
ಬೈಂದೂರು: ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಅನುಷ್ಠಾನಗೊಳ್ಳುತ್ತಿರುವ ‘300 ಟ್ರೇಸ್’ ಯೋಜನೆಯ ಭಾಗವಾಗಿ, ರೋಬೋಸಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ₹1 ಕೋಟಿ ವೆಚ್ಚದಲ್ಲಿ, ಬೈಂದೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಶಾಲಾ ಕೊಠಡಿಗೆ ಫೆ. 6ರಂದು ಭೂಮಿ ಪೂಜೆ ನೆರವೇರಲಿದೆ.
ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ, ರೋಬೋಸಾಫ್ಟ್ ಟೆಕ್ನಾಲಜೀಸ್ ಸಿಇಒ ರಾನ್ ಮಹಾನ್, ಸಂಸ್ಥೆಯ ಸ್ಟೀಫನ್, ಶ್ರೀನಿಧಿ ರಾವ್, ರೀನಾ ಮಲಿಕ್ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಮೃದ್ಧ ಬೈಂದೂರು ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಳಿಕ ಮಾತನಾಡಿದ ಅವರು, ಶಾಸಕರ ವಿಶೇಷ ಮನವಿಯ ಮೇರೆಗೆ ಎಂಆರ್ಪಿಎಲ್ ಸಂಸ್ಥೆ ಈಗಾಗಲೇ ₹1 ಕೋಟಿಗೂ ಅಧಿಕ ಮೊತ್ತದ ಸಿಎಸ್ಆರ್ ಅನುದಾನವನ್ನು ಬೈಂದೂರು ಕ್ಷೇತ್ರಕ್ಕೆ ವಿನಿಯೋಗಿಸಿದೆ. ಸಮೃದ್ಧ ಬೈಂದೂರು 300 ಟ್ರೇಸ್ ಯೋಜನೆಯಡಿ ಇದುವರೆಗೆ 100ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಲಾಭ ಪಡೆದಿವೆ. ಶಾಲಾ ತರಗತಿ ಕೋಣೆ, ಶೌಚಾಲಯ, ಪೀಠೋಪಕರಣ, ಪುಸ್ತಕ, ಶಾಲಾ ಬ್ಯಾಗ್, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಲ್ಯಾಬ್, ಕ್ರೀಡಾ ಸಾಮಗ್ರಿ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸರ್ಕಾರಿ ಶಾಲೆಗಳನ್ನು ಬಲಪಡಿಸಲಾಗುತ್ತಿದೆ ಎಂದರು.
ಮಾರ್ಚ್ ಅಂತ್ಯದೊಳಗೆ ಕಂಪನಿಗಳ ಸಿಎಸ್ಆರ್ ನೆರವಿನಿಂದ ಗ್ರಾಮೀಣ ಭಾಗದ ಆಯ್ದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಕ್ಯಾನ್ಫಿನ್ ಹೋಮ್ಸ್ ಲಿಮಿಟೆಡ್ ಸಂಸ್ಥೆ ಶಾಸಕರ ಮನವಿಗೆ ಸ್ಪಂದಿಸಿ ₹1.5 ಕೋಟಿ ಅನುದಾನ ನೀಡಿದ್ದು, ಇದರ ಮೂಲಕ ಕಾಲೇಜುಗಳಿಗೆ ಸೌರ ಬ್ಯಾಕ್ಅಪ್ ವ್ಯವಸ್ಥೆ, ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಸ್ವಯಂ ಸ್ಫೂರ್ತಿ ಫೌಂಡೇಷನ್, ಯೂತ್ ಫಾರ್ ಸೇವಾ, ರಮಣಶ್ರೀ ಟ್ರಸ್ಟ್ ಸೇರಿದಂತೆ ಹಲವು ಎನ್ಜಿಓಗಳು ಸಹಯೋಗ ನೀಡಿವೆ ಎಂದು ಮಾಹಿತಿ ನೀಡಿದರು.
ಕ್ಷೇತ್ರಕ್ಕೆ ಅಗತ್ಯವಿರುವ ಕಾಲುಸಂಕ ನಿರ್ಮಾಣ ಕಾರ್ಯವನ್ನು ಡಾ. ಆರ್. ಅರುಣಾಚಲಂ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಕೈಗೊಳ್ಳಲಾಗಿದ್ದು, ಫೆ. 9ರಂದು ಕ್ಷೇತ್ರದ ಆರು ಕಡೆ ಹೊಸ ಕಾಲುಸಂಕ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಲಿದೆ. ಈ ವರ್ಷಾಂತ್ಯಕ್ಕೆ 25 ಕಾಲುಸಂಕ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕ್ಲೀನ್ ಕಿನಾರ ಯೋಜನೆ 140 ವಾರಗಳನ್ನು ಪೂರ್ಣಗೊಳಿಸಿದ್ದು, ಕಡಲತಡಿ ಸ್ವಚ್ಛತಾ ಕಾರ್ಯದಲ್ಲಿ ಹಲವು ಸಂಘ–ಸಂಸ್ಥೆಗಳು ಭಾಗಿಯಾಗಿವೆ. ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಕಡಲಾಮೆ ಪಥ ಯೋಜನೆ ಜಾರಿಯಾಗಿದ್ದು, ಇದರಲ್ಲಿ ಬೈಂದೂರು ಮತ್ತು ಮರವಂತೆ ಆಯ್ಕೆಯಾಗಿವೆ ಎಂದು ತಿಳಿಸಿದರು.
ದೇವಿನೆಲೆ–ನಮ್ಮ ಮನೆ ಯೋಜನೆಯಡಿ ಅಶಕ್ತರಿಗೆ ಸೂರು ಒದಗಿಸುವ ಕಾರ್ಯ ನಡೆಯುತ್ತಿದ್ದು, ಮುಂದಿನ ತಿಂಗಳು ಲೋಕಾರ್ಪಣೆ ನಡೆಯಲಿದೆ. ಮಹಿಳೆಯರ ಸ್ವಾವಲಂಬನೆಗಾಗಿ ‘ದುಡ್ಮಿ’ ಎಂಬ ಹೊಸ ಸ್ವಉದ್ಯೋಗ ಯೋಜನೆಯನ್ನು ಬೈಂದೂರು ಉತ್ಸವದ ವೇಳೆ ಉದ್ಘಾಟಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮೃದ್ಧ ಬೈಂದೂರು ಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್ ಇದ್ದರು.
ಆಸ್ಪತ್ರೆಗೆ ₹1.5 ಲಕ್ಷ ಮೌಲ್ಯದ ರಕ್ತ ಪರೀಕ್ಷಾ ಯಂತ್ರ ಸಮೃದ್ಧ ಬೈಂದೂರು ಸೇವಾ ಸೇತು ಯೋಜನೆಯಡಿ ಬೈಂದೂರಿನ ಹೇನಬೇರುನಲ್ಲಿ ಸೇವಾ ಭಾರತಿ ಕನ್ಯಾಡಿ ಸಹಯೋಗದಲ್ಲಿ ‘ಸೇವಾಧಾಮ’ (spinal cord rehab centre) ಯೋಜನೆ ಫೆ. 7 ಮತ್ತು 8ರಂದು ಆರಂಭಗೊಳ್ಳಲಿದೆ. ಈ ಯೋಜನೆಯಿಂದ ಉಡುಪಿ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬೆನ್ನುಹುರಿ ಅಪಘಾತದಿಂದ ದಿವ್ಯಾಂಗರಾದವರಿಗೆ ಸಹಾಯ ದೊರೆಯಲಿದೆ ಎಂದು ಬಿ.ಎಸ್. ಸುರೇಶ್ ಶೆಟ್ಟಿ ಹೇಳಿದರು. ಅಂಜಲಿ ಆಸ್ಪತ್ರೆಯಲ್ಲಿ ಕೆಎಂಸಿ ಮಣಿಪಾಲ್ ನೆರವಿನಿಂದ ಡಯಾಲಿಸಿಸ್ ಹಾಗೂ ತುರ್ತು ಚಿಕಿತ್ಸೆ ಘಟಕ ಸ್ಥಾಪಿಸಲಾಗಿದ್ದು ಸಮೃದ್ಧ ಬೈಂದೂರು ವತಿಯಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ₹1.5 ಲಕ್ಷ ಮೌಲ್ಯದ ರಕ್ತ ಪರೀಕ್ಷಾ ಯಂತ್ರವನ್ನು ನೀಡಲಾಗಿದೆ. ವಿವಿಧೆಡೆ ಆರೋಗ್ಯ ಹಾಗೂ ದಂತ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿ ನೂರಾರು ಜನರು ಪ್ರಯೋಜನ ಪಡೆದಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.