
ಶಿರ್ವ: ದೇಶದ ಎಲ್ಲಾ ಕಡೆ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ನಾವು ಜಾಗೃತರಾಗಿ ನಡೆನುಡಿ ಆಚರಣೆಯಲ್ಲಿ ಹಿಂದುತ್ವ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬ ಹಿಂದೂ ಪೂರ್ಣ ಪ್ರಮಾಣದಲ್ಲಿ ಜಾಗೃತನಾದಾಗ ಹಿಂದುತ್ವದ ಅಸ್ತಿತ್ವ ಸದೃಢವಾಗುತ್ತದೆ ಎಂದು ಕುತ್ಯಾರು ಆನೆಗುಂದಿ ಮಹಾ ಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಕುತ್ಯಾರು ಪರಶುರಾಮೇಶ್ವರ ಕ್ಷೇತ್ರದ ಭಾರ್ಗವ ಭವನದಲ್ಲಿ ಕಾಪು ತಾಲ್ಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಧಾರ್ಮಿಕ ಕೇಂದ್ರಗಳಲ್ಲಿ ವಸ್ತ್ರಸಂಹಿತೆ ಅತಿ ಅಗತ್ಯ. ಯುವಪೀಳಿಗೆಗೆ ನಮ್ಮ ಸಂಪ್ರದಾಯ ಕಲಿಸಿ. ಸಂಸ್ಕೃತಿ ಬೆಳೆಸುವ ಕಾರ್ಯ ಮನೆಯಿಂದಲೇ ಆಗಬೇಕು ಎಂದರು.
ಕರ್ನಾಟಕ ರಾಜ್ಯ ದೇವಸ್ಥಾನ ಸಂವರ್ಧನಾ ಸಮಿತಿ ರಾಜ್ಯ ಸಂಚಾಲಕ ಮನೋಹರ ಮಠದ್ ಮಾತನಾಡಿ, ಸಜ್ಜನರ ನಿಷ್ಕ್ರಿಯತೆಯಿಂದ ದುರ್ಜನರು ಸಕ್ರಿಯರಾಗಿದ್ದಾರೆ. ಅನೇಕ ದೇಶಭಕ್ತರು, ಕ್ರಾಂತಿಕಾರರ ತ್ಯಾಗ, ಬಲಿದಾನದಿಂದ ನಮ್ಮ ಅಸ್ತಿತ್ವ ಉಳಿದಿದೆ. ಹಿಂದೂ ಧರ್ಮ ಜಗತ್ತಿನ ಕಲ್ಯಾಣವನ್ನು ಬಯಸುತ್ತದೆ. ಆತ್ಮ ಜ್ಯೋತಿ ಜಾಗೃತ ಆಗಬೇಕು ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿದ್ದರು. ಕುತ್ಯಾರು ಮಂಡಲ ಸಂಚಾಲಕ ಸಾಯಿನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಯೋಜನಾ ಸಮಿತಿಯ ಕಾಪು ತಾಲ್ಲೂಕು ಉಪಾಧ್ಯಕ್ಷ ಜಿನೇಶ್ ಬಲ್ಲಾಳ್ ಕುತ್ಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪವನ್ ಕುಮಾರ್ ಸ್ವಾಗತಿಸಿದರು. ಪ್ರವೀಣ್ ಆಚಾರ್ಯ ನಿರೂಪಿಸಿದರು. ಮಾನುಷ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.