ಉಡುಪಿ: ಮಣಿಪಾಲದಕಸ್ತೂರ ಬಾ ಆಸ್ಪತ್ರೆಯ ಮೂಳೆ ವಿಭಾಗದ ವೈದ್ಯರ ತಂಡ 18 ವರ್ಷದ ಹುಡುಗನ ತುಂಡಾದ ಕೈಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಮರುಜೋಡಿಸಿದ್ದಾರೆ.
ಫೆ.27ರಂದು ಯಾಂತ್ರಿಕ ಗರಗಸಕ್ಕೆ ಸಿಲುಕಿ ಬಾಲಕನ ಕೈ ಬಹುತೇಕ ಕತ್ತರಿಸಿದ ಸ್ಥಿತಿ ತಲುಪಿತ್ತು. ಅಂದು ಮಧ್ಯಾಹ್ನ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗೆ ಕಸ್ತೂರ ಬಾ ಆಸ್ಪತ್ರೆಗೆ ಕರೆತರಲಾಗಿತ್ತು. ಕೈನ ಅಂಗಾಂಗ ನಷ್ಟ ಹಾಗೂ ತೀವ್ರ ಆಘಾತದ ಸ್ಥಿತಿ ಎದುರಾಗಿತ್ತು. ಕೂಡಲೇ ರಕ್ತ ಮರುಪೂರಣ ವ್ಯವಸ್ಥೆಯಿಂದ ಹುಡುಗನಿಗೆ ಪುನಶ್ಚೇತನ ನೀಡಲಾಯಿತು ಕೆಎಂಸಿ ವೈದ್ಯರು ತಿಳಿಸಿದ್ದಾರೆ.
ರೋಗಿಯ ಸಂಬಂಧಿಕರಿಗೆ ಕೈ ಮರುಪೂರಣ ಸಾಧ್ಯತೆಗಳನ್ನು ತಿಳಿಸಲಾಯಿತು. ಜತೆಗೆ, ಶಸ್ತ್ರಚಿಕಿತ್ಸೆಯಲ್ಲಿ ಎದುರಾಗುವ ಅಪಾಯಗಳನ್ನೂ ವಿವರಿಸಲಾಯಿತು. ಬಳಿಕ ಅವರ ಒಪ್ಪಿಗೆ ಪಡೆದು ಡಾ.ಕೆ.ಎನ್.ಜಯಕೃಷ್ಣನ್, ಡಾ.ಕೀರ್ತನ್, ಡಾ.ಚೇತನ್ ಅವರ ತಂಡ ಡಾ.ಅಶ್ವತ್ ಆಚಾರ್ಯ ಮತ್ತು ಪ್ರಾಧ್ಯಾಪಕರಾದ ಡಾ.ಎಸ್.ಪಿ.ಮೊಹಂತಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕೈ ಮರು ಜೋಡಣೆ ಮಾಡಿತು ಎಂದು ವೈದ್ಯರು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಗೆ ಡಾ.ನಿಶಾ ಸಾರಾ ಜೇಕಬ್ ಮತ್ತು ಡಾ.ಶ್ವೇತಾ ಸಿನ್ಹಾ ಅರವಳಿಕೆ ಸೇವೆ ಒದಗಿಸಿದರು. ಕೈ ಮರುಜೋಡಣೆ ಶಸ್ತ್ರಚಿಕಿತ್ಸೆಯ ಯಶಸ್ಸು ಹಲವು ಅಂಶಗಳ ಮೇಲೆ ನಿರ್ಧರಿತವಾಗುತ್ತದೆ. ಕೈ ತುಂಡಾದ ಸಮಯದಿಂದ ಕತ್ತರಿಸಲ್ಪಟ್ಟ ಭಾಗವನ್ನು ಮರುಸೇರ್ಪಡೆಗೊಳಿಸುವ ಸಮಯದ ಮೇಲೆ ಅದು ನಿರ್ಧರಿತವಾಗಿರುತ್ತದೆ.
ಸಾಧಾರಣವಾಗಿ ಅಂಗಾಂಗ ಕತ್ತರಿಸಿದ ಅಥವಾ ತೀವ್ರವಾಗಿ ಗಾಯಗೊಂಡ ಸಮಯದಿಂದ 6 ಗಂಟೆಗಳು ನಿರ್ಣಾಯಕ ಅವಧಿಯಾಗಿರುತ್ತದೆ. ಈ ಅವಧಿ ಮೀರುವುದರೊಳಗೆ ಬೇರ್ಪಟ್ಟ ಭಾಗವನ್ನು ಸೇರ್ಪಡೆಗೊಳಿಸದಿದ್ದರೆ ರಕ್ತ ಪೂರೈಕೆಯಿಲ್ಲದೆ ಅಂಗಾಂಶಗಳ ಸಾವು ಸಂಭವಿಸುತ್ತದೆ ಎನ್ನುತ್ತಾರೆ ವೈದ್ಯರು.
ಬೇರ್ಪಟ್ಟ ಭಾಗವನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗಿದ್ದರೆ ನಿರ್ಣಾಯಕ ಅವಧಿಯ ಮಿತಿಯನ್ನು ಕೆಲವು ಗಂಟೆಗಳವರೆಗೆ ವಿಸ್ತರಿಸಬಹುದು. ಈ ಪ್ರಕರಣದಲ್ಲಿ ಕ್ಷಿಷ್ಟಕರ ಸನ್ನಿವೇಶವನ್ನು ವೈದ್ಯರು ಯಶಸ್ವಿಯಾಗಿ ನಿಭಾಯಿಸಲಾಗಿದೆ ಎಂದು ಕಸ್ತೂರಬಾ ಆಸ್ಪತ್ರೆ ತಿಳಿಸಿದೆ.
ಇಂತಹ ಕಠಿಣ ಶಸ್ತ್ರಚಿಕಿತ್ಸೆಗಳು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಾಡಲು ಸಾಧ್ಯವಿದ್ದು, ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗುತ್ತಿರುವುದು ಸಂತಸ ತಂದಿದೆ.ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದು, ಪುನರ್ವಸತಿ ಕಾರ್ಯಕ್ರಮ ಪ್ರಾರಂಭಿಸಲಾಗಿದೆ ಎಂದು ಅಧೀಕ್ಷಕರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.