
ಬಂಧನ (ಸಾಂದರ್ಭಿಕ ಚಿತ್ರ)
ಕುಂದಾಪುರ: ಕಂಡ್ಲೂರು ಸೇತುವೆ ಬಳಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದ ಪೊಲೀಸರು 11 ಆರೋಪಿಗಳನ್ನು ಬಂಧಿಸಿ, ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಬೆಳಿಗ್ಗೆ ಕುಂದಾಪುರ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ ಎ. ಕಾಯ್ಕಿಣಿ ಅವರಿಗೆ ಕಂಡ್ಲೂರು ಸೇತುವೆ ಕೆಳಗೆ ದೋಣಿಗಳಲ್ಲಿ ಅಕ್ರಮವಾಗಿ ಮರಳು ತೆಗೆದು ತುಂಬುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಬೆಳಿಗ್ಗೆ 2 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ವರಾಹಿ ನದಿಯ ಕಂಡ್ಲೂರು ಸೇತುವೆ ಬಳಿ ನದಿಯಿಂದ ಮರಳು ತೆಗೆದು ದೋಣಿಯಲ್ಲಿ ತುಂಬುತ್ತಿರುವುದು ಕಂಡು ಬಂದಿತ್ತು. ದೋಣೆಗಳು, ಅದರಲ್ಲಿದ್ದ ಮರಳನ್ನು ಸ್ವಾಧೀನಪಡಿಸಿಕೊಳ್ಳಲು ಹೋದಾಗ ದೋಣಿಯಲ್ಲಿದ್ದವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ದೋಣಿಗಳನ್ನು ಪೊದೆ ಕಡೆ ತೆಗೆದುಕೊಂಡು ಹೋಗಿ ನಿಲ್ಲಿಸಿ ಅಡಗಿಕೊಂಡಿದ್ದರು. ಹೆಚ್ಚಿನ ಪೊಲೀಸರನ್ನು ಕರೆಸಿಕೊಂಡು ಆರೋಪಿಗಳು ಪೊದೆಯಲ್ಲಿ ದೋಣಿಗಳನ್ನು ನಿಲ್ಲಿಸಿದ ಸ್ಥಳಕ್ಕೆ ಹೋಗಿ ಮರಳು ತುಂಬಿದ 4 ದೋಣಿಗಳು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳನ್ನು ವಿಚಾರಿಸಿದಾಗ ತಾವು ಹಳ್ನಾಡು ಕೆಆರ್ಐಡಿಎಲ್ ಮರಳು ಧಕ್ಕೆಯಲ್ಲಿ ಮರಳು ತೆಗೆಯುವ ದಿನಗೂಲಿ ಕೆಲಸದವರೆಂದು ತಿಳಿಸಿದರು. ರಾಮಶಂಕರ್ ರಾಜಬೀರ್, ರಾಮ ಕುಮಾರ್, ಗೋವಿಂದ ಚೌದರಿ, ಶಿವಮುನಿ, ಜುನ್ನ ರಾಜಬೀರ್, ಸತ್ಯಾದೇವ, ಕಮಲೇಶ ನಿಸಾದ್, ಸಂತೋಷ ನಿಸಾದ್, ಓಂ ಪ್ರಕಾಶ ರಾಜಬರ, ರಮೇಶ ರಾಜಬರ್ ಎಂದು ಗುರುತಿಸಲಾಗಿದೆ. ಮರಳು ತೆಗೆಯುತ್ತಿರುವ ಬಗ್ಗೆ ವಿಚಾರಿಸಿದಾಗ ಮರಳು ದಕ್ಕೆಯ ಮಾಲೀಕರಾದ ಸುನಿಲ್ ಶೆಟ್ಟಿ, ಸುಪರ್ವೈಸರ್ ಅಜ್ಮಲ್ ಉತ್ತಮ ಮರಳನ್ನು ತಂದುಕೊಟ್ಟರೆ ಹೆಚ್ಚಿನ ಹಣ ನೀಡುವುದಾಗಿ ಸೂಚಿಸಿದ್ದರಿಂದ ದಕ್ಕೆಯ ಜಿಯೊ ಪೆನ್ಸಿಂಗ್ ಬೌಂಡರಿಯ ಆಚೆಗೆ ಹೋಗಿ ರಾತ್ರಿ ವೇಳೆ ಮರಳು ತೆಗೆದು ದೋಣಿಯಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೂಪರ್ವೈಸರ್ ಅಜ್ಮಲ್ ಸೇರಿದಂತೆ 11 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ದೋಣಿ, ಮರಳು, ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.