ADVERTISEMENT

ಕೊಕ್ಕೊ ಒಲಿಂಪಿಕ್‌ಗೆ ಸೇರುವಂತಾಗಲಿ: ಈಶಪ್ರಿಯತೀರ್ಥ ಶ್ರೀಪಾದ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 16:18 IST
Last Updated 12 ಏಪ್ರಿಲ್ 2025, 16:18 IST
ಉಡುಪಿಯಲ್ಲಿ ಶನಿವಾರ ಮುಕ್ತಾಯಗೊಂಡ ಅಖಿಲ ಭಾರತ ಅಂತರ ವಿವಿ ಪುರುಷರ ಕೊಕ್ಕೊ ಟೂರ್ನಿಯ ಪ್ರಶಸ್ತಿ ಗೆದ್ದ ಮಂಗಳೂರು ವಿಶ್ವವಿದ್ಯಾನಿಲಯ ತಂಡದ ಆಟಗಾರರು ಕೋಚ್ ಮತ್ತು ಅತಿಥಿಗಳ ಜೊತೆ ಸಂಭ್ರಮಿಸಿದರು
ಉಡುಪಿಯಲ್ಲಿ ಶನಿವಾರ ಮುಕ್ತಾಯಗೊಂಡ ಅಖಿಲ ಭಾರತ ಅಂತರ ವಿವಿ ಪುರುಷರ ಕೊಕ್ಕೊ ಟೂರ್ನಿಯ ಪ್ರಶಸ್ತಿ ಗೆದ್ದ ಮಂಗಳೂರು ವಿಶ್ವವಿದ್ಯಾನಿಲಯ ತಂಡದ ಆಟಗಾರರು ಕೋಚ್ ಮತ್ತು ಅತಿಥಿಗಳ ಜೊತೆ ಸಂಭ್ರಮಿಸಿದರು   

ಉಡುಪಿ: ಗ್ರಾಮೀಣ ಕ್ರೀಡೆಯಾದ ಕೊಕ್ಕೊ ಒಲಿಂಪಿಕ್‍ಗೆ ಸೇರುವಂತಾಗಬೇಕು ಎಂದು ಉಡುಪಿಯ ಅದಮಾರು ಮಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಕೊಕ್ಕೊ ಟೂರ್ನಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ದುಶ್ಚಟಗಳಿಂದ ದೂರವಿರಲು ಕ್ರೀಡೆ ಸಹಕಾರಿಯಾಗಿದೆ. ಆದ್ದರಿಂದ ಯುವ ಜನತೆ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

ADVERTISEMENT

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪಿ.ಎಲ್ ಧರ್ಮ ಮಾತನಾಡಿ, ಶೈಕ್ಷಣಿಕ ವಲಯದಲ್ಲಿ ಉತ್ತಮ ಶಿಕ್ಷಕರ ಕೊರತೆ ಹೆಚ್ಚಿದೆ. ಪದವೀಧರರು ಶಿಕ್ಷಕರಾಗುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ದೇಶದಲ್ಲೇ ಉದ್ಯೋಗ ಸಿಗುವಂತಾಗಬೇಕು. ಪ್ರತಿಭೆಗಳ ವಿದೇಶಿ ಪಲಾಯನ ತಪ್ಪಬೇಕು ಎಂದರು.

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಪಿಪಿಸಿ ತನ್ನದೇ ಕೊಡುಗೆ ನೀಡುತ್ತಾ ಬರುತ್ತಿದೆ. ಕ್ರೀಡೆಗೂ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಗೋಪಾಲ ಸಬರಾಯ, ಪಿಐಎಂ ನಿರ್ದೇಶಕ ಡಾ.ಪಿ.ಶ್ರೀರಮಣ ಐತಾಳ್, ಗೌರವ ಕಾರ್ಯದರ್ಶಿ ಡಾ.ಎ.ಪಿ. ಭಟ್, ಪ್ರಾಂಶುಪಾಲ ಡಾ.‌ಎಲ್. ರಾಮು, ಸಂಸ್ಥೆಯ ಕೋಶಾಧಿಕಾರಿಗಳಾದ ಪ್ರಶಾಂತ್ ಹೊಳ್ಳ, ಗಣೇಶ್ ಹೆಬ್ಬಾರ್, ಜಿ.ವಿ.ಕೃಷ್ಣ ಉಪಸ್ಥಿತರಿದ್ದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್ ಸ್ವಾಗತಿಸಿದರು. ಕ್ರೀಡಾಕೂಟದ ಸಂಯೋಜಕ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ವಂದಿಸಿದರು.

ಸಂಯೋಜನ ಕಾರ್ಯದರ್ಶಿ ಹಾಗೂ ಮಂಗಳೂರು ವಿ.ವಿ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಜೆರಾಲ್ಡ್ ಸಂತೋಷ ಡಿಸೋಜಾ ವರದಿ ವಾಚಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಅಪೂರ್ವ ಮೇರಿ ಓಸ್ಟಾ ನಿರೂಪಿಸಿದರು.

ಪಠ್ಯದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಕೊಕ್ಕೊ ಕ್ರೀಡೆಗೆ ಕಾಲೇಜಿನ ಹಂತದಲ್ಲಿ ಇನ್ನಷ್ಟು ಮಹತ್ವ ನೀಡುವ ಕೆಲಸ ಆಗಬೇಕು
ಕೆ. ಜಯಪ್ರಕಾಶ್ ಹೆಗ್ಡೆ ಮುಖಂಡ

11-10 ಪಾಯಿಂಟ್‌ನಿಂದ ಜಯ

ಉಡುಪಿ/ಮೂಡುಬಿದಿರೆ: ಆತಿಥೇಯ ಮಂಗಳೂರು ವಿಶ್ವವಿದ್ಯಾನಿಲಯ ತಂಡ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ಕೊಕ್ಕೊ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡಿತು. ಶನಿವಾರ ನಡೆದ ಫೈನಲ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ 11-10 ಪಾಯಿಂಟ್‌ಗಳಿಂದ ಮುಂಬೈ ವಿಶ್ವವಿದ್ಯಾಲಯದ ವಿರುದ್ಧ ಜಯ ಸಾಧಿಸಿತು. ಈ ಮೂಲಕ ಎರಡನೇ ಬಾರಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.

ಮಂಗಳೂರು ವಿವಿಯನ್ನು ಪ್ರತಿನಿಧಿಸಿದ 15 ಮಂದಿ ಆಟಗಾರರ ಪೈಕಿ 13 ಮಂದಿ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳು ಎಂದು ಆಳ್ವಾಸ್ ಕಾಲೇಜಿನ ಪ್ರಕಟಣೆ ತಿಳಿಸಿದೆ. ಸೆಮಿಫೈನಲ್‌ನಲ್ಲಿ ಮಂಗಳೂರು ವಿವಿ ತಂಡ ಮಹಾರಾಷ್ಟ್ರ ನಾಂದೇಡ್‌ನ ಸ್ವಾಮಿ ರಮಾನಂದತೀರ್ಥ ಮರಾಠವಾಡ ವಿವಿಯನ್ನು 21–17ರಲ್ಲಿ ಮಣಿಸಿತ್ತು. ಎಂಟರ ಘಟ್ಟದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ವಿವಿ ವಿರುದ್ಧ ಮತ್ತು ಲೀಗ್ ಪಂದ್ಯಗಳಲ್ಲಿ ಮಂಗಳೂರು ದೆಹಲಿ ವಿವಿ ಹೇಮಚಂದ್ ವಿವಿ ಹಾಗೂ ಸಾವಿತ್ರಿ ಬಾಯಿ ಫುಲೆ ವಿವಿ ವಿರುದ್ಧ ಜಯ ಗಳಿಸಿತ್ತು. 

ಆಳ್ವಾಸ್‌ ಕಾಲೇಜಿನ ದೀಕ್ಷಿತ್ ಉತ್ತಮ ಚೇಸರ್‌ ಪ್ರಶಸ್ತಿ ಪಡೆದರೆ ನಿಖಿಲ್ ಉತ್ತಮ ಡಿಫೆಂಡರ್‌ ಪ್ರಶಸ್ತಿ ಮುಂಬೈ ವಿವಿಯ ಆಕಾಶ್ ಕದಂ ಉತ್ತಮ ಆಲ್‌ರೌಂಡರ್ ಪ್ರಶಸ್ತಿ ತನ್ನದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.