ಕಾರ್ಕಳ: ತಾಲ್ಲೂಕಿನ ಹೆದ್ದಾರಿಗಳಲ್ಲಿ ಇದೀಗ ಪ್ರಯಾಣಿಸುವುದು ಸಂಕಷ್ಟದಾಯಕವೆನಿಸಿದ್ದು, ಸಾಣೂರು ಬಿಕರ್ನಕಟ್ಟೆ ಚತುಷ್ಪಥ ಹೆದ್ದಾರಿಯು ಸಮಸ್ಯೆಗಳ ಆಗರವಾಗಿದೆ.
ಈ ಬಾರಿ ಅವಧಿಗಿಂತ ಮುನ್ನವೇ ಮಳೆಗಾಲ ಪ್ರಾರಂಭವಾಗಿದ್ದು, ಚರಂಡಿ ವ್ಯವಸ್ಥೆ ಇಲ್ಲದೆ ರಾಷ್ಟ್ರೀಯ ಹೆದ್ದಾರಿಯ ಇಕ್ಕಲೆಗಳಲ್ಲಿರುವ ಮನೆ, ಅಂಗಡಿಗಳಿಗೆ ಮಳೆ ನೀರು ನುಗ್ಗಿ, ಅಪಾರ ಹಾನಿ ಸಂಭವಿಸಿದೆ.
ಹೆದ್ದಾರಿಯ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡು ಪ್ರಯಾಣ ಪ್ರಯಾಸದಾಯಕವಾಗಿದೆ. ಕಾರ್ಕಳದಲ್ಲಿ ಸುಮಾರು 2 ಕಿ. ಮೀ. ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಇನ್ನೂ ಪ್ರಸ್ತಾವನೆ ಅಂಗೀಕಾರ ಆಗಿಲ್ಲದಿರುವುದರಿಂದ ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕದ ಅಡ್ಡರಸ್ತೆಯಿಂದ ವಾಹನಗಳು ಮತ್ತು ಜನರು ನೇರವಾಗಿ ರಾಷ್ಟ್ರೀಯ ಹೆದ್ದಾರಿಗೆ ಬರುತ್ತಿದ್ದು ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿವೆ.
ಹೆದ್ದಾರಿಯಲ್ಲಿ ಬೀದಿ ದೀಪಗಳಿಲ್ಲದಿರುವುದರಿಂದ ರಾತ್ರಿ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ. ತಿರುವುಗಳಲ್ಲಿ ಪ್ರಯಾಣಿಕರಿಗೆ ಗೊಂದಲವಾಗದಂತೆ ಬ್ಲಿಂಕರ್, ಬೆಳಕಿನ ವ್ಯವಸ್ಥೆ, ಫ್ಲೋರಸೆಂಟ್ ಸ್ಟಿಕ್ಕರ್ರ್ಗಳನ್ನು ಅಳವಡಿಸಬೇಕಾಗಿದೆ.
ಸಾಣೂರು ರಾಷ್ಟ್ರೀಯ ಹೆದ್ದಾರಿಯ ಹೊಸ ಸೇತುವೆಗೆ ಪಿಲ್ಲರ್ ನಿರ್ಮಾಣ ಕಾರ್ಯ ನಡೆಯುತ್ತಿರುವಲ್ಲಿ ಸುತ್ತಲೂ ಮಣ್ಣಿನ ರಾಶಿ ಹಾಕಿರುವುದರಿಂದ ಮಳೆನೀರು ಪಕ್ಕದ ಗದ್ದೆಗಳಿಗೆ ನುಗ್ಗಿ ನೆರೆ ಉಂಟಾಗಿದೆ. ಇದರಿಂದ ಕೃಷಿ ಕಾರ್ಯಕ್ಕೂ ತೊಂದರೆಯಾಗಿದೆ.
ರಸ್ತೆ ಕಾಮಗಾರಿ ನಡೆಯುವ ಅಕ್ಕಪಕ್ಕದಲ್ಲಿ ಮಣ್ಣು, ಕಬ್ಬಿಣದ ಸಾಮಗ್ರಿಗಳನ್ನು ಅಲ್ಲಲ್ಲಿ ರಾಶಿ ಹಾಕಲಾಗಿದ್ದು, ಮಳೆಗಾಲದಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದೆ. ಅವುಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಬಸ್ ತಂಗುದಾಣ ಕಿತ್ತು ಹಾಕಲಾಗಿದ್ದು, ಈಗ ಜನರಿಗೆ ಸಮಸ್ಯೆಯಾಗಿದೆ. ಮುರತಂಗಡಿ ಇರ್ವತ್ತೂರು ಜಂಕ್ಷನ್ನಲ್ಲಿ ಅಪೂರ್ಣಗೊಂಡಿರುವ ಸರ್ವಿಸ್ ರಸ್ತೆ ಪೂರ್ಣಗೊಳಿಸಬೇಕು. ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಹೈ ಮಾಸ್ಟ್ ದೀಪ ಅಳವಡಿಸಬೇಕು. ಸಾಣೂರು ಫುಲ್ಕೇರಿ ಬೈಪಾಸ್ ವೃತ್ತದ ಬಳಿ ಹೆದ್ದಾರಿಯ ಎರಡೂ ಕಡೆಗಳಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆಯಿಲ್ಲದೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಈಚೆಗೆ ಖಾಸಗಿ ವ್ಯಕ್ತಿಗಳು ತಾವೇ ಮುತುವರ್ಜಿ ವಹಿಸಿ ನೀರು ಹರಿಯಲು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರು.
ಹೊಂಡಮಯ ರಸ್ತೆ
ಬಜ್ಪೆ ಅತ್ರಾಡಿ ರಾಜ್ಯ ಹೆದ್ದಾರಿಯ ಮುಂಡ್ಕೂರು ಗ್ರಾಮದ ಪಡಿತ್ತಾರು ಸೇತುವೆ ಭಾಗದಲ್ಲಿ ರಸ್ತೆ ಸಂಪೂರ್ಣ ಹೊಂಡದಿಂದ ಕೂಡಿದೆ. ಇಲ್ಲಿಯೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು ದೊಡ್ಡ ಗಾತ್ರದ ಹೊಂಡ ನಿರ್ಮಾಣವಾಗಿದೆ. ಬೆಳ್ಮಣ್ನಿಂದ ಮುಂಡ್ಕೂರು ಕಿನ್ನಿಗೋಳಿ ಕಟೀಲು ಮೂಡಬಿದಿರೆ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಹೆಚ್ಚಿನ ವಾಹನ ಸವಾರರು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಅಪಘಾತ ಸಂಭವಿಸುವ ಮೊದಲೇ ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯಾಡಳಿತ ಈ ಕುರಿತು ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.