ADVERTISEMENT

ಉಡುಪಿ | ‘ಗ್ರಾಮೀಣ ಪ್ರದೇಶಕ್ಕೆ ಬಸ್‌ ಸೇವೆ ಆರಂಭಿಸಿ’

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 7:13 IST
Last Updated 4 ಅಕ್ಟೋಬರ್ 2025, 7:13 IST
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಅನಿರ್ದಿಷ್ಟಾವಧಿ ಧರಣಿ ನಡೆಯಿತು
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಅನಿರ್ದಿಷ್ಟಾವಧಿ ಧರಣಿ ನಡೆಯಿತು   

ಉಡುಪಿ: ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ತಾಲ್ಲೂಕುಗಳಲ್ಲಿ ಬಸ್‌ ಸೌಕರ್ಯದಿಂದ ವಂಚಿತವಾಗಿರುವ ಗ್ರಾಮೀಣ ಪ್ರದೇಶಗಳಿಗೆ ಕೆ.ಎಸ್‌.ಆರ್.ಟಿ.ಸಿ. ಬಸ್‌ ಸೇವೆ ಆರಂಭಿಸಲು ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್‌ ಪಡುಕೋಣೆ ಘಟಕ, ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಧರಣಿ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಹಂಚು ಕಾರ್ಮಿಕರ ಸಂಘದ ಅಧ್ಯಕ್ಷ ಎಚ್‌. ನರಸಿಂಹ ಮಾತನಾಡಿ, ಖಾಸಗಿ ಬಸ್‌ಗಳು ಮುಖ್ಯ ರಸ್ತೆಯಲ್ಲಷ್ಟೇ ಸಂಚಾರ ಮಾಡುತ್ತಿದ್ದು, ಗ್ರಾಮೀಣ ಪ್ರದೇಶದ ಜನರು ಇಂದಿಗೂ ಬಸ್‌ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ದುಡಿಮೆಗೆ ಹೋಗುವ ಜನಸಾಮಾನ್ಯರಿಗೆ ಇದರಿಂದ  ತೊಂದರೆಯಾಗಿದೆ ಎಂದರು.

ADVERTISEMENT

ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಪ್ರಯೋಜನವೂ ಈ ಭಾಗದ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸಿಗುತ್ತಿಲ್ಲ. ಬೈಂದೂರು, ಪಡುವರಿ, ಸೋಮೇಶ್ವರ, ದೊಂಬೆ, ಕರಾವಳಿ ಶಿರೂರು ಮಾರ್ಗವಾಗಿ ಹೆಚ್ಚುವರಿ ಕೆ.ಎಸ್‌.ಆರ್.ಟಿ.ಸಿ. ಬಸ್‌ಗಳ ಸಂಚಾರ ಆರಂಭಿಸಬೇಕು ಎಂದು ಆಗ್ರಹಿಸಿದರು.

ಕುಂದಾಪುರ ತಾಲ್ಲೂಕಿನ ಹಕ್ಲಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಂದಾಪುರ, ದೇವಲ್ಕುಂದ, ಬಗ್ವಾಡಿ, ನೂಜಾಡಿ, ಬ್ರಹ್ಮೇರಿ, ಹಳ್ಳಿಜೆಡ್ಡು, ಹೊರ್ನಿ, ಕಟ್ಟಿನ ಮಕ್ಕಿ, ಮಾಣಿಕೊಳಲು, ಮಾಸ್ತಿಕಟ್ಟೆ ಮಾರ್ಗವಾಗಿ ಯಾವುದೇ ಬಸ್‌ ಸಂಚಾರವಿಲ್ಲ. ಈ ಮಾರ್ಗದಲ್ಲಿ ಕೆ.ಎಸ್‌.ಆರ್.ಟಿ.ಸಿ. ಬಸ್‌ ಸಂಚಾರ ಆರಂಭಿಸಬೇಕು ಎಂದು ಆಗ್ರಹಿಸಿದರು.

ಕುಂದಾಪುರ, ತ್ರಾಸಿ, ಆನಗೋಡು, ಮೊವಾಡಿ, ನಾಡ, ಪಡುಕೋಣೆ, ಕೋಣ್ಕಿ, ಬಡಾಕೆರೆ ಮಾರ್ಗವಾಗಿ ಒಂದು ವರ್ಷದಿಂದ ಕೆ.ಎಸ್‌.ಆರ್.ಟಿ.ಸಿ. ಬಸ್‌ ಸಂಚಾರ ನಡೆಸುತ್ತಿತ್ತು ಆದರೆ ಕಳೆದ ಏಪ್ರಿಲ್‌ ತಿಂಗಳಿಂದ ಕೋರ್ಟ್‌ ಆದೇಶದಂತೆ ಬಸ್‌ ಸಂಚಾರ ನಿಲುಗಡೆಯಾಗಿದೆ. ಈ ಮಾರ್ಗದಲ್ಲಿ ಮತ್ತೆ ಕೆ.ಎಸ್‌.ಆರ್.ಟಿ.ಸಿ. ಬಸ್‌ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಳಿಕ ಧರಣಿ ನಿರತರು ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್‌ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ಇದೇ 15ರಂದು ಸಾರಿಗೆ ಪ್ರಾಧಿಕಾರದ ಸಭೆ ನಡೆಸುವುದಾಗಿ ಭರವಸೆ ನೀಡಿದರು. ಬಳಿಕ ಅನಿರ್ದಿಷ್ಟಾವಧಿ ಧರಣಿ ನಿಲ್ಲಿಸಲಾಯಿತು.

ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್‌.ಪಿ. ನಾಯಕ್‌, ಕೆ.ಎಸ್‌.ಆರ್.ಟಿ.ಸಿ. ಕುಂದಾಪುರ ಡಿಪೊ ಮ್ಯಾನೇಜರ್‌ ಉದಯ್‌ ಶೆಟ್ಟಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಧರಣಿಯಲ್ಲಿ ಮುಖಂಡರಾದ ಸುರೇಶ್‌ ಕಲ್ಲಾಗಾರ, ಕವಿರಾಜ್‌ ಎಸ್‌. ಕಾಂಚನ್‌, ಚಂದ್ರಶೇಖರ ವಿ., ನಾಗರತ್ನಾ ನಾಡ, ನಾಗರತ್ನ ಪಡುವರಿ, ಶೋಭಾ, ಸಂಜೀವ ಬಳ್ಕೂರು ಉಪಸ್ಥಿತರಿದ್ದರು.

ಕಾಲೇಜಿಗೆ ಹೋಗುವ ಮತ್ತು ಮರಳಿ ಬರುವ ಸಮಯದಲ್ಲಿ ಬಸ್‌ಗಳಿಲ್ಲದ ಕಾರಣ ಹಾಡಿ ಪ್ರದೇಶದಲ್ಲಿ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಪರೀಕ್ಷಿತ ಪಿಯು ವಿದ್ಯಾರ್ಥಿನಿ ಬಡಾಕೆರೆ
ನಮ್ಮ ಊರಿಗೆ ಬರುತ್ತಿದ್ದ ಕೆ.ಎಸ್‌.ಆರ್.ಟಿ.ಸಿ. ಬಸ್‌ಗೆ ಖಾಸಗಿ ಬಸ್‌ನವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದರಿಂದ ಬಸ್‌ ಸೌಲಭ್ಯವಿಲ್ಲದೆ ಸಮಸ್ಯೆಯಾಗುತ್ತಿದೆ. ಸಂಬಂಧಪಟ್ಟವರು ಸಮಸ್ಯೆ ಪರಿಹರಿಸಬೇಕು.
ದೀಕ್ಷಿತಾ ವಿದ್ಯಾರ್ಥಿನಿ ಪಡುಕೋಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.