ADVERTISEMENT

ಧರ್ಮಗಳಿಗೆ ನೋವುಂಟು ಮಾಡಿದರೆ ಒಳ್ಳೆಯಾಗುವುದಿಲ್ಲ: ಶೋಭಾ ಕರಂದ್ಲಾಜೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 15:10 IST
Last Updated 17 ಸೆಪ್ಟೆಂಬರ್ 2021, 15:10 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಉಡುಪಿ: ಯಾವುದೇ ಸಮುದಾಯ ಅಥವಾ ಧರ್ಮಗಳಿಗೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗುವುದಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ದೇವಸ್ಥಾನ ಧ್ವಂಸ ವಿಚಾರದಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆಯ ವಿಚಾರವಾಗಿ ಉಡುಪಿಯಲ್ಲಿ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಶ್ರದ್ಧಾ ಕೇಂದ್ರಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಅಕ್ರಮ ಸ್ಥಳಗಳಲ್ಲಿ ಶ್ರದ್ಧಾ ಕೇಂದ್ರಗಳು ನಿರ್ಮಾಣವಾಗಿದ್ದರೆ ಪೂರ್ವ ಸೂಚನೆ ನೀಡಬೇಕು. ತೆರವುಗೊಳಿಸುವುದು ಸಲ್ಲದು ಎಂದರು.

ರಾಜ್ಯದಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗಳ ಮೇಲೆ ಜನರು ಹೆಚ್ಚು ನಂಬಿಕೆ ಇಟ್ಟುಕೊಂಡಿರುತ್ತಾರೆ. ಭಕ್ತಿ ಭಾವ ಹೆಚ್ಚಾಗಿರುತ್ತದೆ. ಶ್ರದ್ಧಾ ಕೇಂದ್ರಗಳು ತೆರವಾದಾಗ ಜನರ ಭಾವನೆಗಳಿಗೆ ಸಹಜವಾಗಿ ನೋವಾಗುತ್ತದೆ, ಪ್ರತಿಯಾಗಿ ಪ್ರತಿಭಟನೆ ನಡೆಸುತ್ತಾರೆ. ಅಕ್ರಮ ದೇವಾಲಯಗಳ ನಿರ್ಮಾಣ ಮಾಡಿರುವುದು ಕಂಡು ಬಂದರೆ ಸ್ಥಳೀಯ ಊರಿನ ಜನರ ಮನವೊಲಿಸಬೇಕು. ದೇವಸ್ಥಾನಗಳ ನಿರ್ಮಾಣಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಆನಂತರ ತೆರವು ಮಾಡುವ ಬಗ್ಗೆ ಸರ್ಕಾರ ಯೋಚಿಸಬೇಕು ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ADVERTISEMENT

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್ ಸೇರಿಸುವ ವಿಚಾರವಾಗಿ ಪ್ರತಿಯಿಸಿದ ಸಚಿವೆ ಶುಕ್ರವಾರ ಲಖನೌನಲ್ಲಿ ಜಿಎಸ್‌ಐ ಕೌನ್ಸಿಲ್ ಮಹತ್ವದ ಸಭೆ ನಡೆಯುತ್ತಿದೆ. ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್ ಬಂದರೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲ ಆಗಬಹುದು. ಪ್ರಧಾನಿ ನರೇಂದ್ರ ಮೋದಿ ಅವರೂ ಇದೇ ಪ್ರಯತ್ನದಲ್ಲಿದ್ದಾರೆ. ಸಭೆಯಲ್ಲಿ ಜನರ ಪರವಾಗಿ ಕೈಗೊಳ್ಳಬಹುದಾದ ನಿರ್ಧಾರವನ್ನು ದೇಶ ಸ್ವಾಗತಿಸುತ್ತದೆ‌ ಎಂಬ ನಂಬಿಕೆ ಇದೆ ಎಂದರು.

ಮತಾಂತರ ತಡೆ ಕಾನೂನು:ಮತಾಂತರ ಕೇವಲ ಕರಾವಳಿಯಲ್ಲಿ ಮಾತ್ರವಲ್ಲ, ದೇಶದ ಹಲವು ಭಾಗಗಳಲ್ಲೂ ನಡೆಯುತ್ತಿದೆ. ಹಿಂದೂಗಳ ದುರ್ಬಲತೆಯನ್ನು ದುರುಪಯೋಗಪಡಿಸಿಕೊಂಡು ಮತಾಂತರ ನಡೆಸಲಾಗುತ್ತಿದೆ. ಮತಾಂತರ ತಡೆಗೆ ಕಾನೂನು ಕಠಿಣವಾಗಬೇಕು. ಮತಾಂತರ ತಡೆಗೆ ಅಗತ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.