ADVERTISEMENT

ಕಾರ್ಕಳ: ಮಕ್ಕಳಿಗೆ ₹ 1 ಸಾವಿರ ಪ್ರೋತ್ಸಾಹಧನ

ನಂದಳಿಕೆ ಸರ್ಕಾರಿ ಪ್ರಾಥಮಿಕ ಶಾಲೆ ಉಳಿಸಲು ಹಳೆ ವಿದ್ಯಾರ್ಥಿಗಳ ವಿನೂತನ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 1 ಮೇ 2022, 6:13 IST
Last Updated 1 ಮೇ 2022, 6:13 IST
ಕಾರ್ಕಳ ತಾಲ್ಲೂಕಿನ ನಂದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಕಾರ್ಕಳ ತಾಲ್ಲೂಕಿನ ನಂದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   

ಕಾರ್ಕಳ: ಇಂಗ್ಲಿಷ್ ಮಾಧ್ಯಮ ಶಾಲೆಗಳ ಭರಾಟೆಯ ನಡುವೆ ಕನ್ನಡ ಶಾಲೆಗಳು ಮುಚ್ಚುತ್ತಾ ಬರುತ್ತಿರುವ ವಿಷಯ ಹೊಸದೇನಲ್ಲ. ಕನ್ನಡ ಶಾಲೆಯಲ್ಲೇ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ, ಉನ್ನತ ಉದ್ಯೋಗ ಹಾಗೂ ಘನತೆ ಸಾಧಿಸಿದ ಹತ್ತಾರು ಮಂದಿ ಕನ್ನಡ ಶಾಲೆಯ ಕುರಿತು ಅಭಿಮಾನವನ್ನು ಇಟ್ಟುಕೊಂಡವವರೂ ಬಹಳಷ್ಟು ಮಂದಿ ಇದ್ದಾರೆ.

ತಾಲ್ಲೂಕಿನ ನಂದಳಿಕೆ ಎಂಬ ಗ್ರಾಮೀಣ ಪ್ರದೇಶದ ಅದರಲ್ಲೂ ಶತಮಾನದ ಹೊಸ್ತಿಲಲ್ಲಿರುವ ಏಕೈಕ ಕನ್ನಡ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಶಾಲೆಯ ಹಳೆವಿದ್ಯಾರ್ಥಿಗಳು ಮುಂದಾಗಿದ್ದಾರೆ. ವಿನೂತನ ಯೋಜನೆಯನ್ನು ಹಮ್ಮಿಕೊಂಡು ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಸೆಳೆಯಲು ವಿಶೇಷ ಪ್ರಯತ್ನ ನಡೆಸಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷದ ಆರಂಭದಿಂದ ಈ ನಂದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರ್ಪಡೆಗೊಳ್ಳಲಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ₹ 1 ಸಾವಿರ ಪ್ರೋತ್ಸಾಹಧನ ನೀಡಲು ಯೋಜನೆ ಹಾಕಲಾಗಿದೆ. ಈ ಮೂಲಕ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸಲಾಗಿದೆ.

ADVERTISEMENT

ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಾಲಚಂದ್ರ ಶೆಟ್ಟಿ ನೇತೃತ್ವದಲ್ಲಿ ವಿಶೇಷ ಕೊಡುಗೆ ಪರಿಚಯಿಸಲಾಗಿದೆ. ಸರ್ಕಾರಿ ಶಾಲೆಯ ಯಾವುದೇ ತರಗತಿಗೆ ವಿದ್ಯಾರ್ಥಿ ದಾಖಲಾತಿ ಪಡೆದರೆ ದಾಖಲಾತಿ ಹೊಂದಿದ ಪ್ರತಿ ವಿದ್ಯಾರ್ಥಿಗೆ ಹಳೆವಿದ್ಯಾರ್ಥಿ ಸಂಘದ ಮೂಲಕ ವಿಶೇಷ ಪ್ರೋತ್ಸಾಹಧನ ನೀಡಲಾಗುವುದು ಎಂದು ಸಂಘ ತಿಳಿಸಿದೆ.

ಏಕೈಕ ಕನ್ನಡ ಶಾಲೆ: ಈ ಪ್ರಾಥಮಿಕ ಶಾಲೆ (ಬೋರ್ಡು ಶಾಲೆ) ನಂದಳಿಕೆ ಗ್ರಾಮದಲ್ಲಿರುವ ಏಕೈಕ ಸರ್ಕಾರಿ ಕನ್ನಡ ಶಾಲೆಯಾಗಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ–ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಅಲ್ಲದೆ, ಸರ್ಕಾರಿ ಸೇವೆಯಲ್ಲಿ, ಸರ್ಕಾರಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿವವರು ಹಲವರಿದ್ದಾರೆ. ಅವರೆಲ್ಲ ತಮ್ಮ ಶಾಲಾ ಶಿಕ್ಷಣದ ಕುರಿತು ಅಭಿಮಾನ ಹೊಂದಿದ್ದಾರೆ.

ಶಾಲೆಯಲ್ಲಿ ಪ್ರಸ್ತುತ 64 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ನಾಲ್ವರು ಸರ್ಕಾರಿ ಶಿಕ್ಷಕರು ಮತ್ತು ಇಬ್ಬರು ಗೌರವ ಶಿಕ್ಷಕರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.