ADVERTISEMENT

ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ: ಈಶ್ವರಪ್ಪ ಬಂಧನವಾಗಲಿ ಎಂದ ಜಿ.ಪರಮೇಶ್ವರ್‌

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 12:51 IST
Last Updated 16 ಏಪ್ರಿಲ್ 2022, 12:51 IST
ಜಿ.ಪರಮೇಶ್ವರ್
ಜಿ.ಪರಮೇಶ್ವರ್   

ಉಡುಪಿ: ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಶಾಸಕ ಜಿ.ಪರಮೇಶ್ವರ್ ಒತ್ತಾಯಿಸಿದರು.

ಶನಿವಾರ ಅಂಬಲಪಾಡಿಯಲ್ಲಿ ಮಾತನಾಡಿ, ‘ಡೆತ್‌ನೋಟ್‌ನಲ್ಲಿ ಈಶ್ವರಪ್ಪಗೆ ಶಿಕ್ಷೆಯಾಗಬೇಕು ಎಂದು ಬರೆದಿದ್ದು, ಅದರಂತೆ ಬಂಧನವಾಗಬೇಕು. ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಕೆ.ಜೆ.ಜಾರ್ಜ್ ಪ್ರಕರಣ ಹಾಗೂ ಈಶ್ವರಪ್ಪ ಪ್ರಕರಣ ಬೇರೆ ಬೇರೆಯಾಗಿದ್ದು, ಆರೋಪ ಬಂದ ಕೂಡಲೇ ಜಾರ್ಜ್ ರಾಜೀನಾಮೆ ನೀಡಿದ್ದರು. ಸಿಬಿಐ ತನಿಖೆ ಕೂಡ ನಡೆಯಿತು. ಅದರಂತೆ, ಸಂತೋಷ್ ಪಾಟೀಲ ಪ್ರಕರಣವೂ ತನಿಖೆಯಾಗಲಿ. ಸದ್ಯ ಪ್ರಮುಖ ಆರೋಪಿಯನ್ನು ಬಂಧಿಸಲಿ ಎಂದು ಪರಮೇಶ್ವರ್ ಹೇಳಿದರು.

ಸರ್ಕಾರ ಶೇ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿರುವುದಾಗಿ ಅಧಿಕೃತ ಸಂಸ್ಥೆಯ ಅಧ್ಯಕ್ಷರೇ ಆರೋಪ ಮಾಡಿ ಕ್ರಮಕ್ಕೆ ಪ್ರಧಾನಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದು ಕುಟುಕಿದರು.

ಜಾತಿಯ ಕಾರಣಕ್ಕೆ ಬಾಲ್ಯದಿಂದಲೂ ಅವಮಾನ, ತಾರತಮ್ಯ ಅನುಭವಿಸಿಕೊಂಡು ಬಂದಿದ್ದು, ಕಾನೂನಿನ ಮೂಲಕ ಎಲ್ಲವನ್ನೂ ಸರಿಪಡಿಸಲಾಗುವುದಿಲ್ಲ. ಜನರ ಮನಸ್ಸು ಪರಿವರ್ತನೆಯಾಗೇಕು. 21ನೇ ಶತಮಾನದಲ್ಲಾದರೂ ಸಮಾಜ ಬದಲಾವಣೆಯಾಗಬೇಕು ಎಂಬ ಉದ್ದೇಶದಿಂದ ಹಿಂದೆ ಅನುಭವಿಸಿದ ಕೆಲವು ಘಟನೆಗಳನ್ನು ಈಚೆಗೆ ಹಂಚಿಕೊಂಡಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.