
ಕುಂದಾಪುರ: ‘ಹಲವು ಮಂದಿಯ ಶ್ರಮದಿಂದ ಪ್ರಾರಂಭವಾದ ವಾರಾಹಿ ಯೋಜನೆ ಜನರ ಜೀವನಾಡಿಯಾಗಿದ್ದು, ಜನರಿಗೆ ಅನುಕೂಲ ಕಲ್ಪಿಸಲು ಬಲದಂಡೆ ಯೋಜನೆ ಶೀಘ್ರ ಆರಂಭವಾಗಬೇಕು’ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ್ ಕೊಡವೂರು ಆಗ್ರಹಿಸಿದರು.
ಬೈಂದೂರು, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳ ಸಹಕಾರದಲ್ಲಿ ಕಾಂಗ್ರೆಸ್ ಮುಖಂಡ ಕೆ.ಗೋಪಾಲ ಪೂಜಾರಿ ನೇತೃತ್ವದಲ್ಲಿ ಮಂಗಳವಾರ, ಬುಧವಾರ ಕಂಡ್ಲೂರಿನಿಂದ ಸಿದ್ಧಾಪುರದವರೆಗೆ ನಡೆಯಲಿರುವ ‘ನೀರಿಗಾಗಿ ನಮ್ಮ ನಡಿಗೆ’ ಪಾದಯಾತ್ರೆಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಯೋಜನೆ ಮೂಲಕ ಸಾವಿರಾರು ಹೆಕ್ಟೇರ್ ಭೂಮಿಗೆ ನೀರುಣಿಸಬೇಕು ಎಂಬ ದೂರದೃಷ್ಟಿಯಿಂದ ಬಜೆಟ್ ಅಧಿವೇಶನದ ಸಮಯದಲ್ಲಿ ಸರ್ಕಾರದ ಗಮನ ಸೆಳೆಯಲು ಗೋಪಾಲ ಪೂಜಾರಿ ನೇತೃತ್ವದಲ್ಲಿ ನಡೆಯಲಿರುವ ಈ ಪಾದಯಾತ್ರೆಗೆ ಕಾಂಗ್ರೆಸ್ ಪಕ್ಷದ ಬೆಂಬಲವಿದೆ ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಬೇರೆ ಬೇರೆ ಸರ್ಕಾರಗಳು ಅಧಿಕಾರದಲ್ಲಿ ಇದ್ದರೂ, ಸಮರ್ಪಕ ಅನುದಾನದ ಕೊರತೆಯಿಂದಾಗಿ, ಯೋಜನೆಗೆ ನಾಲ್ಕು ದಶಕ ಸಂದಿದ್ದರೂ ಅಪೂರ್ಣವಾಗಿದೆ. ಮಾಜಿ ಶಾಸಕರಾದ ಕಾಪು ಸಂಜೀವ ಶೆಟ್ಟಿ, ಜಿ.ಎಸ್.ಆಚಾರ್, ವಿನ್ನಿಫ್ರೆಡ್ ಫರ್ನಾಂಡಿಸ್, ಕೆ.ಪ್ರತಾಪಚಂದ್ರ ಶೆಟ್ಟಿ, ಸಂಸದರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರ ಪ್ರಯತ್ನದಿಂದ ಮುಖ್ಯಮಂತ್ರಿ ಗುಂಡೂರಾವ್ ಸರ್ಕಾರದ ಅವಧಿಯಲ್ಲಿ ಯೋಜನೆಗೆ ಅಡಿಪಾಯ ಹಾಕಲಾಗಿತ್ತು. ಅನುದಾನ ಹಾಗೂ ಇತರ ತಾಂತ್ರಿಕ ಕಾರಣದಿಂದ ಯೋಜನೆ ನಿಧಾನಗತಿಯಲ್ಲಿಯೇ ಸಾಗುತ್ತಿದೆ ಎಂದರು.
ಸದ್ಯದ ಬೇಡಿಕೆಯಾದ ಬಲದಂಡೆ ಯೋಜನೆಯಿಂದಾಗಿ ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಒಂದಷ್ಟು ಭಾಗದ ರೈತರಿಗೆ ಅನುಕೂಲವಾಗಲಿದೆ. ರೈತರು, ಮೀನುಗಾರರು, ಬಡವರ ಪರವಾಗಿ ಕೆಲಸ ಮಾಡುತ್ತಿರುವ ಗೋಪಾಲ ಪೂಜಾರಿ ನೇತೃತ್ವದಲ್ಲಿ ಈ ಹೋರಾಟ ಹಮ್ಮಿಕೊಂಡಿದ್ದು, ಸರ್ಕಾರದ ಗಮನಸೆಳೆಯಲಾಗುತ್ತಿದೆ ಎಂದರು.
ಕೆ.ಗೋಪಾಲ ಪೂಜಾರಿ ಮಾತನಾಡಿ, ವಾರಾಹಿ ಬಲದಂಡೆ ಯೋಜನೆ ಶೀಘ್ರ ಅನುಷ್ಠಾನ, ಸಿದ್ಧಾಪುರ ಏತನೀರಾವರಿ ಯೋಜನೆಯಲ್ಲಿ ಬಿಟ್ಟುಹೋದ ಭಾಗಕ್ಕೆ ನೀರು ಕೊಡಿಸಬೇಕು. ಜಲಜೀವನ್ ಮಿಷನ್ ಅಡಿಯಲ್ಲಿ ಕೊಳವೆ ಹಾಕಿ ಮನೆ ಮುಂಭಾಗ ನಳ್ಳಿ ಅಳವಡಿಸಿದ್ದರೂ, ನೀರು ಪೂರೈಕೆ ಆಗುತ್ತಿಲ್ಲ. ಈ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬ ಆಗ್ರಹದೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದು ಯಾರ ವಿರುದ್ಧದ ಹೋರಾಟವೂ ಅಲ್ಲ. ಕ್ಷೇತ್ರದ ಜನರ ಹಕ್ಕೊತ್ತಾಯಕ್ಕಾಗಿ ಈ ಹೋರಾಟ. ರೈತ ಶಕ್ತಿಯ ಬಗ್ಗೆ ಸಿದ್ಧಾಪುರದಲ್ಲಿ ಉತ್ತರ ನೀಡುವೆ ಎಂದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಕಿಶನ್ ಹೆಗ್ಡೆ, ಪಶ್ಚಿಮ ವಾಹಿನಿ ಯೋಜನೆ ಸಂಘಟನೆಯ ಅಧ್ಯಕ್ಷ ಚಿಟ್ಟೆ ರಾಜಗೋಪಾಲ ಹೆಗ್ಡೆ, ವಾರಾಹಿ ನೀರಾವರಿ ಬಳಕೆದಾರರ ವೇದಿಕೆ ಅಧ್ಯಕ್ಷ ಬಲಾಡಿ ಸಂತೋಷ್ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿ ಸೂರಜ್ ಜಿ.ಪೂಜಾರಿ, ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ಕೆ.ವಿಕಾಸ್ ಹೆಗ್ಡೆ, ರೈತ ಮುಂಬಾರು ದಿನಕರ ಶೆಟ್ಟಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ನಾಡ, ಮುಖಂಡರಾದ ಸಂಪಿಗೇಡಿ ಸಂಜೀವ ಶೆಟ್ಟಿ, ಮದನ್ ಕುಮಾರ್, ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ, ದೇವಾನಂದ ಶೆಟ್ಟಿ ಹಳ್ನಾಡು, ಗಣಪತಿ ಟಿ.ಶ್ರೀಯಾನ್, ಶೇಖರ್ ಪೂಜಾರಿ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಅಲ್ಪಸಂಖ್ಯಾತ ಮುಖಂಡ ಮುನಾಫ್, ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷ ಜಯರಾಮ ನಾಯ್ಕ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಕ್ಷಯ್ ಕುಮಾರ್ ಶೆಟ್ಟಿ, ಪ್ರಮುಖರಾದ ವಂಡಬಳ್ಳಿ ಜಯರಾಮ್ ಶೆಟ್ಟಿ, ರಘುರಾಮ ಶೆಟ್ಟಿ ಬಿಜೂರು, ಸದಾಶಿವ ಶೆಟ್ಟಿ ಶಂಕರನಾರಾಯಣ, ನಾಗಪ್ಪ ಕೊಠಾರಿ, ಉದಯ ಪೂಜಾರಿ ವಂಡ್ಸೆ, ಇರ್ಫಾನ್, ವಿಜಯ ಪುತ್ರನ್, ಕಿರಣ್ ಹೆಗ್ಡೆ ಅಂಪಾರು, ಜಗದೀಶ್ ದೇವಾಡಿಗ, ನರಸಿಂಹ ಹಳಗೇರಿ, ಸುದೇಶ್ ಶೆಟ್ಟಿ ಗುಲ್ವಾಡಿ, ಅನೀಫ್ ಗುಲ್ವಾಡಿ ಭಾಗವಹಿಸಿದ್ದರು.
ತಿರುವು ಪಡೆದ ಹೋರಾಟ; ಎರಡು ದಿನ ಪಾದಯಾತ್ರೆ ಸಂಘಟನೆಗಳ ಬೆಂಬಲ; ಸಾವಿರಾರು ಜನ ಭಾಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.