ಉಡುಪಿ: ಮಕ್ಕಳ ಹಕ್ಕುಗಳ ಹೋರಾಟಗಾರ ಹಾಗೂ ಸಿಡಬ್ಲ್ಯುಸಿ ‘ನಮ್ಮ ಭೂಮಿ’ ಸಂಸ್ಥೆಯ ಸಂಸ್ಥಾಪಕರಾದ ಬಿ.ದಾಮೋದರ ಆಚಾರ್ಯ (63) ಅನಾರೋಗ್ಯದಿಂದ ಬುಧವಾರ ಬೆಂಗಳೂರಿನಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಬುಧವಾರ ಹುಟ್ಟೂರು ಕುಂದಾಪುರ ತಾಲ್ಲೂಕಿನ ಬಸ್ರೂರಿನ ಮೂಡುಕೆರೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹಳ್ಳಿಬಿಟ್ಟು ಪಟ್ಟಣಕ್ಕೆ ವಲಸೆ ಬಂದು ಹೋಟೆಲ್ಗಳಲ್ಲಿ ದುಡಿಯುತ್ತಿದ್ದ ಮಕ್ಕಳ ಹಕ್ಕುಗಳ ರಕ್ಷಣೆಗೆ ದಾಮೋದರ ಆಚಾರ್ಯ ಅವರು ಬೆಂಗಳೂರಿನಲ್ಲಿ ‘ಗ್ರಾಮಾಶ್ರಮ’ ಸಂಸ್ಥೆ ಆರಂಭಿಸಿದ್ದರು. ಕುಂದಾಪುರದ ಕನ್ಯಾನದಲ್ಲಿ ‘ನಮ್ಮ ಭೂಮಿ’ ಸಂಸ್ಥೆ ಹುಟ್ಟುಹಾಕಿ ಬಡ ಹಾಗೂ ವಲಸೆ ಕಾರ್ಮಿಕರ ಮಕ್ಕಳಿಗೆ ಸ್ವಉದ್ಯೋಗ ತರಬೇತಿ ನೀಡುತ್ತಿದ್ದರು. ಇದುವರೆಗೂ ಈ ಸಂಸ್ಥೆಯಲ್ಲಿ 1,500ಕ್ಕೂ ಹೆಚ್ಚು ಮಕ್ಕಳು ತರಬೇತಿ ಪಡೆದು ಭವಿಷ್ಯ ರೂಪಿಸಿಕೊಂಡಿದ್ದಾರೆ.
ಗ್ರಾಮ ಪಂಚಾಯಿತಿಗಳ ಅಧಿಕಾರ ಮೊಟಕುಗೊಳಿಸುವ ಪ್ರಯತ್ನದ ವಿರುದ್ಧ ಧನಿ ಎತ್ತಲು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಒಕ್ಕೂಟ ಆರಂಭಿಸಿದ್ದರು. ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯ್ದೆಯ ಕರಡು ಪ್ರತಿ ರಚನೆಯ ಹಿಂದೆ ದಾಮೋದರ ಆಚಾರ್ಯ ಅವರ ಶ್ರಮ ದೊಡ್ಡದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.