ADVERTISEMENT

ಉಡುಪಿ: ದೇವರ ದರ್ಶನ ಆರಂಭ, ನಿರೀಕ್ಷೆ ತಲುಪದ ಭಕ್ತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 11:58 IST
Last Updated 8 ಜೂನ್ 2020, 11:58 IST
ಕುಂದಾಪುರ ಸಮೀಪದ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ಸೋಮವಾರದಿಂದ ದೇವರ ದರ್ಶನ ಪ್ರಾರಂಭವಾಗಿದೆ
ಕುಂದಾಪುರ ಸಮೀಪದ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ಸೋಮವಾರದಿಂದ ದೇವರ ದರ್ಶನ ಪ್ರಾರಂಭವಾಗಿದೆ   
ಕುಂದಾಪುರ: ರಾಜ್ಯದಾದ್ಯಂತ ಭಕ್ತರಿಗೆ ದೇಗುಲಗಳಲ್ಲಿ ದೇವರ ದರ್ಶನಕ್ಕೆ ಸರ್ಕಾರ ಅನುಮತಿ ನೀಡಿರುವುದರಿಂದ ಸೋಮವಾರದಿಂದ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ಅಗತ್ಯ ಆರೋಗ್ಯ ಸುರಕ್ಷಾ ಕ್ರಮಗಳೊಂದಿಗೆ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸೋಂಕು ಹರಡದಂತೆ ದೇವಸ್ಥಾನದ ಆಡಳಿತಮಂಡಳಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.ದೇಗುಲದ ಹೊರ ಪೌಳಿಯ ಮುಖ್ಯ ದ್ವಾರದಿಂದ ಒಳ ಪ್ರವೇಶಿಸುವ ಭಕ್ತರು ದೇಹದ ಉಷ್ಣತೆಯನ್ನು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಂಡು, ಲೋಹ ಶೋಧಕ ಯಂತ್ರದ ಮೂಲಕ ಒಳ ಪ್ರವೇಶಿಸಿದ ಬಳಿಕ, ಕೈ ಗಳಿಗೆ ಸ್ಯಾನಿಟೈಸರ್‌ ಬಳಿದು ಶುಚಿಗೊಳಿಸಲಾಗುತ್ತದೆ. ಬಳಿಕ ಸಾಲಿನಲ್ಲಿ ಅಂತರವನ್ನು ಕಾಯ್ದುಕೊಂಡು ಗರ್ಭಗುಡಿಯ ಎದುರಿನ ಮುಖ್ಯ ದ್ವಾರದ ಮೂಲಕ ದೇವಿಯ ದರ್ಶನಕ್ಕೆ ಅವಕಾಶ ಮಾಡಲಾಗಿದೆ.
ಸೋಮವಾರ ಬೆಳಿಗ್ಗೆಯಿಂದಲೇ ಪೂಜಾ ವಿಧಿ ಮುಗಿದ ಬಳಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದರೂ, ಮೊದಲ ದಿನ ನಿರೀಕ್ಷೆಯ ಸಂಖ್ಯೆ ಯಲ್ಲಿ ಭಕ್ತರು ಬಂದಿರಲಿಲ್ಲ. ಲಾಕ್‌ಡೌನ್ ನಿರ್ಬಂಧಕ್ಕೆ ಮೊದಲು ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದ ಭಕ್ತರ ಸಂಖ್ಯೆ ಈಗ ನೂರರ ಮಿತಿಯಲ್ಲಿದೆ.ಸೋಮವಾರ ಹೊರ ರಾಜ್ಯಗಳಿಂದ ಬಂದಿದ್ದ ಭಕ್ತರು ಕಾಣಿಸಲಿಲ್ಲ. ಪೂಜಾ ಸೇವೆ, ತೀರ್ಥ ಪ್ರಸಾದಕ್ಕೆ ಅವಕಾಶವಿರಲಿಲ್ಲ.
ಎರಡು ತಿಂಗಳುಗಳ ಬಳಿಕ ದೇಗುಲ ತೆರೆದಿರುವುದರಿಂದ ದೇವಸ್ಥಾನದ ನೌಕರ ವೃಂದದ ವತಿಯಿಂದ ಹೂವಿನ ಅಲಂಕಾರ ಹಾಗೂ ಚಂಡಿಕಾ ಹೋಮ ನಡೆಯಿತು.
ಬಾಗಿಲು ತೆರೆದ ದೇವಾಲಯಗಳು:ತಾಲ್ಲೂಕಿನ ಕುಂಭಾಸಿ ಆನೆಗುಡ್ಡೆ, ಹಟ್ಟಿಯಂಗಡಿಯ ವಿನಾಯಕ, ಕ್ರೋಢ ಶಂಕರನಾರಾಯಣ, ಆನಗಳ್ಳಿಯ ದತ್ತಾಶ್ರಮ. ಸೌಕೂರು ದುರ್ಗಾಪರಮೇಶ್ವರಿ, ಬಸ್ರೂರು ಮಹಾಲಿಂಗೇಶ್ವರ, ಕುಂದಾಪುರದ ಕುಂದೇಶ್ವರ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ಸರ್ಕಾರದ ನಿಯಮಾವಳಿಯಂತೆ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಮುಂಜಾಗ್ರತಾ ಕ್ರಮ
ಸೋಮವಾರ ದೇವಸ್ಥಾನಗಳ ಮೇಲಿನ ನಿರ್ಭಂದ ಸಡಿಲು ಮಾಡಿದ ಪರಿಣಾಮ ಬ್ರಹ್ಮಾವರ ಪರಿಸರದ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟದ ಮಹಾಲಿಂಗೇಶ್ವರ ದೇವಸ್ಥಾನ, ಬಾರ್ಕೂರಿನ ಬಟ್ಟೆ ವಿನಾಯಕ ದೇವಸ್ಥಾನಗಳಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲಾಯಿತು. ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಅಷ್ಟೇನೂ ಕಂಡು ಬಂದಿರಲಿಲ್ಲ. ಪೊಲೀಸ್ ಸಿಬ್ಬಂದಿ ನೇಮಿಸಿ ಮಾಸ್ಕ್, ಸ್ಯಾನಿಟೈಸರ್ ಬಳಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕೇವಲ ಗಂಧಪ್ರಸಾದವನ್ನು ಮಾತ್ರ ಭಕ್ತರಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.