ಕಾರ್ಕಳ (ಉಡುಪಿ): ಗೃಹ ಸಚಿವ ಜಿ.ಪರಮೇಶ್ವರ ಮಂಗಳವಾರ ಪತ್ನಿ ಜೊತೆ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾಚಂಡಿಕಾ ಯಾಗದಲ್ಲಿ ಪಾಲ್ಗೊಂಡರು.
ಕ್ಷೇತ್ರದ ಆಡಳಿತ ಮೊಕ್ತೇಸರ ಬಿ.ವಿಘ್ನೇಶ್ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಮಹಾ ಚಂಡಿಕಾಯಾಗ ನಡೆಯಿತು. ಬಳಿಕ ಸಚಿವರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದರು.
ಇದಕ್ಕೆ ಮುನ್ನ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ, ‘ಮಂಗಳೂರಲ್ಲಿ ಬುಧವಾರ ಶಾಂತಿ ಸಭೆ ಕರೆದಿದ್ದೇವೆ. ಅದಕ್ಕೆ ಬರುವಾಗ ಹೆಂಡತಿಯೂ ಬರುತ್ತೇನೆ ಎಂದರು. ಬೇಡ ಅನ್ನೋಕಾಗುತ್ತಾ? ದೇವಸ್ಥಾನಕ್ಕೆ ಬಂದಿದ್ದೇನೆ. ಶಾಸ್ತ್ರೋಕ್ತವಾಗಿ ಜನಕಲ್ಯಾಣ, ಲೋಕಕಲ್ಯಾಣಕ್ಕಾಗಿ ಪೂಜೆ ನಡೆಸಿದ್ದೇನೆ’ ಎಂದರು.
‘ಭೇಟಿಯಲ್ಲಿ ವಿಶೇಷತೆ ಏನೂ ಇಲ್ಲ. ಏನೋ ಕೇಳಲು ಬಂದಿದ್ದೇನೆ ಎಂಬ ಕಲ್ಪನೆ ಬೇಡ. 2012 -13ರಲ್ಲಿ ಇಲ್ಲಿಗೆ ಬಂದಿದ್ದೆ. ಪಕ್ಷದ ಅಧ್ಯಕ್ಷನಾಗಿ ಗೆಲುವಿಗೆ ಪ್ರಾರ್ಥಿಸಿದ್ದೆ. 2013 ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿತ್ತು’ ಎಂದು ಹೇಳಿದರು.
‘ಮೂರನೇ ಬಾರಿಗೆ ಗೃಹ ಖಾತೆ ಸಿಕ್ಕಿದ್ದು, ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ. ಯಾವುದೇ ಬದಲಾವಣೆಯನ್ನು ಬಯಸುವುದಿಲ್ಲ. ತಾವೇ ಐದು ವರ್ಷ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪದೇ ಪದೇ ಆ ಬಗ್ಗೆ ಚರ್ಚೆ ಅನಗತ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.