ADVERTISEMENT

ಬದಲಾದ ಕಾನೂನುಗಳ ಬಗ್ಗೆ ಪತ್ರಕರ್ತರಿಗೆ ಅರಿವು ಅಗತ್ಯ: ವಿವೇಕಾನಂದ ಪನಿಯಾಲ

ಪತ್ರಿಕಾ ದಿನಾಚರಣೆ ಅಂಗವಾಗಿ ‘ಮಾಧ್ಯಮ- ಕಾನೂನು’ ವಿಚಾರಗೋಷ್ಠಿ, ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 14:54 IST
Last Updated 1 ಜುಲೈ 2021, 14:54 IST
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಪತ್ರಿಕಾ ದಿನಾಚರಣೆಯನ್ನು ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ವಿವೇಕಾನಂದ ಪನಿಯಾಲ ಉದ್ಘಾಟಿಸಿದರು.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಪತ್ರಿಕಾ ದಿನಾಚರಣೆಯನ್ನು ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ವಿವೇಕಾನಂದ ಪನಿಯಾಲ ಉದ್ಘಾಟಿಸಿದರು.   

ಉಡುಪಿ: ಪ್ರಕರಣವೊಂದರ ತನಿಖೆ ನಡೆಯುವಾಗ ಪೊಲೀಸರು ಮಾಧ್ಯಮಗಳ ಜತೆ ಯಾವುದೇ ಮಾಹಿತಿ ಹಂಚಿಕೊಳ್ಳುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ ಈಚೆಗೆ ಆದೇಶ ನೀಡಿದ್ದು, ಬದಲಾದ ಕಾನೂನುಗಳ ಬಗ್ಗೆ ಪತ್ರಕರ್ತರಿಗೆ ಅರಿವು ಅತ್ಯಗತ್ಯ ಎಂದು ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಹಾಗೂ ವಕೀಲ ವಿವೇಕಾನಂದ ಪನಿಯಾಲ ಸಲಹೆ ನೀಡಿದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಗುರುವಾರ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ‘ಮಾಧ್ಯಮ ಮತ್ತು ಕಾನೂನು’ ವಿಷಯದ ಕುರಿತು ಅವರು ಮಾತನಾಡಿದರು.

ಪತ್ರಿಕೆಯಲ್ಲಿ ಕೆಲವು ಪದಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಪದ ಬಳಕೆ ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಪತ್ರಕರ್ತರು ಅಪರಾಧ ಸುದ್ದಿಗಳನ್ನು ಬರೆಯುವಾಗ ಪೊಲೀಸರ ಹೇಳಿಕೆ ಜೊತೆಗೆ ಸಂತ್ರಸ್ತರ ಹೇಳಿಕೆಯನ್ನೂ ದಾಖಲಿಸಬೇಕು. ಯಾವುದೇ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವಾಗ ಪ್ರಕರಣಗಳ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಲೇಖನ ಬರೆಯಬಾರದು ಎಂದರು.

ADVERTISEMENT

ಇದೇ ಸಂದರ್ಭ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಡಿಎಚ್‌ಒ ಡಾ.ನಾಗಭೂಷಣ ಉಡುಪ ಶಿಬಿರಕ್ಕೆ ಚಾಲನೆನೀಡಿ ಮಾತನಾಡಿ, ಕೋವಿಡ್‌ ಕಾಲಘಟ್ಟದಲ್ಲಿ ಮಾನವೀಯ ಕಾರ್ಯ ಹಾಗೂ ಮತ್ತಷ್ಟು ಜನಪರ ಕೆಲಸಗಳು ವೈದ್ಯರು ಹಾಗೂ ಪತ್ರಕರ್ತರಿಂದ ಆಗಬೇಕು. ಜನರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಪತ್ರಕತರ್ಕರ ಕಾರ್ಯ ಅಭಿನಂದನೀಯ ಎಂದರು.

ಜಿಲ್ಲಾ ಆಸ್ಪತ್ರೆಯ ವೈದ್ಯೆ ಡಾ.ರೋಶಿನಿ ಪೂಂಜಾ ಇದ್ದರು. ಶಿಬಿರದಲ್ಲಿ ಜಿಲ್ಲೆಯ 50ಕ್ಕೂ ಹೆಚ್ಚು ಪತ್ರಕರ್ತರಿಗೆ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಅಗತ್ಯ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಗುರುತಿನ ಚೀಟಿಯನ್ನು ಸದಸ್ಯರಿಗೆ ವಿತರಿಸಲಾಯಿತು. ಉಡುಪಿ ವಾರ್ತಾಧಿಕಾರಿ ವಿ.ಮಂಜುನಾಥ್ ಮಾತನಾಡಿದರು. ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.