
ಉಡುಪಿ: ಕುಂದಾಪುರ ತಾಲ್ಲೂಕಿನ ಕುಂದಬಾರಂದಾಡಿಯ ಜೀರ್ಣಾವಸ್ಥೆಯಲ್ಲಿರುವ ದೇವಾಲಯದಲ್ಲಿ ಅಪರೂಪದ ಮಹಿಷಮರ್ಧಿನಿಯ ಶಿಲ್ಪ ಕಂಡುಬಂದಿದೆ ಎಂದು ಪುರಾತತ್ತ್ವ ವಿದ್ವಾಂಸ ಹಾಗೂ ಆದಿಮ ಕಲಾ ಟ್ರಸ್ಟ್ ಸ್ಥಾಪಕ ಸಂಚಾಲಕ ಪ್ರೊ. ಟಿ.ಮುರುಗೇಶಿ ತಿಳಿಸಿದ್ದಾರೆ.
ಕುಂದಬಾರಂದಾಡಿಯ ಮಹಿಷಮರ್ಧಿನಿಯು, ಆರು ಕೈಗಳನ್ನು ಹೊಂದಿದ್ದು, ಬಲಭಾಗದ ಮೊದಲ ಕೈಯಲ್ಲಿ ತ್ರಿಶೂಲ, ಎರಡನೇ ಕೈಯಲ್ಲಿ ಖಡ್ಗ, ಮೂರನೇ ಕೈಯಲ್ಲಿ ಗಧೆಯನ್ನು ಹಿಡಿದಿದ್ದಾಳೆ. ಎಡಭಾಗದ ಮೊದಲ ಕೈಯನ್ನು ಮಹಿಷನ ಬೆನ್ನಿನ ಮೇಲೆ ಇರಿಸಲಾಗಿದೆ, ಎರಡನೇ ಕೈ ತುಂಡಾಗಿದ್ದು, ಮೂರನೇ ಕೈಯಲ್ಲಿ ಬಿಲ್ಲನ್ನು ಹಿಡಿದಿದ್ದಾಳೆ. ತನ್ನ ಬಲಗಾಲನ್ನು ಮಹಿಷನ ತಲೆಯ ಮೇಲೆ ಇಟ್ಟು ಮೆಟ್ಟಿ ತ್ರಿಶೂಲದಿಂದ ಆಳವಾಗಿ ಮಹಿಷನ ದೇಹವನ್ನು ಇರಿದಂತೆ ಚಿತ್ರಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುಂದಬಾರಂದಾಡಿಯ ಮಹಿಷಮರ್ಧಿನಿ ದೇವಾಲಯವು ದಕ್ಷಿಣ ದಕ್ಕಿನಲ್ಲಿದೆ. ಉತ್ತರ, ಪೂರ್ವ ಮತ್ತು ಪಶ್ಚಿಮದಲ್ಲಿ ಇನ್ನು ಮೂರು ಮಹಿಷಮರ್ಧಿನಿ ದೇವಾಲಯಗಳಿವೆ. ಐದನೆಯದು ಪುರುಷ ಶಕ್ತಿ ಅಂದರೆ ಶಿವದೇವಾಲಯ ಆದ್ದರಿಂದ ಕುಂದಬಾರಂದಾಡಿ ಮಹಿಷಮರ್ಧಿನಿ ದೇವಾಲಯಗಳು ಪಂಚದುರ್ಗಾ ಪರಂಪರೆಗೆ ಸೇರಿದ ದೇವಾಲಯಗಳ ಗುಚ್ಛವಾಗಿದ್ದು, ನಿಸರ್ಗದ ಪಂಚತತ್ವದ ಸಂಕೇತವಾಗಿವೆ. ಕುಂದಬಾರಂದಾಡಿ ಮಹಿಷಮರ್ಧಿನಿ ದಕ್ಷಿಣ ದಿಕ್ಕಿನಲ್ಲಿರುವುದರಿಂದ ಆಕೆ, ರಾಕ್ಷಸೀ ಸತ್ವದ ಸಂಕೇತವಾಗಿದ್ದಾಳೆ ಎಂದು ಅವರು ಹೇಳಿದ್ದಾರೆ.
ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಂದ್ರ ಪೂಜಾರಿ, ಕಾರ್ಯದರ್ಶಿ ರಘುರಾಮ ಪೂಜಾರಿ , ಸೀತಾರಾಮ ಪೂಜಾರಿ, ಸಂಜೀವ ಬಿಲ್ಲವ ಹಾಗೂ ಅರ್ಚಕರಾದ ಚೆನ್ನಕೇಶವ ಉಪಾಧ್ಯಾಯ, ತಂತ್ರಿಗಳಾದ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಹಾಗೂ ಆದಿಮ ಕಲಾ ಸಂಶೋಧನಾ ತಂಡದ
ಮುರುಳೀಧರ ಹೆಗಡೆ, ಶ್ರೇಯಸ್, ಗೌತಮ್ ಮತ್ತು ಭಾನುಮತಿಯವರಿಗೆ ಅವರು ಇದರ ಅಧ್ಯಯನಕ್ಕೆ ಸಹಕರಿಸಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಹಿಷಮರ್ಧಿನಿ ಶಿಲ್ಪ
ಸ್ಥಳೀಯ ಭಾರತೀಯ ಶಿಲ್ಪ ಶೈಲಿ ಮಹಿಷಮರ್ಧಿನಿಯ ಮುಖಭಾವ ವಿಶಿಷ್ಟವಾಗಿದೆ. ದಪ್ಪ ತುಟಿ ದಪ್ಪನೆಯ ಮೂಗು ಉಬ್ಬಿಕೊಂಡಿರುವ ಕಣ್ಣಾಲಿಗಳು ಅಗಲವಾದ ಮುಖ ಸ್ಥಳೀಯ ಭೂತಾರಾಧನೆಯ ದೈವಗಳ ಮುಖಭಾವವನ್ನು ನೆನಪಿಸುತ್ತದೆ. ಕರಂಡಮುಕುಟವನ್ನು ಧರಿಸಿರುವ ದೇವಿಯು ಸ್ಥಳೀಯ ಸಂಸ್ಕೃತಿ ಮತ್ತು ಭಾರತೀಯ ಶಿಲ್ಪ ಶೈಲಿಯ ಸುಂದರ ಸಂಯೋಜನೆಯಾಗಿದೆ. ದೇವಿಯ ಗಧೆಯ ಕೆಳಭಾಗದಲ್ಲಿ ಒಂದು ಚಿಕ್ಕ ಸ್ತ್ರೀ ಶಿಲ್ಪವಿದ್ದು ಅದು ಬಹುಶಃ ಮಹಿಷನ ಪತ್ನಿಯ ಶಿಲ್ಪವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.