ಉಡುಪಿ: ಮಳೆಯ ಮಧ್ಯೆಯೂ ಜಿಲ್ಲೆಯಾದ್ಯಂತ ಭಾನುವಾರ ಬಕ್ರೀದ್ (ಈದುಲ್ ಹಝಾ) ಹಬ್ಬವನ್ನು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು
ಮುಸ್ಲಿಮರು ಬೆಳಿಗ್ಗೆ ಮಸೀದಿಗಳಿಗೆ ತೆರಳಿ ವಿಶೇಷ ನಮಾಜ್ ಮಾಡಿದರು. ಬಳಿಕ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಉಡುಪಿಯ ಜಾಮೀಯ ಮಸೀದಿಯಲ್ಲಿ ಮೌಲಾನ ಅಬ್ದುರ್ ರಶೀದ್ ನದ್ವಿ ನೇತೃತ್ವದಲ್ಲಿ ಹಾಗೂ ಅಂಜುಮಾನ್ ಮಸೀದಿಯಲ್ಲಿ ಮೌಲಾನ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಈದ್ ಪ್ರಾರ್ಥನೆ ನಡೆಯಿತು.
ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಹಾಫೀಳ್ ಅಶ್ರಫ್ ಸಖಾಫಿ ನೇತೃತ್ವದಲ್ಲಿ ವಿಶೇಷ ನಮಾಜ್ ಹಾಗೂ ಖುತ್ಬಾ ಪಾರಾಯಣ ನಡೆಯಿತು.
ಉಡುಪಿ ಬ್ರಹ್ಮಗಿರಿ ನಾಯರ್ ಕೆರೆಯ ಹಾಶಿಮಿ ಮಸೀದಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಸಂದೇಶದೊಂದಿಗೆ ಈದ್ ಆಚರಿಸ ಲಾಯಿತು. ಮೌಲಾನಾ ಸೈಯದ್ ಹುಸೇನ್ ಈದ್ ಸಂದೇಶ ನೀಡಿ, ಮುಸ್ಲಿಮರು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ವಂದತಿಗಳನ್ನು ನಂಬಬಾರದು. ಸಕಾರಾತ್ಮಕ ಮತ್ತು ರಚನಾತ್ಮಕ ಚಟುವಟಿಕೆಗಳಲ್ಲಿ ಗಮನಹರಿಸಿ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಕರೆ ನೀಡಿದರು.
ನಮಾಜ್ನಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ಕುಂದಾಪುರ ಜುಮಾ ಮಸೀದಿಯಲ್ಲಿ ಧರ್ಮಗುರು ಮೌಲಾನ ಮುಫ್ತಿ ಸದ್ದಾಂ ನೇತೃತ್ವದಲ್ಲಿ, ಕಾರ್ಕಳ ಜಾಮೀಯ ಮಸೀದಿಯಲ್ಲಿ ಮೌಲಾನ ಜಾಹಿರ್ ಅಹ್ಮದ್ ಅಲ್ಕಾಸ್ಮಿ ಹಾಗೂ ಬಂಗ್ಲೆಗುಡ್ಡೆ ಸಲ್ಮಾನ್ ಜುಮಾ ಮಸೀದಿಯ ಮೌಲಾನ ಅಹ್ಮದ್ ಶರೀಫ್ ಸಅದಿ ನೇತೃತ್ವದಲ್ಲಿಈದ್ ನಮಾಜ್ ನಡೆಯಿತು.
ಬೈಂದೂರು ಬ್ರಹ್ಮಾವರ ಹೆಬ್ರಿ ಕಾರ್ಕಳ ಕಾಪು ಸೇರಿದಂತೆ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ನಡೆದ ಹಬ್ಬದ ವಿಶೇಷ ನಮಾಜ್ನಲ್ಲಿ ನೂರಾರು ಮುಸ್ಲಿಮರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.