ADVERTISEMENT

ಉಡುಪಿ: ಕತ್ತಲಲ್ಲಿ ಕಮರುತ್ತಿದೆ ಮಕ್ಕಳ ಭವಿಷ್ಯ

ಮಂದಾರ್ತಿಯ ಹೆಗ್ಗುಂಜೆಯ ಮುರಾರಿ ಮರಾಠಿ ಮನೆಗೆ 13 ವರ್ಷಗಳಿಂದ ಸಿಕ್ಕಿಲ್ಲ ವಿದ್ಯುತ್ ಸಂಪರ್ಕ

ಬಾಲಚಂದ್ರ ಎಚ್.
Published 30 ಜುಲೈ 2021, 19:30 IST
Last Updated 30 ಜುಲೈ 2021, 19:30 IST
ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿಯ ಹೆಗ್ಗುಂಜೆ ಗ್ರಾಮದಲ್ಲಿ ಮುರಾರಿ ಮರಾಠೆ ಅವರ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದೆ ಚಿಮಣಿ ದೀಪದಲ್ಲಿ ಓದುತ್ತಿರುವ ಮಕ್ಕಳು.
ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿಯ ಹೆಗ್ಗುಂಜೆ ಗ್ರಾಮದಲ್ಲಿ ಮುರಾರಿ ಮರಾಠೆ ಅವರ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದೆ ಚಿಮಣಿ ದೀಪದಲ್ಲಿ ಓದುತ್ತಿರುವ ಮಕ್ಕಳು.   

ಉಡುಪಿ: ಕೋವಿಡ್‌ನಿಂದಾಗಿ ಮಕ್ಕಳು ಮನೆಯಲ್ಲಿಯೇ ಆನ್‌ಲೈನ್‌ ಪಾಠ ಕೇಳುವಂತೆ ಶಿಕ್ಷಣ ಇಲಾಖೆ ಹೇಳುತ್ತಿದೆ. ಆದರೆ, ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದ ನೂರಾರು ಮನೆಗಳಿವೆ. ಇಂತಹ ಮನೆಗಳಲ್ಲಿ ವಾಸಮಾಡುತ್ತಿರುವ ವಿದ್ಯಾರ್ಥಿಗಳು ಆನ್‌ಲೈನ್‌ ಪಾಠ ಕೇಳುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.

ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿಯ ಹೆಗ್ಗುಂಜೆ ಗ್ರಾಮದಲ್ಲಿ ಸರ್ಕಾರದ ಭೂಮಿಯಲ್ಲಿ ಚಿಕ್ಕದೊಂದು ಶೀಟಿನ ಸೂರು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಮುರಾರಿ ಮರಾಠಿ ಹಾಗೂ ಪ್ರಭಾವತಿ ದಂಪತಿಯ ಮನೆಗೆ 13 ವರ್ಷಗಳಿಂದ ವಿದ್ಯುತ್ ಸಂಪರ್ಕವೇ ಸಿಕ್ಕಿಲ್ಲ. ವಿದ್ಯುತ್ ಸಂಪರ್ಕ ಕೊಡಿ ಎಂದು ಗ್ರಾಮ ಪಂಚಾಯಿತಿ ಕಚೇರಿಗೆ ಅಲೆದರೂ, ಅಧಿಕಾರಿಗಳ ಬಳಿ ಗೋಗರೆದರೂ ಪ್ರಯೋಜನವಾಗಿಲ್ಲ.

ಮುರಾರಿ ಮರಾಠಿ ದಂಪತಿಗೆ ಮೂವರು ಮಕ್ಕಳಿದ್ದು, ಎಲ್ಲರೂ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಜಿಲ್ಲೆಯಾದ್ಯಂತ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಆನ್‌ಲೈನ್‌ ತರಗತಿಗಳು ಆರಂಭವಾಗಿದ್ದರೂ, ಮನೆಗೆ ವಿದ್ಯುತ್ ಸಂಪರ್ಕ ಇಲ್ಲ ಎಂಬ ಕಾರಣಕ್ಕೆ ಮೂವರು ಮಕ್ಕಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಬೇಕಾಗಿದೆ. ಇದು ಮುರಾರಿ ಮರಾಠಿ ಅವರೊಬ್ಬರ ದುಸ್ಥಿತಿ ಮಾತ್ರವಲ್ಲ; ಹಲವು ಮನೆಗಳಲ್ಲಿ ಇದೇ ಪರಿಸ್ಥಿತಿ ಇದೆ.

ADVERTISEMENT

ಕರೆಂಟ್ ಇಲ್ಲ: ಆನ್‌ಲೈನ್ ಶಿಕ್ಷಣ ಹೇಗೆ: ಆನ್‌ಲೈನ್‌ನಲ್ಲಿ ತರಗತಿಗೆ ಹಾಜರಾಗುವಂತೆ ಶಿಕ್ಷಕರು ಮಕ್ಕಳಿಗೆ ಹೇಳುತ್ತಾರೆ. ಮನೆಯಲ್ಲಿ ಕರೆಂಟ್ ಇಲ್ಲದೆ ಆನ್‌ಲೈನ್ ಶಿಕ್ಷಣ ಪಡೆಯುವುದು ಹೇಗೆ, ಮೊಬೈಲ್‌ ಚಾರ್ಚ್‌ ಮಾಡಿಕೊಳ್ಳುವುದು ಹೇಗೆ, ರಾತ್ರಿಯ ಹೊತ್ತು ಕತ್ತಲಿನಲ್ಲಿ ಓದುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ತಾಯಿ ಪ್ರಭಾವತಿ.

ಆಶಾ ಕಾರ್ಯಕರ್ತೆಯಾಗಿರುವ ಪ್ರಭಾವತಿ ಅವರ ಬಳಿ ಚಿಕ್ಕದೊಂದು ಮೊಬೈಲ್ ಇದೆ. ಪ್ರತಿದಿನ ಕರ್ತವ್ಯ ಮುಗಿಸಿ ಮನೆಗೆ ಬಂದ ನಂತರವಷ್ಟೆ ಮೂವರು ಮಕ್ಕಳು ಮೊಬೈಲ್‌ನಲ್ಲಿ ಕಲಿಕೆ ಆರಂಭಿಸಬೇಕು. ಅಕ್ಕಪಕ್ಕದವರ ಮನೆಯಲ್ಲಿ ಮೊಬೈಲ್ ಚಾರ್ಚ್‌ ಮಾಡಿಕೊಂಡು ಬಂದರೆ ಮಾತ್ರ ಅಂದಿನ ಕಲಿಕೆ ಸಾದ್ಯ. ಇಲ್ಲವಾದರೆ ಇಲ್ಲ ಎಂಬ ಪರಿಸ್ಥಿತಿ ಇದೆ.

ಕೋವಿಡ್ ಲಾಕ್‌ಡೌನ್‌ನಿಂದಾಗಿ ಸರಿಯಾಗಿ ಕೂಲಿ ಸಿಗುತ್ತಿಲ್ಲ. ಸಂಸಾರ ನಿರ್ವಹಣೆಯೇ ಕಷ್ಟವಾಗಿರುವಾಗ ಮಕ್ಕಳಿಗೆ ಸ್ಮಾರ್ಟ್‌ ಫೋನ್ ಕೊಡಿಸಲು ಸಾಧ್ಯವೇ. ಸೋಲಾರ್ ದೀಪ ಖರೀದಿಸಲೂ ಆರ್ಥಿಕ ಸಮಸ್ಯೆ ಎದುರಾಗಿದೆ ಎಂದು ನೋವಿನಿಂದ ನುಡಿಯುತ್ತಾರೆ ತಂದೆ ಮುರಾರಿ ಮರಾಠಿ.

ಮನೆಗೆ ನಳ್ಳಿ ನೀರಿನ ಸಂಪರ್ಕ ಕೂಡ ಕೊಟ್ಟಿಲ್ಲ. ಈಚೆಗೆ ಸುರಿದ ಮಳೆಗೆ ಮನೆ ಬಾಗಶಃ ಹಾನಿಯಾಗಿದ್ದು, ಅಲ್ಲಲ್ಲಿ ಸೋರುತ್ತಿದೆ. ರಾತ್ರಿಯ ಹೊತ್ತು ಕಾಲ ದೂಡುವುದೇ ದುಸ್ಥರವಾಗಿದೆ. ಇದರ ಮಧ್ಯೆ ಮನಗೆ ವಿದ್ಯುತ್ ಸಂಪರ್ಕ ಕೂಡ ಇಲ್ಲದಿರುವುದು ಮಕ್ಕಳ ಭವಿಷ್ಯವನ್ನು ಕತ್ತಲಿಗೆ ದೂಡಿದಂತಾಗಿದೆ ಎನ್ನುತ್ತಾರೆ ತಾಯಿ ಪ್ರಭಾವತಿ.

13 ವರ್ಷಗಳಿಂದ ಸರ್ಕಾರದ ಜಾಗದಲ್ಲಿ ವಾಸವಿದ್ದು, ಜಿಲ್ಲಾಡಳಿತ ಹಕ್ಕುಪತ್ರ ಕೊಟ್ಟರೆ ಹೇಗೋ ಜೀವನ ಸಾಗಿಸುತ್ತೇವೆ ಎಂಬ ಆಶಾಭಾವ ವ್ಯಕ್ತಪಡಿಸುತ್ತಾರೆ ಅವರು.

ವಿದ್ಯುತ್ ಸಂಪರ್ಕ ಸಿಗದಿರಲು ಕಾರಣ: ಮುರಾರಿ ಮರಾಠೆ ಹಾಗೂ ಪ್ರಭಾವತಿ ದಂಪತಿ ಸರ್ಕಾರಿ ಜಾಗದಲ್ಲಿ ವಾಸವಿದ್ದು ಇದುವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ಜಾಗಕ್ಕೆ ಆರ್‌ಟಿಸಿ ಇಲ್ಲದ್ದರಿಂದ ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ವಿದ್ಯುತ್ ಸಂಪರ್ಕ ನೀಡಲು ನಿಯಮಗಳು ಅಡ್ಡಿಯಾಗುತ್ತವೆ ಎಂಬ ಸಬೂಬು ಅಧಿಕಾರಿಗಳದ್ದು. ಮಾನವೀಯತೆ ದೃಷ್ಟಿಯಿಂದ, ಮಕ್ಕಳ ಕಲಿಕಾ ದೃಷ್ಟಿಯಿಂದ ವಿದ್ಯುತ್ ಸಂಪರ್ಕ ನೀಡಬೇಕು ಎಂಬುದು ಬಡ ದಂಪತಿಯ ಆಗ್ರಹ.

ಸೋಲಾರ್ ವ್ಯವಸ್ಥೆ: ಡಿಡಿಪಿಐ ಭರವಸೆ
ವಿದ್ಯುತ್ ಸಂಪರ್ಕ ಇಲ್ಲ ಎಂಬ ಕಾರಣಕ್ಕೆ ಮಕ್ಕಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಬಾರದು. ಮುರಾರಿ ಅವರ ಮನೆಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲಾಗುವುದು. ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲಾಗುವುದು. ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಬಹಳಷ್ಟು ಮನೆಗಳಿದ್ದು, ದಾನಿಗಳ ನೆರವಿನಿಂದ ಸೋಲಾರ್‌ ಉಪಕರಣ ನೀಡಲಾಗುತ್ತಿದೆ. ಸ್ಮಾರ್ಟ್‌ಫೋನ್ ಮೊಬೈಲ್ ಅಭಿಯಾನದ ಮೂಲಕ ಸಾರ್ವಜನಿಕರ ಬಳಿ ಇರುವ ಹೆಚ್ಚುವರಿ ಮೊಬೈಲ್‌ಗಳನ್ನು ಸಂಗ್ರಹಿಸಿ ಅಗತ್ಯವಿದ್ದ ಮಕ್ಕಳಿಗೆ ನೀಡಲಾಗುತ್ತಿದೆ. ಈ ಅಭಿಯಾನಕ್ಕೆ ಸಾರ್ವಜನಿಕರ, ದಾನಿಗಳ ನೆರವು ಅತ್ಯಗತ್ಯ.
-ಎನ್‌.ಎಚ್‌.ನಾಗೂರ, ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.