ಉಡುಪಿ: ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಷನ್ ಸಂಸ್ಥೆಯ ವತಿಯಿಂದ ‘ಅರ್ಟಿಕಲ್–19’ ಪತ್ರಿಕೋದ್ಯಮ ಕಾರ್ಯಾಗಾರ ಇದೇ 7ರಿಂದ 9ರವರೆಗೆ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕಿ ಡಾ.ಪದ್ಮರಾಣಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಫೆ.7ರಂದು ಬೆಳಿಗ್ಗೆ 9.30ಕ್ಕೆ ಕಾರ್ಯಾಗಾರ ಉದ್ಘಾಟನೆಯಾಗಲಿದೆ. ಸ್ವರಾಜ್ಯ ಪತ್ರಿಕೆ ಸಲಹಾ ಸಂಪಾದಕ ಆನಂದ್ ರಂಗನಾಥನ್ ‘ವಿಜ್ಞಾನದ ಆಯ್ಕೆ ಮತ್ತು ಸಾರ್ವಜನಿಕರ ಮನಸ್ಥಿತಿ’ ಎಂಬ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ ಎಂದರು.
ಫೆ.8ರಂದು ಬೆಳಿಗ್ಗೆ 11.30ಕ್ಕೆ ತೆಲುಗು ಚಿತ್ರ ನಿರ್ದೇಶಕ ನಾಗ ಅಶ್ವಿನ್ ಸಂವಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅಂದು ಮಧ್ಯಾಹ್ನ 2 ಗಂಟೆಗೆ ಇರಾಕಿನ ಇತಿಹಾಸ ತಜ್ಞ, ಪತ್ರಿಕೋದ್ಯಮಿ ಮಹಮ್ಮದ್ ಉಮರ್ ಐಸಿಸ್ ಉಗ್ರಗಾಮಿಗಳ ಉಪಟಳದಿಂದ ಆಗಿರುವ ಪರಿಣಾಮಗಳ ಬಗ್ಗೆ ಫ್ರಾನ್ಸ್ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನೇರ ಸಂವಾದ ನಡೆಸಲಿದ್ದಾರೆ. ಫೆ.9ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಮಣಿಪುರದ ಬರಹಗಾರ ಬಾಬಿ ವಾಹೆನ್ಬಾಮ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಆನ್ಲೈನ್ ಹಾಗೂ ಆಫ್ಲೈನ್ ಸ್ಪರ್ಧೆಗಳು, ಲಲಿತಕಲೆ, ಕ್ರಿಯಾಶೀಲ ಬರವಣಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜತೆಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಯೋಜಕ ತಕ್ಷಕ್ ಪೈ, ಸುಮೇದ್, ಪ್ರಸೀದ್ ನಾಯಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.