ADVERTISEMENT

ಬ್ರಹ್ಮಾವರ | ಡಾ.ಅಬ್ರಹಾಂ ಸ್ಮರಣಾರ್ಥ ಆರೋಗ್ಯ ಶಿಬಿರ

ರೋಟರಿಯಂತಹ ಸಂಘ ಸಂಸ್ಥೆಗಳಿಂದ ಗ್ರಾಮೀಣ ಭಾಗದ ಬಡವರಿಗೆ ಪ್ರಯೋಜನ: ಪ್ರೊ.ಮ್ಯಾಥ್ಯೂ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 4:46 IST
Last Updated 9 ಅಕ್ಟೋಬರ್ 2024, 4:46 IST
ಆರೋಗ್ಯ ಶಿಬಿರದಲ್ಲಿ ಪ್ರಯಾರಿಟಿ ಎಜುಕೇಶಷಲ್‌ ಫೌಂಡೇಷನ್‌ನ ಟ್ರಸ್ಟಿ ಪ್ರೊ.ಮ್ಯಾಥ್ಯೂ ನೈನಾನ್‌ ಅವರನ್ನು ಸನ್ಮಾನಿಸಲಾಯಿತು
ಆರೋಗ್ಯ ಶಿಬಿರದಲ್ಲಿ ಪ್ರಯಾರಿಟಿ ಎಜುಕೇಶಷಲ್‌ ಫೌಂಡೇಷನ್‌ನ ಟ್ರಸ್ಟಿ ಪ್ರೊ.ಮ್ಯಾಥ್ಯೂ ನೈನಾನ್‌ ಅವರನ್ನು ಸನ್ಮಾನಿಸಲಾಯಿತು   

ಬ್ರಹ್ಮಾವರ: ಸಮಾಜಮುಖಿ ಕಾರ್ಯ ಮಾಡುವ ರೋಟರಿಯಂತಹ ಸಂಘ ಸಂಸ್ಥೆಗಳಿಂದ ಗ್ರಾಮೀಣ ಭಾಗದ ಅದೆಷ್ಟೋ ಬಡವರಿಗೆ ಪ್ರಯೋಜನವಾಗುತ್ತಿರುವುದು ಶ್ಲಾಘನೀಯ. ಡಾ.ಸಿ.ಟಿ.ಅಬ್ರಹಾಂ ಸಮಾಜಮುಖಿ ಚಿಂತನೆಯುಳ್ಳವರಾಗಿದ್ದರು. ಅವರ ಸ್ಮರಣಾರ್ಥ ಆಯೋಜಿಸಲಾದ ಉಚಿತ ಆರೋಗ್ಯ ಶಿಬಿರ ಅರ್ಥಪೂರ್ಣ ಎಂದು ಪ್ರಯಾರಿಟಿ ಎಜುಕೇಷನಲ್‌ ಫೌಂಡೇಷನ್‌ ಮೆನೇಜಿಂಗ್‌ ಟ್ರಸ್ಟಿ ಪ್ರೊ.ಮ್ಯಾಥ್ಯೂ ಸಿ. ನೈನಾನ್‌ ಹೇಳಿದರು.

ಪ್ರಯಾರಿಟಿ ಒನ್ ಇಂಡಿಯಾ ಸ್ಥಾಪಕ ಡಾ.ಸಿ.ಟಿ. ಅಬ್ರಹಾಂ ಅವರ ಸ್ಮರಣಾರ್ಥ ಇಲ್ಲಿನ ಕ್ರಾಸ್‌ಲ್ಯಾಂಡ್ ಕಾಲೇಜು, ರೋಟರಿ ಕ್ಲಬ್, ಉಡುಪಿ ಆದರ್ಶ ಆಸ್ಪತ್ರೆ ಆಶ್ರಯದಲ್ಲಿ ಮಂಗಳವಾರ ಕ್ರಾಸ್‌ಲ್ಯಾಂಡ್ ಕಾಲೇಜಿನ‌ಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರಾಸ್‌ಲ್ಯಾಂಡ್‌ ಕಾಲೇಜು ಸಂಚಾಲಕಿ ಲಾಲಿ ಎ. ಮ್ಯಾಥ್ಯೂ, ಚಾಂತಾರು ಸಿ.ಎಫ್‌.ಸಿ ಯುವ ವೇದಿಕೆ ಕಾರ್ಯದರ್ಶಿ ಪ್ರದೀಪ್, ಕುಂಜಾಲು ಸ್ಫೂರ್ತಿ ಗೆಳೆಯರ ಬಳಗದ ಕಾರ್ಯದರ್ಶಿ ಕಿರಣ್‌ ಕುಮಾರ್‌ ಇದ್ದರು.

ADVERTISEMENT

ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಪ್ರೊ.ಮ್ಯಾಥ್ಯೂ ಸಿ. ನೈನಾನ್‌, ಲಾಲಿ ಎ. ಮ್ಯಾಥ್ಯೂ ಅವರನ್ನು ರೋಟರಿ ಕ್ಲಬ್‌ ವತಿಯಿಂದ ಸನ್ಮಾನಿಸಲಾಯಿತು. ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಉದಯ ಪ್ರಭು ಅವರನ್ನು ಗೌರವಿಸಲಾಯಿತು. ರೋಟರಿ ಕ್ಲಬ್‌ ಮುಂದಿನ ಸಾಲಿನ ಅಧ್ಯಕ್ಷ ಸತೀಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಆದರ್ಶ ಆಸ್ಪತ್ರೆಯ ಡಾ.ಉದಯ ಪ್ರಭು, ಶಿಬಿರದ ಸಂಯೋಜಕ ರೋವಿನ್‌, ಡಾ.ರಂಜಿತಾ, ಡಾ.ಗುರುಪ್ರಸಾದ್‌ ಶೆಟ್ಟಿ, ಡಾ.ಅಭಿಜಿತ್‌ ಇದ್ದರು. ಡಾ.ಸಿ.ಟಿ.ಅಬ್ರಹಾಂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಪ್ರಾಂಶುಪಾಲ ರಾಬರ್ಟ್‌ ಕ್ಲೈವ್‌ ಸ್ವಾಗತಿಸಿದರು. ರೋಟರಿಯ ಆರೂರು ತಿಮ್ಮಪ್ಪ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಚಾಂತಾರು ಚಾನ್ ಸ್ಟಾರ್ ಯೂತ್‌ ಕ್ಲಬ್‌ನ ಸುಧೀರ ಕುಮಾರ್‌ ವಂದಿಸಿದರು. ಉಪನ್ಯಾಸಕ, ಎನ್‌ಎಸ್‌ಎಸ್‌ ಅಧಿಕಾರಿ ನವೀನ್‌ ಕುಮಾರ್‌ ಶೆಟ್ಟಿ ‌ನಿರೂಪಿಸಿದರು.

ಚಾಂತಾರು ಸಿ.ಎಫ್‌.ಸಿ ಯುವ ವೇದಿಕೆ, ಕುಂಜಾಲು ಸ್ಫೂರ್ತಿ ಗೆಳೆಯರ ಬಳಗ, ಚಾಂತಾರು ಚಾನ್ ಸ್ಟಾರ್ ಯೂತ್‌ ಕ್ಲಬ್, ಕಾಲೇಜಿನ ಐಕ್ಯುಎಸಿ, ಎನ್‌ಎಸ್‌ಎಸ್‌ ಸಹಯೋಗದೊಂದಿಗೆ ನಡೆದ ಶಿಬಿರದಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯ ತಜ್ಞ ವೈದ್ಯರಿಂದ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ತಪಾಸಣೆ, ಇಸಿಜಿ, ಸ್ತ್ರೀ ರೋಗ ಸಂಬಂಧಿ ತಪಾಸಣೆ ನಡೆಸಿ ಔಷಧಿಗಳನ್ನು ಉಚಿತವಾಗಿ ನೀಡಲಾಯಿತು.

ಮುಖ್ಯಾಂಶಗಳು ಗ್ರಾಮೀಣ ಭಾಗದ ೨೦೦ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ರೋಗಿಗಳಿಗೆ ಉಚಿತ ಔಷಧಿ ವಿತರಣೆ ರೋಟರಿ ವತಿಯಿಂದ ಶಿಕ್ಷಣ ತಜ್ಞ ಪ್ರೊ.ಮ್ಯಾಥ್ಯೂ ಸಿ ನೈನಾನ್‌ ಅವರಿಗೆ ಸನ್ಮಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.