
ಬ್ರಹ್ಮಾವರ: ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪ್ರಾಥಮಿಕ ವಿಭಾಗದಲ್ಲಿ ಮಂಗಳವಾರ ಸಂತೆಯ ವಾತಾವರಣ ನಿರ್ಮಾಣವಾಗಿತ್ತು. ಗ್ರಾಹಕರನ್ನು ಕೂಗಿ ಕರೆಯುತ್ತಿದ್ದ ಮಕ್ಕಳು ತಾವು ತಂದಿದ್ದ ವಿವಿಧ ತರಕಾರಿ, ಹಣ್ಣುಗಳು, ತಿಂಡಿ, ಉತ್ಪನ್ನಗಳನ್ನು ಮಾರಾಟ ಮಾಡಿದರು.
ಶಿಕ್ಷಣದ ಜತೆಯಲ್ಲಿ ಮಕ್ಕಳಿಗೆ ದೈನಂದಿನ ಜೀವನದ ವ್ಯವಹಾರ ಕೌಶಲಗಳನ್ನು ಬೆಳೆಸುವ ಸಲುವಾಗಿ ‘ಮಕ್ಕಳ ಸಂತೆ’ ಎಂಬ ವಿನೂತನ ಕಾರ್ಯಕ್ರಮವನ್ನು ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಮಕ್ಕಳು ಮನೆಯಲ್ಲಿ ಬೆಳೆದ ಸೌತೆ, ಬದನೆ, ಅರಿವೆ, ಸೋರೆ, ಕುಂಬಳ, ಬಸಳೆ, ತೊಂಡೆ, ಹೀರಕಾಯಿ, ಪಡುವಲ, ಹಾಗಲಕಾಯಿ ಮುಂತಾದ ತರಕಾರಿಗಳು, ಬಸಳೆ, ಸೊಪ್ಪು, ಪಪ್ಪಾಯ, ಅನನಾಸು, ಪೇರಳೆ, ಚಿಕ್ಕು, ಕಲ್ಲಂಗಡಿ, ಬಾಳೆ ಮುಂತಾದ ಹಣ್ಣುಗಳು, ತಂಪು ಪಾನೀಯ, ಫ್ಯಾನ್ಸಿ ಐಟಂಗಳು, ಚಕ್ಕುಲಿ, ಕೋಡುಬಳೆ, ಚುರುಮುರಿ, ಹಪ್ಪಳ, ಉಪ್ಪಿನಕಾಯಿ, ಸಂಡಿಗೆ, ಮಣ್ಣಿನ ಪಾತ್ರೆಗಳು, ಕಡುಬಿನ ಕೊಟ್ಟೆ, ಹೂ ಇತ್ಯಾದಿಗಳನ್ನು ಮಾರಾಟ ಮಾಡಿ ವ್ಯವಹಾರ ಕೌಶಲ ತಿಳಿದುಕೊಂಡರು. ತೂಕ, ಅಳತೆ, ಚಿಲ್ಲರೆ ಕೊಡುವುದು, ಗ್ರಾಹಕರೊಂದಿಗೆ ಸಂವಹನ ನಡೆಸುವುದನ್ನು ಪ್ರಾಯೋಗಿಕವಾಗಿ ಅರಿತುಕೊಂಡರು.
ವಿದ್ಯಾರ್ಥಿಗಳು ಸುಮಾರು ₹45 ಸಾವಿರ ಮೊತ್ತದ ವ್ಯವಹಾರ ನಡೆಸಿದರು. ಪೋಷಕರು, ಆಸುಪಾಸಿನ ಗ್ರಾಮಸ್ಥರು ಭಾಗವಹಿಸಿ ಮಕ್ಕಳು ತಂದ ವಸ್ತುಗಳನ್ನು ಖರೀದಿಸಿ ಸಂತೆಯ ಮೆರುಗು ಹೆಚ್ಚಿಸಿದರು. ಅತಿ ಹೆಚ್ಚು ಹಾಗೂ ಉತ್ತಮ ರೀತಿಯಲ್ಲಿ ವ್ಯವಹಾರ ಮಾಡಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪ್ರಾಯೋಜಿಸಲಾಗಿತ್ತು.
ಕೊಕ್ಕರ್ಣೆ ಪರಿಸರದಲ್ಲಿ ಹೆಚ್ಚಾಗಿ ಕೃಷಿ ಪ್ರಾಮುಖ್ಯತೆ ನೀಡುವುದರಿಂದ, ಹೆಚ್ಚಿನ ಮಕ್ಕಳ ಪೋಷಕರು ಕೃಷಿಕರು ಆಗಿರುವುದರಿಂದ ಕೃಷಿ ಉತ್ಪನ್ನಗಳೇ ಸಂತೆಯಲ್ಲಿದ್ದವು. ಮಕ್ಕಳು ಕೃಷಿ ಬಗ್ಗೆ ಒಲವು ಮೂಡಿಸಿಕೊಳ್ಳಲು ಸಂತೆ ಪೂರಕವಾಯಿತು. ಎಸ್.ಡಿ.ಎಂ.ಸಿ, ಶಿಕ್ಷಕರು ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.