ADVERTISEMENT

ಮಾರುಕಟ್ಟೆ ಬಣ – ಬಣ: ಮೀನುಗಾರರು ಕಂಗಾಲು

ಮೀನುಗಳಿಗೆ ರಾಸಾಯನಿಕ ಲೇಪನ ವದಂತಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2018, 16:41 IST
Last Updated 27 ಜೂನ್ 2018, 16:41 IST
ಕಟಪಾಡಿ ಮೀನು ಮಾರುಕಟ್ಟೆಯಲ್ಲಿ ಗ್ರಾಹಕರಿಗಾಗಿ ಕಾಯುತ್ತಿರುವ ಮೀನು ಮಾರಾಟದ ಮಹಿಳೆಯರು.
ಕಟಪಾಡಿ ಮೀನು ಮಾರುಕಟ್ಟೆಯಲ್ಲಿ ಗ್ರಾಹಕರಿಗಾಗಿ ಕಾಯುತ್ತಿರುವ ಮೀನು ಮಾರಾಟದ ಮಹಿಳೆಯರು.   

ಶಿರ್ವ: ಮೀನುಗಳಿಗೆ ರಾಸಾಯನಿಕ ಬಳಸಿ ಶೇಖರಣೆ ಮಾಡಲಾಗುತ್ತಿದೆ ಎಂಬ ವದಂತಿ ಕರಾವಳಿಯಾದ್ಯಂತ ಹಬ್ಬುತ್ತಿದ್ದಂತೆ ಕರಾವಳಿ ಮೀನು ಮಾರುಕಟ್ಟೆಗಳಲ್ಲಿ ಮಹಿಳಾ ಮೀನುಗಾರರು ವ್ಯಾಪಾರವಿಲ್ಲದೆ ಕಂಗೆಟ್ಟಿದ್ದಾರೆ.

ತಾಜಾ ಮೀನು ದೊರೆಯುತ್ತಿದ್ದರೂ ಹೊರ ರಾಜ್ಯಗಳಲ್ಲಿ ರಾಸಾಯನಿಕ ಬಳಸಿ ಮಾರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಗ್ರಾಹಕರು ಮೀನು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಮಾರುಕಟ್ಟೆ ಖಾಲಿ ಆಗಿ ಬಣಗುಡುತ್ತಿವೆ. ಮೀನು ಮಾರಾಟಗಾರರು ಕಂಗಾಲು ಆಗಿದ್ದಾರೆ.

ಮೀನು ಮಾರುಕಟ್ಟೆಯಲ್ಲಿ ತಾಜಾ ಮೀನು ಮಾರಾಟ ಮಾಡುತ್ತಿದ್ದರು ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ತಾಜಾ ಮೀನು ಸಿಗುತ್ತಿದೆ. ಮುಕ್ತವಾಗಿ ಖರೀದಿ ಮಾಡಬಹುದು ಎಂಬುದು ಮಾರಾಟಗಾರರ ಅಭಿಪ್ರಾಯವಾಗಿದೆ.

ADVERTISEMENT

ಕರಾವಳಿಯ ಮೀನು ಮಾರುಕಟ್ಟೆಗಳಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಮಹಿಳೆಯರು ಮೀನು ವ್ಯಾಪಾರದಲ್ಲಿ ತೊಡಗಿದ್ದಾರೆ. ಯಾವುದೇ ರಾಸಾಯನಿಕ ಬಳಸಿದ ಮೀನುಗಳ ಮಾರಾಟಕ್ಕೆ ಉತ್ತೇಜನ ನೀಡಲ್ಲ. ಹಾಗಾಗಿ ಗ್ರಾಹಕರು ತಾಜಾ ಮೀನು ಖರೀದಿ ಮಾಡಬಹುದು ಎಂದು ಮೀನು ಮಾರಾಟಗಾರರು ಮನವಿ ಮಾಡಿದ್ದಾರೆ.

ಮೀನಿನಂಗಡಿಗಳಲ್ಲಿ ಕೆಲವು ದಿನಗಳ ಕಾಲ ಶೀತಲೀಕರಣದಲ್ಲಿ ಇಡುವ ಮೀನುಗಳ ಬಗ್ಗೆ ಗ್ರಾಹಕರು ಎಚ್ಚರ ವಹಿಸಬೇಕು. ಇಂತಹ ಮೀನುಗಳನ್ನು ಮಹಿಳೆಯರು ಮಾರಾಟ ಮಾಡಲ್ಲ. ಜಿಲ್ಲಾಡಳಿತ ಇಂತಹ ಮೀನಿನಂಗಡಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮಹಿಳಾ ಮೀನುಗಾರರು ಆಗ್ರಹಿಸಿದ್ದಾರೆ.

ತಾಜಾ ಮೀನು ಲಭ್ಯ: ಮೀನು ಮಾರುಕಟ್ಟೆಗಳಲ್ಲಿ ಸಾಂಪ್ರದಾಯಿಕವಾಗಿ ಮಾರಾಟ ಮಾಡುತ್ತಿರುವ ತಾಜಾ ಮೀನುಗಳನ್ನು ವ್ಯಾಪಾರ ಮಾಡಲಾಗುತ್ತಿದೆ. ಎಲ್ಲ ಮೀನು ಮಾರುಕಟ್ಟೆಗಳಲ್ಲಿ ಸಮುದ್ರದಿಂದ ತಂದಿರುವ ಮತ್ತು ಹೊಳೆಯಿಂದ ಹಿಡಿದ ತಾಜಾ ಮೀನು ಮಾರಲಾಗುತ್ತದೆ ಎಂದು ಉಡುಪಿ ತಾಲ್ಲೂಕು ಮಹಿಳಾ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.