ADVERTISEMENT

ಕೊರೊನಾ ಲಾಕ್‌ಡೌನ್ ಪರಿಣಾಮ: ರಿಕ್ಷಾ ಚಾಲಕನ ಹಣ್ಣು ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 22 ಮೇ 2020, 13:22 IST
Last Updated 22 ಮೇ 2020, 13:22 IST
ರಿಕ್ಷಾದಲ್ಲಿ ಮನೆ ಮನೆಗೆ ತೆರಳಿ ಹಣ್ಣು ಹಂಪಲುಗಳ ವ್ಯಾಪಾರ ಮಾಡುವ ಪಡುಬಿದ್ರಿ ಮಸೀದಿ ಬಳಿಯ ಕೇರಿ ನಿವಾಸಿ ಎಂ.ಎಚ್.ಹುಸೈನ್
ರಿಕ್ಷಾದಲ್ಲಿ ಮನೆ ಮನೆಗೆ ತೆರಳಿ ಹಣ್ಣು ಹಂಪಲುಗಳ ವ್ಯಾಪಾರ ಮಾಡುವ ಪಡುಬಿದ್ರಿ ಮಸೀದಿ ಬಳಿಯ ಕೇರಿ ನಿವಾಸಿ ಎಂ.ಎಚ್.ಹುಸೈನ್   

ಪಡುಬಿದ್ರಿ: ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಹಲವು ಮಂದಿ ತಮ್ಮ ವ್ಯಾಪಾರಗಳು ಇಲ್ಲದೆ ಕಂಗಾಲಾಗಿದ್ದಾರೆ. ಇನ್ನೊಂದೆಡೆ ರಿಕ್ಷಾ ಚಾಲಕರು ಬಾಡಿಗೆ ಇಲ್ಲದೆ ಚಿಂತಿತರಾಗಿದ್ದಾರೆ.

ಪಡುಬಿದ್ರಿ ಮಸೀದಿ ಬಳಿಯ ಕೇರಿ ನಿವಾಸಿ ಎಂ.ಎಚ್.ಹುಸೈನ್ ತಮ್ಮ ರಿಕ್ಷಾದಲ್ಲಿ ಮನೆ ಮನೆಗೆ ತೆರಳಿ ಹಣ್ಣು ಹಂಪಲುಗಳ ವ್ಯಾಪಾರ ಮಾಡುವ ಮೂಲಕ ‘ಗಳಿಕೆ ಇಲ್’ಲ ಎಂದು ಹತಾಶರಾಗಿರುವ ಚಾಲಕರಿಗೆ ಮಾದರಿಯಾಗಿದ್ದಾರೆ.

ಬೆಳಗ್ಗೆ ಉಡುಪಿಯಿಂದ ಹಣ್ಣು ಹಂಪಲುಗಳನ್ನು ರಖಂ ಖರೀದಿಸಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಉಚ್ಚಿಲ, ಮೂಳೂರು, ಪಡುಬಿದ್ರಿ, ಹೆಜಮಾಡಿ ಮುಂತಾದ ಪ್ರದೇಶಗಳಿಗೆ ಮನೆ ಮನೆಗೆ ತೆರಳಿ ವ್ಯಾಪಾರ ಮಾಡುತ್ತಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 7ರಿಂದ 11ವರೆಗೆ ಈ ಪರಿಸರದಲ್ಲಿ ವ್ಯಾಪಾರ ನಡೆಸುತಿದ್ದರು, ಸಡಿಲಿಕೆಯ ಬಳಿಕ ಮಧ್ಯಾಹ್ನದವರೆಗೆಮುಂದುವರಿಸಿದ್ದಾರೆ.

ADVERTISEMENT

ತಾವು ವ್ಯಾಪಾರ ಮಾಡುವ ಸ್ಥಳಗಳಿಗೆ ವಾರಕ್ಕೆ ಎರಡು ಅಥವಾ ಮೂರು ಬಾರಿ ತೆರಳಿ ಗ್ರಾಹಕರಿಗೆ ಎರಡು ಮೂರು ದಿನಗಳಿಗೆ ಬೇಕಾಗುಷ್ಟು ಹಣ್ಣು, ಹಂಪಲುಗಳನ್ನು ಮಾರುತ್ತಾರೆ. ಗ್ರಾಹಕರು ಇವರ ಬರುವಿಕೆಯನ್ನೇ ಕಾಯುತ್ತಿರುತ್ತಾರೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ರಿಕ್ಷಾ ಮನೆಯಲ್ಲಿ ಇಡಬೇಕಾದ ಪರಿಸ್ಥಿತಿ ಉಂಟಾಯಿತು. ಕುಟುಂಬ ನಿರ್ವಹಣೆ ಹೇಗೆ ಮಾಡುವುದು ಎಂದು ಚಿಂತೆಕಾಡತೊಡಗಿತು. ರಿಕ್ಷಾದಲ್ಲಿಯೇ ಹಣ್ಣು ವ್ಯಾಪಾರ ಮಾಡುವ ಬಗ್ಗೆ ಯೋಚಿಸಿದೆ. ಅಲ್ಪ ಬಂಡವಾಳದಲ್ಲಿ ಅಲ್ಪಸ್ವಲ್ಪ ಹಣ್ಣುಗಳನ್ನು ಉಡುಪಿಯಿಂದ ಖರೀದಿಸಿ ಮನೆ ಮನೆಗೆ ತೆರಳಿದೆ. ಅಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದೀಗ ಜನರು ಅದಕ್ಕೆ ಹೊಂದಿಕೊಂಡಿದ್ದಾರೆ. ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳನ್ನು ಕಡಿಮೆಬೆಲೆಯಲ್ಲಿ ನೀಡುತಿದ್ದೇನೆ. ಅಲ್ಲದೆ ಜನರ ಬೇಡಿಕೆಯಂತೆ ಅವರಿಗೆ ಬೇಕಾದ ಹಣ್ಣುಗಳನ್ನು ನಾನು ಅವರ ಮನೆಗೆ ತಲುಪಿಸುತ್ತೇನೆ. ಈಗ ರಂಝಾನ್ ಆಗಿರುವುದರಿಂದ ಹಣ್ಣುಗಳ ವ್ಯಾಪಾರಕ್ಕೆ ಒಳ್ಳೆಯ ಬೇಡಿಕೆ ಇದೆ’ ಎಂದು ಎಂ.ಎಚ್. ಹುಸೈನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.