ಉಡುಪಿ: ಮಣಿಪಾಲದ ಆರ್ಎಸ್ಬಿ ಸಭಾಭವನದಲ್ಲಿ ಮಾರ್ಚ್ 20 ಹಾಗೂ 21ರಂದು ಕೊಂಕಣಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನಾ ಸಮಿತಿಯ ಗಣೇಶ್ ಪ್ರಸಾದ್ ನಾಯಕ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಸಮ್ಮೇಳನವನ್ನು ಸಚಿವ ಅರವಿಂದ ಲಿಂಬಾವಳಿ ಉದ್ಘಾಟಿಸಲಿದ್ದಾರೆ ಎಂದರು.
ಸಮ್ಮೇಳನ ಸಂಘಟಿಸಲು ಸಮಿತಿ ರಚನೆ ಮಾಡಲಾಗಿದ್ದು, ಸಮಿತಿಯ ಗೌರವಾಧ್ಯಕ್ಷರನ್ನಾಗಿ ಗೋಕುಲದಾಸ್ ನಾಯಕ್, ಅಧ್ಯಕ್ಷರನ್ನಾಗಿ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಜಗದೀಶ್ ಪೈ, ಕಾರ್ಯಾಧ್ಯಕ್ಷರನ್ನಾಗಿ ಮಹೇಶ್ ಠಾಕೂರ್, ಅಮೃತ್ ಶೆಣೈ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ, ಪೂರ್ಣಿಮಾ ಸುರೇಶ್ ಅವರನ್ನು ಪ್ರಧಾನ ಸಂಚಾಲಕರನ್ನಾಗಿ, ಕುಯಿಲಾಡಿ ಸುರೇಶ್ ನಾಯಕ್ ಅವರನ್ನು ಗೌರವ ಸಲಹೆಗಾರರಾಗಿ ನೇಮಕ ಮಾಡಲಾಗಿದೆ ಎಂದು ವಿವರ ನೀಡಿದರು.
20 ರಂದು ಮಧ್ಯಾಹ್ನ 3 ಗಂಟೆಗೆ ಮಣಿಪಾಲದ ಸಿಂಡಿಕೇಟ್ ಸರ್ಕಲ್ನಿಂದ ಜಿಎಸ್ಬಿ ಸಭಾಭವನದವರೆಗೆ ಚಂಡೆ, ವಾದ್ಯಸಹಿತ ಶೋಭಾಯಾತ್ರೆ ನಡೆಯಲಿದ್ದು, ಟಿ.ಅಶೋಕ್ ಪೈ ಚಾಲನೆ ನೀಡಲಿದ್ದಾರೆ. ಸಮ್ಮೇಳನಕ್ಕೆ ಕೊಂಕಣಿ ಭಾಷೆ ಮಾತನಾಡುವ 40 ಪಂಗಡಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಸಮಾಜದ ಬಂಧುಗಳು ಒಂದೆಡೆ ಸೇರಲಿದ್ದಾರೆ ಎಂದು ತಿಳಿಸಿದರು.
ನಟ ಅನಂತ್ನಾಗ್ ಸೇರಿದಂತೆ ಸಮಾಜದ ಹಲವು ಸಾಧಕರಿಗೆ ಸನ್ಮಾನ ಮಾಡಲಾಗುವುದು. ಎರಡು ದಿನಗಳ ಸಮ್ಮೇಳನದಲ್ಲಿ ಕವಿಗೋಷ್ಠಿ, ಕಥಾಗೋಷ್ಠಿ, ಸಂಗೀತಗೋಷ್ಠಿ, ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕೊಂಕಣಿ ಭಾಷೆಮಾತ್ರವಲ್ಲ; ಸಾಮರಸ್ಯ ಹಾಗೂ ಸೌಹಾರ್ದತೆಗೆಯ ಪ್ರತೀಕವಾಗಿದೆ. ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಕೊಂಕಣಿ ಸಾಹಿತ್ಯ ಉತ್ತೇಜನ ನೀಡಲು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದದ ಕಮಲಾಕ್ಷ ಶೇಟ್, ನೀತಾ ಪ್ರಭು, ಸುಹರ್ಷಾ ಭಟ್, ಜೋಸೆಫ್ ರೊಬೆಲ್ಲೊ, ಗೀತಾ ರವಿ ಶೇಟ್, ರಾಘವೇಂದ್ರ ಪ್ರಭು ಕರ್ವಾಲೊ, ರಾಮದಾಸ್ ಪೈ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.