ಉಡುಪಿ: ಉಡುಪಿ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ‘ಎ’ ಪರ್ಕಳ ಪೇಟೆ ವ್ಯಾಪ್ತಿಯ ರಸ್ತೆ ವಿಸ್ತರಣೆ ಕಾಮಗಾರಿ ಏ.11ರಿಂದ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಬುಧವಾರ ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ನಡೆದ ಪರ್ಕಳ ಪ್ರದೇಶದ ಭೂ ಸಂತ್ರಸ್ಥರ ಸಭೆಯಲ್ಲಿ ಮಾತನಾಡಿ, ಕಾಮಗಾರಿಗಾಗಿ ಭೂಮಿ ಕಳೆದುಕೊಳ್ಳುವ 72 ಮಂದಿ ಮಾಲೀಕರಿಗೆ ₹ 21.84 ಕೋಟಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಪರ್ಕಳ ಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತಿದ್ದು, ರಸ್ತೆ ವಿಸ್ತರಣೆ ಅತ್ಯಂತ ಅವಶ್ಯಕವಾಗಿದ್ದು, ರಾಷ್ಟ್ರೀಯ ಹೆದ್ದಾರಿಯಿಂದ ಈಗಾಗಲೇ ರಸ್ತೆ ವಿಸ್ತರಣೆಗೆ ಅನುಮತಿ ಸಿಕ್ಕಿದ್ದು, ಏ.11 ರಿಂದ ಕಾಮಗಾರಿ ಆರಂಭಿಸಲಾಗುವುದು. ರಸ್ತೆ ವಿಸ್ತರಣೆಯಿಂದ ಕಟ್ಟಡ ಸಾಮಗ್ರಿಗಳು, ಮರಮುಟ್ಟುಗಳಿಗೆ ಹಾನಿಯಾಗಲಿದ್ದು, ಕೂಡಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿಕೊಳ್ಳಬೇಕು.ಅವಶ್ಯಕತೆ ಇದ್ದಲ್ಲಿ ಸ್ಥಳಾಂತರ ಕಾರ್ಯಕ್ಕೆ ಅಗತ್ಯ ನೆರವು ಒದಗಿಸಲಾಗುವುದು ಎಂದು ಡಿಸಿ ಹೇಳಿದರು.
ಭೂ ಪರಿಹಾರಕ್ಕಾಗಿ ನೋಟೀಸ್ ನೀಡಿದ 30 ದಿನಗಳಲ್ಲಿ ಅಗತ್ಯ ದಾಖಲಾತಿ ಸಲ್ಲಿಸಿ ಪರಿಹಾರ ಪಡೆಯಬಹುದು. ಪರಿಹಾರ ಪಡೆದ ನಂತರ ಪರಿಹಾರದ ಮೊತ್ತ ಕಡಿಮೆ ಎನಿಸಿದರೆ 45 ದಿನಗಳ ಒಳಗೆ ಆರ್ಬಿಟರ್ ಮೂಲಕ ಮನವಿ ಸಲ್ಲಿಸಬಹುದು. ಮನವಿ ನ್ಯಾಯುಯುತವಾಗಿದ್ದರೆ, ಹೆಚ್ಚಿನ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಶಾಸಕ ರಘುಪತಿ ಭಟ್ ಮಾತನಾಡಿ, ಭೂಮಿ ಕೆಳದುಕೊಳ್ಳುವ ನಾಗರಿಕರಿಗೆ ಗರಿಷ್ಠ ಮೊತ್ತದ ಪರಿಹಾರ ಸಿಗುತ್ತಿದ್ದು, ಜಿಲ್ಲೆಯ ಅಭಿವೃಧ್ದಿಯ ದೃಷ್ಟಿಯಿಂದ ರಸ್ತೆ ವಿಸ್ತರಣೆ ಕಾಮಗಾರಿ ಅತ್ಯಂತ ಅವಶ್ಯಕವಾಗಿದ್ದು ನಾಗರಿಕರು ಸಹಕರಿಸಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾಗರಾಜ ನಾಯಕ್ ಭೂ ಮಾಲೀಕರಿಗೆ ನೀಡಲಾಗುವ ಪರಿಹಾರದ ಕುರಿತು ಮಾಹಿತಿ ನೀಡಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಪೌರಾಯುಕ್ತ ಉದಯ ಶೆಟ್ಟಿ, ಸಹಾಯಕ ಎಂಂಜಿನಿಯರ್ ಮಂಜುನಾಥ ನಾಯಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.