
ಬ್ರಹ್ಮಾವರ: ‘ವಿದ್ಯಾರ್ಥಿಗಳ ಕಲಿಕೆ ನವೀನ ವೃತ್ತಿಪರತೆ ಕಡೆ ಇರಲಿ. ಸಮಾಜದ ತೊಡಕು ನಿವಾರಿಸಲು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಒಟ್ಟುಗೂಡಿ ಸದೃಢ ಸಮಾಜ ನಿರ್ಮಾಣ ಮಾಡಬೇಕು’ ಎಂದು ಕರ್ನಾಟಕದ ವಸತಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಸಮನ್ವಯ ಅಧಿಕಾರಿ, ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ರಾಘವೇಂದ್ರ ಎ. ಹೇಳಿದರು.
ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಘಗಳ ಸಂಸ್ಥೆ, ಬೆಂಗಳೂರಿನ ಅನಹತ ಯುನೈಟೆಡ್ ಎಫರ್ಟ್ಸ್ ಆಶ್ರಯದ ವೃತ್ತಿ ಯೋಜನೆ ಕಾರ್ಯಕ್ರಮದ ‘ನನ್ನ ಭವಿಷ್ಯ ನನ್ನ ಆಯ್ಕೆ’ ಕಾರ್ಯಕ್ರಮದ ಎರಡನೇ ಹಂತದ ವೃತ್ತಿ ಶಿಕ್ಷಕರ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮೈಸೂರು ವಲಯದ ಕರ್ನಾಟಕ ವಸತಿ ಶಿಕ್ಷಣ ಸಂಘಗಳ ಸಂಸ್ಥೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಶಿವನ ಗೌಡ ಹಿರೇಗೌಡ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಇಂದಿರಾಗಾಂಧಿ ವಸತಿ ಶಾಲೆಯ ಕಲಾ ಶಿಕ್ಷಕ ರಾಜೇಂದ್ರ ಪೂಜಾರಿ ತ್ರಾಸಿ ಭಾಗವಹಿಸಿದ್ದರು. ಅನಹತ ಯುನೈಟೆಡ್ ಎಫರ್ಟ್ಸ್ನ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮೆಂಟರ್ ಲೀಡರ್ ಅಲ್ಲಾ ಭಕ್ಷ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಮಾ ವಂದಿಸಿದರು. ಶಿಕ್ಷಕಿ ಚೈತ್ರಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಸನ್ನಿಧಿ ಜಿ. ನಾಯ್ಕ ನಿರೂಪಿಸಿದರು.
ವೃತ್ತಿ ಯೋಜನೆ ಕಾರ್ಯಕ್ರಮದ ಪ್ರೌಢಶಾಲೆಯ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕೆಲಸದ ಆಸಕ್ತಿಯ ಮೂಲಕ ವೃತ್ತಿ ಆಯ್ಕೆ ಮಾಡುವ ಬಗ್ಗೆ ಹೊಸ ತಂತ್ರಜ್ಞಾನ ಬಳಕೆ, ಹೊಸ ಚಟುವಟಿಕೆ ಆಧಾರಿತ ಬೋಧನಾ ಕ್ರಮಗಳನ್ನು ಒಳಗೊಂಡಂತೆ ವಿಷಯ ಕಲಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಉಡುಪಿ ಜಿಲ್ಲಾ ವಸತಿ ಶಾಲೆಗಳ ಪ್ರತಿ ಶಾಲೆಯಿಂದ ತಲಾ ಇಬ್ಬರು ದೈಹಿಕ ಶಿಕ್ಷಣ, ಗಣಕ ಯಂತ್ರ ಶಿಕ್ಷಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.