
ಬ್ರಹ್ಮಾವರ: 102 ವರ್ಷದ ಯಶೋಗಾಥೆ ಹೊಂದಿರುವ, ಗ್ರಾಮೀಣ ಪ್ರದೇಶದ ಕುಂಜಾಲು ವಿಶ್ವಕೀರ್ತಿ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಪ್ರತಿಭಾ ಅನಾವರಣ, ಪೋಷಕರ ಸ್ನೇಹಮಿಲನ, ಹಿರಿಯ ವಿದ್ಯಾರ್ಥಿಗಳ ಸಂಗಮ ಕಾರ್ಯಕ್ರಮ ಇದೇ 8ರಂದು ನಡೆಯಲಿದೆ.
ಶಾಲೆಯಲ್ಲಿ ಸುಮಾರು 80 ವಿದ್ಯಾರ್ಥಿಗಳಿದ್ದು, ಎಲ್ಲರೂ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಾಗಿದ್ದಾರೆ. ಅನುದಾನ ಕೊರತೆ, ಶಿಕ್ಷಕರ ಕೊರತೆಯ ಕಾರಣದಿಂದಾಗಿ ಶಾಲೆ ಮುಚ್ಚುವ ಹಂತದಲ್ಲಿದ್ದಾಗ ಉಳಿವಿಗಾಗಿ ನಿರ್ವಹಣಾ ಸಮಿತಿ ಉಸ್ತುವಾರಿಯಲ್ಲಿ ನೀಲಾವರ ಗ್ರಾಮ ಪಂಚಾಯಿತಿ, ಹಿರಿಯ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ.
ನಿರ್ವಹಣಾ ಸಮಿತಿಯ ಪದಾಧಿಕಾರಿಗಳು ಹಿರಿಯ ವಿದ್ಯಾರ್ಥಿಗಳೇ ಆಗಿದ್ದು, ತಾವು ಕಲಿತ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಸುತ್ತಮುತ್ತ ಇಂಗ್ಲಿಷ್ ಮಾಧ್ಯಮ ಶಾಲೆಗಳಿದ್ದರೂ, ಆಡಳಿತ ಮಂಡಳಿ, ನಿರ್ವಹಣಾ ಸಮಿತಿಯ ಹೋರಾಟದಿಂದ ಕನ್ನಡ ಮಾಧ್ಯಮದಲ್ಲಿ ಇಷ್ಟು ಸಂಖ್ಯೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಶಾಲೆಯ ವಿಶೇಷವಾಗಿದೆ.
8ರಂದು ಬೆಳಿಗ್ಗೆ 9.30ಕ್ಕೆ ಶಾಲೆಯ ಸಂಚಾಲಕಿ ವಾಣಿಶ್ರೀ ಡಿ. ಅಮೀನ್ ಧ್ವಜಾರೋಹಣ ನೆರವೇರಿಸುವರು. ಸಂಜೆ 6.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಕೆ. ವಿಜಯಲಕ್ಷ್ಮೀ ದೇವಿ ಅವರನ್ನು ಸನ್ಮಾನಿಸಲಾಗುವುದು. ಸಂಚಾಲಕ ಧನಂಜಯ ಅಮೀನ್ ಅಧ್ಯಕ್ಷತೆ ವಹಿಸುವರು.
ಶಾಸಕ ಯಶ್ಪಾಲ್ ಸುವರ್ಣ, ಶಾಲಾ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ರಘುರಾಮ ಮಧ್ಯಸ್ಥ, ಅಧ್ಯಕ್ಷ ಸುಬ್ರಹ್ಮಣ್ಯ ಬಾಸ್ತ್ರಿ, ಉಪಾಧ್ಯಕ್ಷ ಕೆ. ಮುಕುಂದ ನಾಯ್ಕ, ನಿವೃತ್ತ ಮುಖ್ಯಶಿಕ್ಷಕ ಎನ್. ಚಂದ್ರಶೇಖರ ಅಡಿಗ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಜ್ಯೋತಿ ಭಟ್, ನೀಲಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೇಬಿ, ಪಿಡಿಒ ಗೀತಾ ಬಾಳಿಗ, ಮುಖ್ಯಶಿಕ್ಷಕ ಅಶೋಕ ಕುಮಾರ್ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರ್ಷ ಭಟ್ ಭಾಗವಹಿಸುವರು. ಹಿರಿಯ ವಿದ್ಯಾರ್ಥಿ ಮಹೇಂದ್ರ ಆಚಾರ್ಯ ಸ್ವಸ್ತಿ ವಾಚನ ಮಾಡುವರು. ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ, ನೀಲಾವರ ಮೇಳದವರಿಂದ ‘ಶ್ರೀಕೃಷ್ಣ ಪಾರಿಜಾತ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.