ಉಡುಪಿ: ಕೋವಿಡ್ ಕರ್ಫ್ಯೂ ಮುಂದುವರಿಸುವ ಕುರಿತು ತಜ್ಞರ ಸಮಿತಿ ವರದಿ ಆಧರಿಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಸಚಿವರು, ‘ತಜ್ಞರ ಸಮಿತಿ ಶಿಫಾರಸ್ಸಿನಂತೆ ರಾಜ್ಯದಲ್ಲಿ 14 ದಿನ ಕಠಿಣ ನಿರ್ಬಂಧ ಹಾಕಲಾಗಿದೆ. 10 ಅಥವಾ 12ನೇ ದಿನ ತಜ್ಞರ ಸಮಿತಿ ಸಭೆ ಸೇರಿ ಅಭಿಪ್ರಾಯ ತಿಳಿಸಲಿದೆ. ಬಳಿಕ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಲಸಿಕೆ ಕೊರತೆ: ಲಸಿಕೆ ಲಭ್ಯವಿದ್ದಾಗ ಸಾರ್ವಜನಿಕರು ಉತ್ಸಾಹ ತೋರಲಿಲ್ಲ. ಸೋಂಕು ಹೆಚ್ಚಾಗುತ್ತಿದ್ದಂತೆ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಹಲವೆಡೆ ಲಸಿಕೆ ಕೊರತೆ ಉಂಟಾಗಿದೆ. ಒಂದು ವಾರದಲ್ಲಿ ಬೇಡಿಕೆಯ ಶೇ 60ರಿಂದ 75ರಷ್ಟು ಲಸಿಕೆ ಪೂರೈಕೆಯಾಗುವ ವಿಶ್ವಾಸವಿದೆ ಎಂದು ಬೊಮ್ಮಾಯಿ ಹೇಳಿದರು.
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಈಗಾಗಳೇ ಸರ್ಕಾರ 1 ಕೋಟಿ ಲಸಿಕೆ ಖರೀದಿಸಿದ್ದು, ಶೀಘ್ರ ಮತ್ತೆ 1 ಕೋಟಿ ಲಸಿಕೆ ಖರೀದಿಸಲಿದೆ ಎಂದು ಸಚಿವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.