸದಸ್ಯರ ಹಕ್ಕುಚ್ಯುತಿ ಆಗುತ್ತಿದೆ. ಲೆಕ್ಕಪತ್ರ ಸರಿ ಇಲ್ಲ, ನಿರ್ಣಯವನ್ನೇ ಬರೆಯಲಿಲ್ಲ ಎಂದು ಗಿರೀಶ್, ಶ್ರೀಧರ ಶೇರೆಗಾರ್ ಹಾಗೂ ಚಂದ್ರಶೇಖರ ಖಾರ್ವಿ ಆಕ್ಷೇಪಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಾಧಿಕಾರಿ ಮುಂದಿನ ಸಭೆಗೆ ಕರೆಸಲಾಗುವುದು ಎಂದರು.

ADVERTISEMENT

ಯುಜಿಡಿ ಕಾಮಗಾರಿ ಕೈಗೆಟುಕದ ನಕ್ಷತ್ರದಂತಾಗಿದೆ. ಹಿಂದೆ ಅಧ್ಯಕ್ಷರಾಗಿದ್ದ ಕಲಾವತಿಯವರಿಂದ ಶಿಲಾನ್ಯಾಸ, ವಸಂತಿ ಸಾರಂಗ ಅವರಿಂದ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿದರೆ ವೀಣಾ ಭಾಸ್ಕರ್ ಅವರು ವೆಟ್‌ವೆಲ್‌ಗೆ ಜಾಗ ಕೊಡಿಸಿದರು. ನೀವೇನು ಮಾಡಿದಿರಿ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದ ಚಂದ್ರಶೇಖರ ಖಾರ್ವಿ, ಯೋಜನೆಯನ್ನು ನಿರ್ನಾಮ ಮಾಡಿದ ಅಪಕೀರ್ತಿ ಇಬ್ಬರು ಸದಸ್ಯರಿಗೆ ಬರುತ್ತದೆ. ಜನಪ್ರತಿನಿಧಿಗಳ ಮೂಲಕ ಜಾಗ ಗುರುತಿಸದೇ ಅಧಿಕಾರಿಗಳನ್ನು ಹೊಣೆಯಾಗಿಸಲಾಗದು. ಅರೆಬರೆ ಯೋಜನೆಯಲ್ಲಿ ಹಣ ತೊಡಗಿಸಿದ್ದೇ ತಪ್ಪು. ನ್ಯಾಯ ಕೇಳುವ ಜನರ ಧ್ವನಿ ಅಡಗಿಸುವ ಕೆಲಸ ಆಗುತ್ತಿದೆ ಎಂದರು.

ನಗರದ ತ್ಯಾಜ್ಯ ಸೇರುವ ನೀರಿನಲ್ಲಿ ಬೆಳೆಯುವ ಮೀನನ್ನೇ ಹಿಡಿದು ತಿನ್ನುವ ಪರಿಸ್ಥಿತಿ ಇದೆ. ಇದನ್ನು ಹೇಗೆ ಸಹಿಸಿಕೊಳ್ಳುವುದು ಎಂದು ಗಿರೀಶ್ ಕೇಳಿದರು. ಹೆದ್ದಾರಿ, ಸರ್ವಿಸ್ ರಸ್ತೆ ಸಮಸ್ಯೆ ಪರಿಹಾರ ಕುರಿತ ನಿರ್ಣಯಗಳನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಡಿಸಿ ಬಳಿ ನಿಯೋಗ ಕೊಂಡೊಯ್ದು ಪ್ರಾಧಿಕಾರದ ವಿರುದ್ಧ ಕ್ರಮಕ್ಕೆ ಒತ್ತಾಯಿಸಬೇಕು ಎಂದು ಗಿರೀಶ್ ಹೇಳಿದರು.  ಸಂಸದರ ಬಳಿ ಹೇಳಿಯೂ ಪ್ರಾಧಿಕಾರದವರು ಸ್ಪಂದಿಸಲಿಲ್ಲ, ಜಿಲ್ಲಾಧಿಕಾರಿಗಳ ಬಳಿ ಹೋಗುವುದೇ ಸರಿ ಎನ್ನುವ ಇಂಗಿತ ಅಧ್ಯಕ್ಷರಿಂದಲೂ ಬಂತು.

ಭಂಡಾರ್ಕಾರ್ಸ್ ರಸ್ತೆಯಲ್ಲಿ ತಲೆ ಎತ್ತುತ್ತಿರುವ ಕಟ್ಟಡಗಳ ಮುಂಭಾಗ ರಸ್ತೆಗೆ ಬಂದಿದೆ. ಅಡ್ಡಾದಿಡ್ಡಿ ವಾಹನ ನಿಲ್ಲುತ್ತವೆ ಎಂದು ಗಿರೀಶ್ ಹೇಳಿದರೆ, ಕಾಲೇಜು ರಸ್ತೆಯ ಪಾರ್ಕಿಂಗ್ ಸಮಸ್ಯೆ ನಿವಾರಣೆಯಾಗಿಲ್ಲ. ಫಲಕ ಅಳವಡಿಸಿಲ್ಲ. ವ್ಹೀಲಿಂಗ್ ನಡೆಯುತ್ತದೆ ಎಂದು ರೋಹಿಣಿ ಉದಯ ಕುಮಾರ್ ಗಮನ ಸೆಳೆದರು. ಕೋಡಿ ಚರಂಡಿ ಕಾಮಗಾರಿ ನಿರ್ಣಯ ಆದರೂ ಕಾಮಗಾರಿ ಆಗಲಿಲ್ಲ ಎಂದು ಅಶ್ಪಕ್ ಕೋಡಿ ಹೇಳಿದರು. ಸ್ಥಳ ತನಿಖೆ ಮಾಡಿ ಅಂದಾಜುಪಟ್ಟಿ ತಯಾರಿಸಲಾಗುತ್ತಿದೆ ಎಂದು ಅಧ್ಯಕ್ಷರು ಹೇಳಿದರು. ಕೋಡಿಯಲ್ಲಿ ಬೀದಿ ದೀಪಕ್ಕೆ ಕಂಬ ನೀಡಲಾಗಿದೆ, ದೀಪ ನೀಡಿಲ್ಲ ಎಂದಾಗ ಎರಡೂ ಗುತ್ತಿಗೆದಾರರು ಬೇರೆ ಎನ್ನುವ ವಿವರ ನೀಡಲಾಯಿತು. ನನ್ನ ವಾರ್ಡ್‌ಗೆ 4 ವರ್ಷದಿಂದ ವಿದ್ಯುತ್ ಕಂಬ ನೀಡಿಲ್ಲ, ರಿಕ್ಷಾ ನಿಲ್ದಾಣ ಬಳಿ ಬೀದಿ ದೀಪ ಅಳವಡಿಸಿ ಎಂದು ಪ್ರಭಾವತಿ ಶೆಟ್ಟಿ ಹೇಳಿದರು. ಪುರಸಭೆಯ ಅಧ್ಯಕ್ಷ ಕೆ.ಮೋಹನ್‌ದಾಸ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವನಿತಾ ಬಿಲ್ಲವ ಇದ್ದರು.

ಪುರಸಭೆ ವಿರುದ್ಧ ಹಸಿರು ಪೀಠಕ್ಕೆ?

₹47 ಕೋಟಿಯ ಯುಜಿಡಿ ಯೋಜನೆ ನಿಗದಿತ ಅವಧಿಯಲ್ಲಿ ಪೂರ್ಣವಾಗದ ಕಾರಣ ಯೋಜನಾ ವೆಚ್ಚ ₹100 ಕೋಟಿಗೆ ಏರುತ್ತಿದ್ದರೂ ಪಂಚಗಂಗಾವಳಿ ಹೊಳೆಗೆ ನಗರದ ತ್ಯಾಜ್ಯ ನೀರು ಬಿಡುವುದನ್ನು ಸರಿಪಡಿಸಲಾಗಿಲ್ಲ. ಖಾರ್ವಿಕೇರಿ ಮದ್ದುಗುಡ್ಡೆ ಪರಿಸರದ ಜನರು ಕಾಯುವುದರಲ್ಲಿ ಅರ್ಥ ಇಲ್ಲ. ಎರಡು ಬಾರಿ ಸದಸ್ಯನಾದ ನನಗೂ ಯುಜಿಡಿ ಯೋಜನೆ ಈ ಅವಧಿಯಲ್ಲಿಯೂ ಪೂರ್ಣವಾಗುವ ಭರವಸೆ ಇಲ್ಲ. ಆದ್ದರಿಂದ ಪುರಸಭೆ ವಿರುದ್ಧ ಹಸಿರು ಪೀಠದಲ್ಲಿ ಪ್ರಕರಣ ದಾಖಲಿಸುವ ಕುರಿತು ಚಿಂತನೆ ನಡೆಸುವುದಾಗಿ ಚಂದ್ರಶೇಖರ ಖಾರ್ವಿ ಹೇಳಿದರು.

ಯೋಜನೆ ಆರಂಭವಾಗಿ 11 ವರ್ಷಗಳೂ ಕಳೆದಿವೆ. ನಗರದ ಸುಂದರ ರಸ್ತೆಗಳು ಹಾಳಾಗಿದೆ. ಪೈಪ್ ಹಳತಾಗಿದೆ. ಹಣ ಮಾಡಿಕೊಂಡ ಗುತ್ತಿಗೆದಾರನ ಪತ್ತೆ ಇಲ್ಲ. ಎರಡು ಪಟ್ಟು ಯೋಜನಾ ವೆಚ್ಚ ಏರಿಕೆಯಾಗಿರುವ ಯೋಜನೆಗೆ ಇನ್ನೂ ಅಷ್ಟೇ ಹಣ ಸುರಿದು ಮತ್ತೆ ಜನರ ನೆಮ್ಮದಿ ಹಾಳು ಮಾಡುವ ಬದಲು ಯೋಜನೆಯ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿ ಅರ್ಧ ಆಗಿರುವ ಕಾಮಗಾರಿಗಳನ್ನು ಸ್ಮಾರಕವಾಗಿ ಘೋಷಿಸಿ ಎಂದು ಸದಸ್ಯ ಗಿರೀಶ್ ಜಿ.ಕೆ ಕುಟುಕಿದರು.

ಯುಜಿಡಿ ಸಮಸ್ಯೆ ನಿವಾರಣೆಗೆ ಅನೇಕ ಪ್ರಯತ್ನ ಮಾಡಲಾಗಿದೆ ಸರ್ಕಾರದಿಂದ ಹೆಚ್ಚುವರಿ ಅನುದಾನ ಮಂಜೂರಾಗದೇ ತೊಡಕಾಗಿದೆ ಎಂದು ಅಧ್ಯಕ್ಷ ಮೋಹನದಾಸ ಶೆಣೈ ಹೇಳಿದರು. ವಿಸ್ತೃತ ಯೋಜನಾ ವರದಿ ತಯಾರಾಗುತ್ತಿದ್ದು ಕೆಲವೇ ದಿನಗಳಲ್ಲಿ ಎಂಜಿನಿಯರ್‌ಗಳು ಇದನ್ನು ಮಂಡಿಸಲಿದ್ದಾರೆ ಎಂದು ಮುಖ್ಯಾಧಿಕಾರಿ ಆನಂದ್ ಜೆ. ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.