ಉಡುಪಿಯ ಕರಾವಳಿ ಬೈಪಾಸ್ ಮೇಲೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಸರ್ವೀಸ್ ರಸ್ತೆಯಲ್ಲಿರುವ ಪಾದಚಾರಿ ಮಾರ್ಗದಲ್ಲಿ ಸಿಮೆಂಟ್ ಸ್ಲಾಬ್ಗಳು ಅಲ್ಲಲ್ಲಿ ಮುರಿದು ಹೋಗಿವೆ. ಪರಿಣಾಮ ರಾತ್ರಿಯ ಹೊತ್ತು ಉಡುಪಿಯಿಂದ ಅಂಬಲಪಾಡಿ ಕಡೆಗೆ ನಡೆದುಕೊಂಡು ಹೋಗುವ ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ. ರಾತ್ರಿ ಬೀದಿದೀಪದ ವ್ಯವಸ್ಥೆಯೂ ಸಮರ್ಪಕವಾಗಿರದೆ ಹಲವರು ನಡೆಯುವಾಗ ಮುರಿದುಹೋದ ಸ್ಲಾಬ್ ಗಮನಿಸಿದೆ ಬಿದ್ದು ಕೈಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ವೃದ್ಧರು, ಮಹಿಳೆಯರು ಮಕ್ಕಳಿಗೆ ಬಹಳ ತೊಂದರೆಯಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುರಿದುಹೋಗಿರುವ ಸಿಮೆಂಟ್ ಸ್ಲಾಬ್ಗಳನ್ನು ಬದಲಿಸಬೇಕು.
–ರಾಘವೇಂದ್ರ, ಸ್ಥಳೀಯರು
ಉಡುಪಿ ನಗರದಲ್ಲಿ ಹಸಿ ಹಾಗೂ ಒಣ ಕಸ ಸಂಗ್ರಹ ನಡೆಯುತ್ತಿದ್ದರೂ ರಸ್ತೆ ಬದಿ, ನಿರ್ಜನ ಪ್ರದೇಶಗಳಲ್ಲಿ ಕಸ ತಂದು ಬಿಸಾಡುವುದು ತಪ್ಪಿಲ್ಲ. ಶಿರಿಬೀರು ವಾರ್ಡ್ನ ಧೂಮಾವತಿ ರಸ್ತೆಯ ತಿರುವಿನಲ್ಲಿ ರಾಶಿ ಪ್ಲಾಸ್ಟಿಕ್ ಹಾಗೂ ಮನೆಯ ತ್ಯಾಜ್ಯವನ್ನು ತಂದು ಸುರಿಯುಲಾಗುತ್ತಿದೆ. ನಗರದ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಕಸವನ್ನು ತಂದು ಸುರಿಯಲಾಗುತ್ತಿದೆ. ಸರ್ವೀಸ್ ರಸ್ತೆಗಳ ಖಾಲಿ ನಿವೇಶನಗಳು ಕಸ ಎಸೆಯುವ ತಾಣಗಳಾಗಿವೆ. ಕೂಡಲೇ ನಗರಸಭೆ ಕಸ ವಿಲೇವಾರಿಗೊಳಿಸಿ ಕಸ ಎಸೆಯುವವರಿಗೆ ದಂಡ ವಿಧಿಸಬೇಕು. ಅಲ್ಲಲ್ಲಿ ಜಾಗೃತಿ ಫಲಕಗಳನ್ನು ಅಳವಡಿಸಬೇಕು.
–ಲಕ್ಷ್ಮೀ ಪ್ರಸಾದ್, ಶಿರಿಬೀಡು ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.