ಉಡುಪಿ: ಕಡು ಬಡತನದಲ್ಲಿದ್ದರೂ ಸಂಕಷ್ಟದಲ್ಲಿದ್ದ 140 ಕುಟುಂಬಗಳಿಗೆ ನೆರವು ನೀಡಿದ್ದ ಮಲ್ಪೆಯ ಶಾರದಕ್ಕನ ಮನೆಗೆ ಗುರುವಾರ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿದರು.
ಶಾರದಕ್ಕನ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಜಿಲ್ಲಾಧಿಕಾರಿ ‘ಹಣವಿದ್ದವರೆಲ್ಲರೂ ಬಡವರಿಗೆ ಸಹಾಯ ಮಾಡುವುದಿಲ್ಲ. ಆದರೆ, ಶಾರದಕ್ಕ ಸ್ವತಃ ಬಡತನದಲ್ಲಿದ್ದರೂ, ಮನೆ ಕಟ್ಟಿಕೊಳ್ಳಲು ಇಟ್ಟುಕೊಂಡಿದ್ದ ₹ 30 ಸಾವಿರವನ್ನು ವ್ಯಯಿಸಿ ಬಡವರಿಗೆ ಅಕ್ಕಿ ಹಂಚಿದ್ದಾರೆ. ಅದಕ್ಕಾಗಿ ಜಿಲ್ಲಾಡಳಿತ ಅವರಿಗೆ ಅಭಿನಂದನೆ ಸಲ್ಲಿಸುತ್ತದೆ ಎಂದರು.
ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಿರುವ ಶಾರದಕ್ಕನಿಗೆ ಮನೆ ಕಟ್ಟಿಕೊಳ್ಳಲು ಜಿಲ್ಲಾಡಳಿತ ಅಗತ್ಯ ನೆರವು ನೀಡಲಿದೆ. ಸದ್ಯ ಅವರು ವಾಸವಿರುವ ನಿವೇಶನದ ಸಮಸ್ಯೆ ಇದ್ದು, ಮಾಲೀಕರ ಬಳಿ ಮಾತನಾಡಿ, ಇಲ್ಲಿಯೇ ಮನೆ ಕಟ್ಟಿಕೊಳ್ಳಲು ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಇದೇವೇಳೆನಿವೇಶನ ಸಮಸ್ಯೆ ಬಗೆಹರಿಸುವಂತೆ ನಗರಸಭೆ ಪೌರಾಯುಕ್ತರು, ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ‘ಬಡತನದಲ್ಲೂ ಕಷ್ಟಕ್ಕೆ ಮಿಡಿಯುವ ಶಾರದಕ್ಕ’ ಎಂಬ ಶೀರ್ಷಿಕೆಯಡಿ ಪ್ರಜಾವಾಣಿ ಗುರುವಾರ ಸುದ್ದಿ ಪ್ರಕಟಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.