ಶಿರ್ವ: ‘ನಮ್ಮ ದೇಶದ ಆಯುರ್ವೇದ ಪದ್ಧತಿ ವೈಚಾರಿಕ ಹಾಗೂ ವೈಜ್ಞಾನಿಕ’ ಎಂದು ಉಡುಪಿ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಸ್ವಾಮೀಜಿ ಹೇಳಿದರು.
ಶಂಕರಪುರ ಸಮೀಪದ ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಕೃಷ್ಣವೇಣಿ ಆಶ್ರಯಧಾಮ ಮತ್ತು ಆಯುರ್ವೇದ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
‘ನಾಡಿಗಳೇ ಶರೀರದ ಮೂಲ. ನಾಡಿ ಗಟ್ಟಿ ಇದ್ದರೆ ಶರೀರ ಗಟ್ಟಿಯಾಗುತ್ತದೆ. ಆಯುರ್ವೇದ ತಿಳಿಯಬೇಕು. ನಾಡಿಗೆ ಚಿಕಿತ್ಸೆ ನೀಡಬೇಕು ಇದು ನಮ್ಮ ಹಿರಿಯರ ಚಿಂತನೆ’ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಸರ್ಕಾರ ಮಾಡಬೇಕಾದ ಕಾರ್ಯವನ್ನು ಇಲ್ಲಿ ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ಮಾಡುತ್ತಿದೆ. ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸುವವರಿಗೆ ಈ ಆಶ್ರಯಧಾಮ ಉತ್ತಮ ತಾಣ. ಇದು ಆತ್ಮಶಕ್ತಿಯನ್ನು ತುಂಬುತ್ತದೆ. ಮುಂದೆ ಇದು ಆಯುರ್ವೇದ ಕಾಲೇಜು ಆಗಿ ಪರಿವರ್ತನೆಗೊಳ್ಳಲಿ’ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ‘ಆಯುರ್ವೇದದ ಪ್ರಯೋಜನವನ್ನು ಗ್ರಾಮೀಣ ಪ್ರದೇಶದ ಜನರಿಗೂ ಒದಗಿಸುವ ಪ್ರಯತ್ನವನ್ನು ಕುಟುಂಬಸ್ಥರು ಮಾಡಿದ್ದಾರೆ’ ಎಂದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ನಿರಂಜನ್ ಚಿಪ್ಳೋಣ್ಕರ್, ಕುರ್ಕಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಇನ್ನಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕಟಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಆಶಾ ಭಟ್ ಭಾಗವಹಿಸಿದ್ದರು. ಸಿಎ ಹರಿದಾಸ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ ತಂತ್ರಿ ಸ್ವಾಗತಿಸಿದರು. ಐ.ಆರ್.ಮಿತ್ತಾಂತಾಯ ನಿರೂಪಿಸಿದರು. ಪದ್ಮನಾಭ ಭಟ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.