ಉಡುಪಿ: ಅನಾಥ ಮಕ್ಕಳ ಆಶಾಕಿರಣವಾಗಿರುವ ಸಂತೆಕಟ್ಟೆಯಲ್ಲಿರುವ ಕೃಷ್ಣಾನುಗೃಹ ಪುನರ್ ವಸತಿ ಮತ್ತು ದತ್ತು ಸ್ವೀಕಾರ ಕೇಂದ್ರದ ಮಕ್ಕಳು ಕೊರೊನಾ ಜಯಿಸಿದ್ದಾರೆ.
ಮೇ 26ರಂದು ಅನಾಥಾಶ್ರಮದ ಹಲವು ಮಕ್ಕಳಿಗೆ ಸೋಂಕು ತಗುಲಿತ್ತು. ಕೂಡಲೇ ಸೋಂಕಿತ ಮಕ್ಕಳಿಗೆ 14 ದಿನಗಳ ಕಾಲ ಪ್ರತ್ಯೇಕ ಚಿಕಿತ್ಸೆ ನೀಡಿ, ನೆಗೆಟಿವ್ ಕೋವಿಡ್ ವರದಿ ಬಂದ ಮಕ್ಕಳನ್ನು ನರ್ಸಿಂಗ್ ಕಾಲೇಜು ಕಟ್ಟಡಕ್ಕೆ ಸ್ಥಳಾಂತರಿಸಿ ಐಸೊಲೇಷನ್ ವ್ಯವಸ್ಥೆ ಮಾಡಲಾಯಿತು. ಈಗ ಎಲ್ಲ ಮಕ್ಕಳು ಮರಳಿ ಅನಾಥಾಶ್ರಮಕ್ಕೆ ಬಂದಿದ್ದು, ಆರೈಕೆ ಮಾಡಲಾಗುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಸಂಕಷ್ಟದ ಸಮಯದಲ್ಲಿ ದಾನಿಗಳು ನಗದು ಹಾಗೂ ವಸ್ತುಗಳ ರೂಪದಲ್ಲಿ ನೆರವು ನೀಡಿದರು. ಕುರ್ಕಾಲ್ ಫ್ರೆಂಡ್ಸ್ ಸಂಘಟನೆಯಿಂದ 14 ದಿನ ಮಕ್ಕಳಿಗೆ ಬೆಳಗಿನ ಉಪಹಾರದ ವ್ಯವಸ್, ಅದಮಾರು ಮಠದಿಂದ ಮಧ್ಯಾಹ್ನದ ಊಟ, ಚೈಲ್ಡ್ಲೈನ್ನ ರಾಮಚಂದ್ರ ಉಪಾಧ್ಯಾಯ ಅವರು ರಾತ್ರಿ ಊಟಕ್ಕೆ ನೆರವು ನೀಡಿದರು. ಮಕ್ಕಳ ತಜ್ಞ ವೈದ್ಯ ಡಾ. ಜನಾರ್ಧನ ಪ್ರಭು ಅವರ ಚಿಕಿತ್ಸೆಯಿಂದ ಕಂದಮ್ಮಗಳು ಗುಣಮುಖರಾಗಿದ್ದಾರೆ.
ಆಶ್ರಮದಲ್ಲಿ ಪ್ರಸ್ತುತ 15 ದಿನದಿಂದ 14 ವರ್ಷದೊಳಗಿನ 36 ಮಕ್ಕಳು ಆಶ್ರಯ ಪಡೆದಿದ್ದು ನಾಲ್ಕು ತಿಂಗಳ ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ. ಉಮೇಶ್ ಪ್ರಭು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.