ADVERTISEMENT

ಉಡುಪಿ| ಚಿರಂತನ ಮೌಲ್ಯ ಪ್ರಧಾನವಾಗಲಿ: ಸುಗುಣೇಂದ್ರತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 4:42 IST
Last Updated 10 ನವೆಂಬರ್ 2025, 4:42 IST
ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಪೀಠಾರೋಹಣ ಶತಮಾನೋತ್ಸವ ಸಮಾರಂಭ ಜರುಗಿತು
ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಪೀಠಾರೋಹಣ ಶತಮಾನೋತ್ಸವ ಸಮಾರಂಭ ಜರುಗಿತು   

ಉಡುಪಿ: ಮೌಲ್ಯಾಧರಿತವಾದ ಜೀವನವನ್ನು ಮಾಡು. ಕೇವಲ ತತ್ವವನ್ನು ಮಾತ್ರ ನೋಡು, ಮಾನವೀಯ ಸಂಬಂಧಗಳ ಬಗ್ಗೆ ಚಿಂತೆ ಮಾಡಬೇಡ ಎಂದು ಶ್ರೀಕೃಷ್ಣನು ಸಂದೇಶ ನೀಡಿದ್ದಾನೆ. ಅದರಂತೆ ನಮಗೆ ಬದುಕಿನಲ್ಲಿ ಚಿರಂತನ ಮೌಲ್ಯಗಳು ಪ್ರಧಾನವಾಗಲಿ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.

ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಬೃಹತ್‌ ಗೀತೋತ್ಸವದ ಅಂಗವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಪೀಠಾರೋಹಣ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ತಾತ್ಕಾಲಿಕವಾದ ಸಂಬಂಧಗಳು, ಅದರಿಂದಾಗುವ ಪ್ರಯೋಜನವನ್ನಾಧರಿಸಿ ಜೀವನ ಮಾಡಬೇಡಿ. ಮಾನವೀಯ ಸಂಬಂಧಗಳು ಕ್ಷಣಿಕ ಆದರೆ ಭಗವಂತನ ಸಂಬಂಧ ಶಾಶ್ವತ ಎಂದು ಅವರು ಪ್ರತಿಪಾದಿಸಿದರು.

ADVERTISEMENT

ವಿದ್ಯಾಮಾನ್ಯ ತೀರ್ಥ ಶ್ರೀಪಾದರು ಶಾಶ್ವತವಾದ ಮೌಲ್ಯಗಳ ಬಗ್ಗೆ ಚಿಂತನೆ ನಡೆಸಿದವರು. ಒಬ್ಬ ವ್ಯಕ್ತಿಯನ್ನು, ವ್ಯಕ್ತಿತ್ವವನ್ನು ರೂಪಿಸುವುದು ಅತ್ಯಂತ ಕಷ್ಟದ ಕೆಲಸ ಆ ಕೆಲಸವನ್ನು ಅವರು ಮಾಡಿದ್ದಾರೆ ಎಂದರು.

ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ, ಎಲ್ಲರೂ ಗುರುಗಳಿಗೆ ಋಣಿಯಾಗಿರಬೇಕು. ಅನೇಕ ಶಿಷ್ಯರನ್ನು ರೂಪಿಸಿದ ಕೀರ್ತಿ ವಿದ್ಯಾಮಾನ್ಯ ತೀರ್ಥರಿಗೆ ಸಲ್ಲುತ್ತದೆ ಎಂದು ಹೇಳಿದರು.

ಭಂಡಾರಕೇರಿ ಮಠದ ವಿದ್ಯೇಶತೀರ್ಥ ಸ್ವಾಮೀಜಿ ಮಾತನಾಡಿ, ಮಧ್ವ ಸಿದ್ಧಾಂತವನ್ನು ಭೋದಿಸುವ ಮೂಲಕ ವಿದ್ಯಾಮಾನ್ಯ ತೀರ್ಥರು ಅನೇಕ ಶಿಷ್ಯರಿಗೆ ಮಾರ್ಗದರ್ಶನ ಮಾಡಿದ್ದರು ಎಂದು ತಿಳಿಸಿದರು.

ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಸ್ವಾಮೀಜಿ, ಉದ್ಯಮಿ ರಾಮ್‌ಪ್ರಸಾದ್‌, ಆದ್ಯಪಾಡಿ ಹರಿದಾಸ ಭಟ್‌, ಬನ್ನಂಜೆ ವಿನಯ ಭೂಷಣ ಆಚಾರ್ಯ, ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ರಮೇಶ್‌ ಭಟ್‌, ರಾಮನಾಥ ಆಚಾರ್ಯ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬನ್ನಂಜೆ ಗೋವಿಂದ ಪಂಡಿತಾಚಾರ್ಯರ ‘ಮಹಾಭಾರತ ತಾತ್ಪರ್ಯ ನಿರ್ಣಯ ಚಂದ್ರಿಕಾ’ ಗ್ರಂಥ ಬಿಡುಗಡೆಗೊಂಡಿತು.

ಅಂತರರಾಷ್ಟ್ರೀಯ ಗೀತಾ ಸಮ್ಮೇಳನ

‘ವಿದ್ಯಾರ್ಥಿಗಳು ಭಗವದ್ಗೀತೆಯನ್ನು ಕೇವಲ ಪುಸ್ತಕವಾಗಿ ನೋಡಬಾರದು ಬದಲಾಗಿ ಚಿಕ್ಕ ಚಿಕ್ಕ ವಿಷಯಗಳ ಮೇಲೆ ಕೇಂದ್ರೀಕರಿಸಿ ಅವುಗಳನ್ನು ಕ್ರಮೇಣ ಅಭ್ಯಾಸ ಮಾಡಬೇಕು’ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊ.ಫ್ರಾನ್ಸಿಸ್‌ ಕ್ಲೂನಿ ಅಭಿಪ್ರಾಯಪಟ್ಟರು. ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಗೀತಾ ಸಮ್ಮೇಳನದಲ್ಲಿ ಮಾತನಾಡಿದರು. ಸೀಟನ್‌ ಹಾಲ್‌ ವಿ.ವಿ.ಯ ಅಲನ್‌ ಬ್ರಿಲ್‌ ಮಾತನಾಡಿ ಯಹೂದಿ ಧರ್ಮ ಮತ್ತು ಹಿಂದೂ ಧರ್ಮದ ನಡುವಿನ ಶೈಕ್ಷಣಿಕ ಮತ್ತು ತಾತ್ವಿಕ ಭೇದಗಳನ್ನು ವಿವರಿಸಿ ಗೀತೆಯ ಉಪದೇಶಗಳು ಯಹೂದಿ ಧರ್ಮದೊಳಗೂ ಹೇಗೆ ಅನ್ವಯಿಸುತ್ತವೆ ಎಂಬುದನ್ನು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.