
ಕುಂದಾಪುರ: ‘ಯುವಕರು ಮಾದಕ ದ್ರವ್ಯ, ಮನವಿಕೃತಿಗೊಳಿಸುವ ವಸ್ತುಗಳಿಗೆ ಬಲಿಯಾಗುತ್ತಿರುವುದು ವ್ಯವಸ್ಥೆಯ ದುರಂತ. ಮಾದಕ ವಸ್ತುಗಳು ಯುವಕರ ಕೈಗೆ ಸಿಗದಂತೆ ಸರ್ಕಾರ ಕ್ರಮ ವಹಿಸಿ ಡ್ರಗ್ಸ್ ಮಾಫಿಯಾ ನಿರ್ಮೂಲನೆ ಮಾಡಬೇಕು’ ಎಂದು ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ವಕ್ವಾಡಿಯ ದಿ.ವಿ.ಕೆ.ಮೋಹನ್ ಬಯಲು ರಂಗಮಂಟಪದಲ್ಲಿ ಶನಿವಾರ ನಡೆದ ಹೆಗ್ಗಾರ್ಬೈಲು ಯುವಶಕ್ತಿ ಮಿತ್ರಮಂಡಲದ 29ನೇ ವಾರ್ಷಿಕೋತ್ಸವದ ಸಭಾಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುಟ್ಟ ಊರು ವಕ್ವಾಡಿಯಲ್ಲೂ ಡ್ರಗ್ಸ್ ಮಾಫಿಯಾ ಬಾಲ ಬಿಚ್ಚಿದಾಗ ಅದರ ವಿರುದ್ಧ ಯುವಶಕ್ತಿ ಮಿತ್ರ ಮಂಡಲದ ಯುವಕರು ಹೋರಾಡಿದ್ದು ಅಭಿನಂದನೀಯ. ಊರಿನ ಸಮಗ್ರ ಅಭಿವೃದ್ಧಿಗೆ ಯುವಶಕ್ತಿ ಮಿತ್ರ ಮಂಡಲ ನಿರಂತರವಾಗಿ ಶ್ರಮಿಸುವುದರ ಜೊತೆಗೆ, ಆಧಾರವಾಗಿ ನಿಂತಿರುವುದು ಪ್ರಶಂಸನೀಯ ಎಂದರು.
ಸನ್ಮಾನ ನೆರವೇರಿಸಿದ ಜಯರತ್ನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಯುವಜನರೇ ದೇಶದ ಶಕ್ತಿ. ನಾಡು– ನುಡಿ ಕಟ್ಟಲು ಯುವಶಕ್ತಿ ಮಿತ್ರ ಮಂಡಲ ದುಡಿಯುತ್ತಿರುವುದು ಅಭಿನಂದನಾರ್ಹ. ಊರಿಗೆ ಸೇವೆ ನೀಡಿದವರು, ಯುವಪ್ರತಿಭೆಗಳಿಗೆ ಸನ್ಮಾನಿಸುವ, ಸಮಾಜಮುಖಿ ಕೆಲಸಗಳು ನಿರಂತರ ಸಾಗಲಿ ಎಂದರು.
ಕಾಳಾವರ ಗ್ರಾಮ ಪಂಚಾಯತಿ ಸದಸ್ಯ ರಾಮಚಂದ್ರ ನಾವಡ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಕೆಡಿಪಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ಸಂಸ್ಥೆಯ ಅಧ್ಯಕ್ಷ ಶಂಕರ್ ಕುಲಾಲ್, ಕಾರ್ಯದರ್ಶಿ ಕಿಶೋರ್ ಪೂಜಾರಿ ಭಾಗವಹಿಸಿದ್ದರು. ಗೌರವಾಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಶ್ರೀರಾಜ್ ವಕ್ವಾಡಿ, ರಾಕೇಶ್ ವಕ್ವಾಡಿ ನಿರೂಪಿಸಿದರು. ಸುಜನ್ ವಂದಿಸಿದರು. 3 ಅಂಗನವಾಡಿ ಕೆಂದ್ರಗಳ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಮಕ್ಕಳಿಗೆ ಸಿನೆಮಾ ನೃತ್ಯ ಸ್ಪರ್ಧೆ ‘ಹೆಜ್ಜೆ ಸಪ್ಪಳ– 2026’ ನಡೆಯಿತು.
ನಿವೃತ್ತ ಶಿಕ್ಷಕ ರಮೇಶ್ ಶೆಟ್ಟಿ ಅಶೋಕ್ ಶೆಟ್ಟಿ ಜಾನುವಾರು ಇಲಾಖೆಯ ನಿವೃತ್ತ ಅಧಿಕಾರಿ ಸುಬ್ರಾಯ ಗಾಣಿಗ ಹಾಲಾಡಿ ಅವರಿಗೆ ‘ಊರ ಗೌರವ’ ಪ್ರದಾನ ಮಾಡಲಾಯಿತು. ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ದೇವಿಕಾ ವಿ.ಎಸ್ ನಂದಿನಿ ಜಿ. ಅವರಿಗೆ ‘ಯುವ ಸ್ಫೂರ್ತಿ’ ಪುರಸ್ಕಾರ ಪ್ರದಾನ ಮಾಡಲಾಯಿತು. ನಂದಿಕೇಶ್ವರ ಹಾಗೂ ಚಿಕ್ಕಮ್ಮ ಸಪರಿವಾರ ದೈವಗಳ ದೈವಸ್ಥಾನಕ್ಕೆ ಸ್ವಾಗತ ಗೋಪುರ ನಿರ್ಮಿಸಿಕೊಟ್ಟ ಪ್ರಸಿದ್ದಿ ಬೆಂಗಳೂರು ಕನ್ಸ್ಟ್ರಕ್ಷನ್ನ ಆಡಳಿತ ನಿರ್ದೇಶಕ ಪ್ರತಾಪ್ ಶೆಟ್ಟಿ ವಕ್ವಾಡಿ ನಿರ್ಮಾಣ ಹಂತದಲ್ಲಿರುವ ಗ್ರಾಮದ ಸ್ಮಶಾನಕ್ಕೆ ಶ್ರದ್ಧಾಂಜಲಿ ವಾಹನ ನೀಡಲಿರುವ ಉದ್ಯಮಿ ವಕ್ವಾಡಿ ವಿಶ್ವನಾಥ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.