ADVERTISEMENT

ಉದ್ಯೋಗ ಮರೀಚಿಕೆ: ಹೋರಾಟದ ಹಾದಿ ತುಳಿದ ಕೊರಗರು

ಉನ್ನತ ಶಿಕ್ಷಣ ಪಡೆದರೂ ಕೊರಗ ಸಮುದಾಯದವರಿಗೆ ಉದ್ಯೋಗ ಮರೀಚಿಕೆ

ನವೀನ್ ಕುಮಾರ್ ಜಿ.
Published 28 ಡಿಸೆಂಬರ್ 2025, 19:32 IST
Last Updated 28 ಡಿಸೆಂಬರ್ 2025, 19:32 IST
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸುತ್ತಿರುವ ಕೊರಗ ಸಮುದಾಯದವರು
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸುತ್ತಿರುವ ಕೊರಗ ಸಮುದಾಯದವರು   

ಉಡುಪಿ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಿಂದುಳಿದ ಆದಿವಾಸಿ ಕೊರಗ ಸಮುದಾಯದ ಯುವಜನರು ಶಿಕ್ಷಣವಂತರಾಗುತ್ತಿದ್ದರೂ ಉದ್ಯೋಗ ಇನ್ನೂ ಅವರಿಗೆ ಮರೀಚಿಕೆಯಾಗಿದೆ.

ಉನ್ನತ ಶಿಕ್ಷಣ ಪಡೆದರೂ ಪುರಸಭೆಗಳಲ್ಲಿ ಪೌರ ಕಾರ್ಮಿಕ ಹುದ್ದೆಗಳನ್ನು ಬಿಟ್ಟರೆ ನಮ್ಮವರಿಗೆ ಬೇರೆ ಸರ್ಕಾರಿ ಉದ್ಯೋಗಗಳು ಸಿಗುತ್ತಿಲ್ಲ ಎಂದು ಸಮುದಾಯದವರು ಅಳಲು ತೋಡಿಕೊಳ್ಳುತ್ತಾರೆ.

ಸಮುದಾಯದ ಯುವಜನರಿಗೆ ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ–ಕೇರಳ ವತಿಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮತ್ತೆ ಅಹೋರಾತ್ರಿ ಧರಣಿ ಆರಂಭಿಸಿದ್ದು, ಧರಣಿಯು ಶುಕ್ರವಾರ 12ನೇ ದಿನಕ್ಕೆ ಕಾಲಿರಿಸಿದೆ. ಒಂದು ವರ್ಷದ ಹಿಂದೆಯೂ ಹಲವು ದಿನಗಳವರೆಗೆ ಕೊರಗ ಸಮುದಾಯದವರು ಅಹೋರಾತ್ರಿ ಧರಣಿ ನಡೆಸಿದ್ದರು.

ADVERTISEMENT

ಉಡುಪಿ, ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನೆಲೆಸಿರುವ ಕೊರಗ  ಸಮುದಾಯದವರ ಜನಸಂಖ್ಯೆ ಅಂದಾಜು 12 ಸಾವಿರದಷ್ಟಿದೆ. ‘ನಮ್ಮ ಸಮುದಾಯ ಕರಾವಳಿಯ ಮೂಲ ನಿವಾಸಿಗಳಾಗಿದ್ದು, ಭಾರತ ಸರ್ಕಾರವು ನಮ್ಮನ್ನು ಪ್ರಾಚೀನ ಬುಡಕಟ್ಟು ಅತಿ ದುರ್ಬಲ ಸಮುದಾಯವೆಂದು ಗುರುತಿಸಿದೆ. ಜನಗಣತಿಯಿಂದ ಜನಗಣತಿಗೆ ನಮ್ಮವರ ಜನಸಂಖ್ಯೆ  ಕಡಿಮೆಯಾಗುತ್ತಿದೆ’ ಎಂದು ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ತಿಳಿಸಿದರು.

‘ಎಸ್‌ಎಸ್‌ಎಲ್‌ಸಿ ಮತ್ತು ಉನ್ನತ ಶಿಕ್ಷಣ ಪಡೆದ ಅಂದಾಜು ಎರಡು ಸಾವಿರ ಮಂದಿಗೆ ಉದ್ಯೋಗ ನೀಡಿ ಎಂದು ನಾವು ಕೇಳುತ್ತಿದ್ದೇವೆ. ಈ ಹಿಂದೆ ಸರ್ಕಾರವು ‘ಸಿ’ ಮತ್ತು ‘ಡಿ’ ದರ್ಜೆಯ ಉದ್ಯೋಗದಲ್ಲಿ ನೇರ ನೇಮಕಾತಿ ನಡೆಸುವ ಭರವಸೆ ನೀಡಿತ್ತು. ಆದರೆ ಅದು ಇನ್ನೂ ಈಡೇರಿಲ್ಲ. ಈ ಕಾರಣಕ್ಕೆ ಮತ್ತೆ ಹೋರಾಟಕ್ಕಿಳಿದಿದ್ದೇವೆ’ ಎಂದು ಅವರು ಹೇಳಿದರು.

‘ನಮ್ಮ ಸಮುದಾಯದಲ್ಲಿ 300ಕ್ಕೂ ಹೆಚ್ಚು ಮಂದಿ ಪದವೀಧರರಿದ್ದಾರೆ, 50 ಮಂದಿ ಸ್ನಾತಕೋತ್ತರ ಪದವಿ ಪಡೆದಿದ್ಧಾರೆ. ನಾಲ್ಕು ಮಂದಿ ಪಿಎಚ್‌.ಡಿ. ಮಾಡಿದ್ದಾರೆ. ಪಿಎಚ್‌.ಡಿ. ಮಾಡಿದವರಲ್ಲಿ ಒಬ್ಬರಿಗಷ್ಟೇ ಸರ್ಕಾರಿ ಉದ್ಯೋಗ ಸಿಕ್ಕಿದೆ’ ಎಂದು ವಿವರಿಸಿದರು.

ಯುವಜನರಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ಕಳೆದ ವರ್ಷ ಹತ್ತು ದಿನ ಅಹೋರಾತ್ರಿ ಧರಣಿ ನಡೆಸಿದ್ದೆವು. ಈ ಬಾರಿ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುತ್ತೇವೆ
ಸುಶೀಲಾ ನಾಡ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ
ಕೊರಗ ಸೇರಿದಂತೆ 13 ಸಮುದಾಯದವರಿಗೆ ಉದ್ಯೋಗದಲ್ಲಿ ವಿಶೇಷ ನೇಮಕಾತಿ ನೀಡುವ ಕುರಿತು ಬಜೆಟ್‌ನಲ್ಲಿ ಘೋಷಣೆಯಾಗಿತ್ತು. ನೇರ ನೇಮಕಾತಿಯು ಸರ್ಕಾರದ ಹಂತದಲ್ಲೇ ನಡೆಯಬೇಕಾಗಿದೆ
ನಾರಾಯಣ ಸ್ವಾಮಿ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.