ADVERTISEMENT

ಕೆಎಂಸಿ ನರ್ಸಿಂಗ್ ವಿಭಾಗಕ್ಕೆ ಎನ್‌ಎಬಿಎಚ್ ಗರಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 12:46 IST
Last Updated 21 ಅಕ್ಟೋಬರ್ 2021, 12:46 IST
ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅವರು ಗರುವಾರ ಕೆಎಂಸಿ ಆಸ್ಪತ್ರೆಯ ನರ್ಸಿಂಗ್ ಸೇವೆಗಳ ವಿಭಾಗದ ಮುಖ್ಯಸ್ಥರಾದ ಡಾ.ಶುಭ ಸೂರಿಯ ಅವರಿಗೆ ಎನ್‌ಎಬಿಎಚ್‌ ಶ್ರೇಷ್ಠತಾ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.
ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅವರು ಗರುವಾರ ಕೆಎಂಸಿ ಆಸ್ಪತ್ರೆಯ ನರ್ಸಿಂಗ್ ಸೇವೆಗಳ ವಿಭಾಗದ ಮುಖ್ಯಸ್ಥರಾದ ಡಾ.ಶುಭ ಸೂರಿಯ ಅವರಿಗೆ ಎನ್‌ಎಬಿಎಚ್‌ ಶ್ರೇಷ್ಠತಾ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.   

ಉಡುಪಿ: ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ನರ್ಸಿಂಗ್ ವಿಭಾಗಕ್ಕೆ ಎನ್‌ಎಬಿಎಚ್‌ (ರಾಷ್ಟ್ರೀಯ ಆಸ್ಪತ್ರೆ ಮತ್ತು ಆರೋಗ್ಯ ಪೂರೈಕೆದಾರರ ಸಂಘ) ಶ್ರೇಷ್ಠತಾ ಪ್ರಮಾಣ ಪತ್ರ ಲಭಿಸಿದೆ.

ಭಾರತೀಯ ಗುಣಮಟ್ಟ ಮಂಡಳಿ ನೀಡಿರುವ ಪ್ರಮಾಣ ಪತ್ರವನ್ನು ಗುರುವಾರ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅವರು ಆಸ್ಪತ್ರೆಯ ನರ್ಸಿಂಗ್ ಸೇವೆಗಳ ವಿಭಾಗದ ಮುಖ್ಯಸ್ಥರಾದ ಡಾ.ಶುಭ ಸೂರಿಯ ಅವರಿಗೆ ಹಸ್ತಾಂತರಿಸಿ ಮಾತನಾಡಿ, ‘ಶುಶ್ರೂಷಾ ಶ್ರೇಷ್ಠತೆಗೆ ಎನ್‌ಎಬಿಎಚ್‌ ಗೌರವ ದೊರೆತಿರುವುದು ಹೆಮ್ಮೆಯ ವಿಚಾರ. ರೋಗಿಗಳಿಗೆ ಆರೈಕೆ ನೀಡುವಲ್ಲಿ ದಾದಿಯರು ನಿರ್ಣಾಯಕ ಪಾತ್ರ ವಹಿಸುತ್ತಿರುವುದರಿಂದ ಪ್ರಶಸ್ತಿಗೆ ಅವರು ನಿಜಕ್ಕೂ ಅರ್ಹರು’ ಎಂದರು.

ಈ ಸಂದರ್ಭ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ, ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ ಶೆಟ್ಟಿ, ಗುಣಮಟ್ಟ ಅನುಷ್ಠಾನ ಸಲಹೆಗಾರರಾದ ಡಾ. ಸುನೀಲ್ ಸಿ.ಮುಂಡ್ಕೂರ್ ಮತ್ತು ಜಿಬು ಥಾಮಸ್ ಇದ್ದರು.

ADVERTISEMENT

ರೋಗಿಗಳ ಆರೈಕೆ, ಶಿಕ್ಷಣ ಮತ್ತು ಜಾಗೃತಿ, ಸಂಪನ್ಮೂಲ ನಿರ್ವಹಣೆ, ಗುಣಮಟ್ಟ,ಸಂವಹನ,ಮಾರ್ಗದರ್ಶನ ಮತ್ತು ಸೋಂಕು ನಿಯಂತ್ರಣ ಅಭ್ಯಾಸ ಸೇರಿದಂತೆ ಶುಶ್ರೂಷಾ ಆರೈಕೆ ವಿಭಾಗದ ಎಲ್ಲ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಂಸ್ಥೆಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ.

ನರ್ಸಿಂಗ್ ಎಕ್ಸಲೆನ್ಸ್ ಪ್ರತಿಷ್ಠಿತ ಪ್ರಮಾಣೀಕರಣವಾಗಿದ್ದು, ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ,ರೋಗಗಳ ತಡೆಗಟ್ಟುವಿಕೆ ಹಾಗೂ ಸಮಗ್ರ ಶುಶ್ರೂಷೆಯ ಗುರಿಯೊಂದಿಗೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಈ ಪ್ರಶಸ್ತಿಯನ್ನು ಕೊಡುತ್ತದೆ ಎಂದು ಆಸ್ಪತ್ರೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.