ಉಡುಪಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪಡುಬಿದ್ರಿಯ ಪಾದೆಬೆಟ್ಟುವಿನ ಸಂದೇಶ್ ಶೆಟ್ಟಿ ಹಾಗೂ ಕಂಚಿನಡ್ಕ ಗ್ರಾಮದ ಯುವರಾಜ್ ಕುಲಾಲ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಶಕ್ಕೆ ಪಡೆದವರು ಹಿಂದೂ ಜಾಗರಣ ವೇದಿಕೆಯಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಸಿವಿಲ್ ಡ್ರೆಸ್ನಲ್ಲಿ ಬಂದ ಸಿಸಿಬಿ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳ ಜತೆಗೆ ಸಂದೇಶ್ ಶೆಟ್ಟಿ ಹಾಗೂ ಯುವರಾಜ್ ಕುಲಾಲ್ಗೆ ನಿಕಟ ಸಂಪರ್ಕವಿತ್ತು ಎನ್ನಲಾಗಿದೆ.
ಸಂದೇಶ್ ಶೆಟ್ಟಿ ಪಾದೆಬೆಟ್ಟುವಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕೆಲಸ ಮಾಡುತ್ತಿದ್ದರು. ಹಿಂದೆ, ಪಡುಬಿದ್ರಿಯಲ್ಲಿ ಪತಂಜಲಿ ಉತ್ಪನ್ನಗಳ ಮಾರಾಟ ಮಳಿಗೆ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.
ಯುವರಾಜ್ ಕುಲಾಲ್ ಬೆಳ್ತಂಗಡಿಯವರಾಗಿದ್ದು, 10 ವರ್ಷಗಳಿಂದ ಪಡುಬಿದ್ರಿಯಲ್ಲೇ ನೆಲೆಸಿ, ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದರು. ಸಂದೇಶ್ ಶೆಟ್ಟಿ ಹಾಗೂ ಯುವರಾಜ್ ಕುಲಾಲ್ ಆಪ್ತ ಸ್ನೇಹಿತರು ಎಂಬ ಮಾಹಿತಿ ಲಭ್ಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.