ಕೋಟ(ಬ್ರಹ್ಮಾವರ): ‘ಶಿಕ್ಷಕ ಪಠ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಸೀಮಿತವಾಗಿರದೆ, ನಿರಂತರ ಅಧ್ಯಯನಶೀಲತೆ ಹೊಂದಿರಬೇಕು. ತಾವು ಕಲಿತ ಉತ್ತಮ ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬೇಕು. ಆತ್ಮವಿಶ್ವಾಸದ ಜತೆಗೆ ಸದಾ ಆತ್ಮಾವಲೋಕನಕ್ಕೆ ತೆರೆದುಕೊಳ್ಳಬೇಕು’ ಎಂದು ಶಿಕ್ಷಣ ತಜ್ಞ ಮುನಿರಾಜ ರೆಂಜಾಳ ಅಭಿಪ್ರಾಯ ವ್ಯಕ್ತಪಡಿಸಿದರು.
ಕೋಟ ವಿವೇಕ ಹಿಂದಿನ ವಿದ್ಯಾರ್ಥಿ ಸಂಘವು ವಿವೇಕ ವಿದ್ಯಾಸಂಸ್ಥೆಗಳ ಶಿಕ್ಷಕರಿಗೆ ಎಂ.ಜಿ.ಎಂ ಸಭಾಂಗಣದಲ್ಲಿ ಆಯೋಜಿಸಿದ್ದ ಗುರುವಿನ ಗುರಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಡಾ. ಪ್ರಭಾತ್ ಬಲ್ನಾಡ್ ಮಾತನಾಡಿ, ‘ತರಗತಿಯಲ್ಲಿ ಎರಡು ವಿಧದ ಮಕ್ಕಳಿರುತ್ತಾರೆ. ಒಂದು ಭಾವನಾತ್ಮಕ, ಸಾಮಾಜಿಕ ಕಳಕಳಿ ಹೊಂದಿರುವ ಶಿಕ್ಷಕರ ಬಗ್ಗೆ ಗೌರವ ಹೊಂದಿರುವ ಮಕ್ಕಳು. ಇನ್ನೊಂದು ಇದಕ್ಕೆ ವಿರುದ್ಧವಾಗಿ ಶಿಕ್ಷಕರೊಂದಿಗೆ ನಕಾರಾತ್ಮಕವಾಗಿ ವರ್ತಿಸುವ ಮಕ್ಕಳು. ಇವರನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ. ಮಕ್ಕಳ ಸಾಧನೆಯನ್ನು ಗುರುತಿಸುವಾಗ ಅವರ ಹಿನ್ನೆಲೆಯ ಅರಿವಿರಬೇಕು. ನಕಾರಾತ್ಮಕ ಮನೋಭಾವದ ಮಕ್ಕಳ ಕುರಿತು ಹೆಚ್ಚಿನ ಗಮನಬೇಕು’ ಎಂದರು.
ವಿದ್ಯಾಸಂಘದ ಅಧ್ಯಕ್ಷ ಪ್ರಭಾಕರ ಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಂದ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಸಂಘದ ಕಾರ್ಯದರ್ಶಿ ಎಂ. ರಾಮದೇವ ಐತಾಳ ಇದ್ದರು.
ಪ್ರಾಂಶುಪಾಲ ಕೆ. ಜಗದೀಶ ನಾವಡ ಸ್ವಾಗತಿಸಿದರು. ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಧಾಕರ ಪಿ. ನಿರೂಪಿಸಿದರು. ರಮಾನಂದ ಭಟ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.