ಕುಂದಾಪುರ : ಮದುವೆ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿಗಳಾದ ರಾಜೇಂದ್ರ ಶೆಟ್ಟಿ ಹಾಗೂ ರಾಘವೇಂದ್ರ ಶೆಟ್ಟಿಗೆ 5 ವರ್ಷ ಕಠಿಣ ಸಜೆ ಹಾಗೂ ₹50 ಸಾವಿರ ದಂಡ ವಿಧಿಸಿ ಶನಿವಾರ ಇಲ್ಲಿನ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶಿದೆ.
ಘಟನೆಯ ವಿವರ : 2015ರಲ್ಲಿ ಬೈಂದೂರು ತಾಲ್ಲೂಕಿನ ತೆಗ್ಗರ್ಸೆಯ ಅರಳಿಕಟ್ಟೆಯ ನಿವಾಸಿ ಕುಶಲ ಶೆಟ್ಟಿಯವರ ಮಗನ ಮದುವೆ ಸಮಾರಂಭ ಉಪ್ಪುಂದದ ಸಭಾಗೃಹದಲ್ಲಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮನೆಯವರೊಂದಿಗೆ ಇದ್ದ ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಬೈಂದೂರು ತೆಗ್ಗರ್ಸೆಯ ಅರಳಿಕಟ್ಟೆ ನಿವಾಸಿಗಳಾದ ರಾಜೇಶ್ ಶೆಟ್ಟಿ ಯಾನೆ ರಾಜೇಂದ್ರ (35) ಹಾಗೂ ರಾಘವೇಂದ್ರ ಶೆಟ್ಟಿ(33) ಎನ್ನುವವರು ಕುಶಲ ಶೆಟ್ಟಿಯ ಮನೆಗೆ ಬೆಂಕಿ ಹಚ್ಚಿದ್ದರು ಎಂದು ಪ್ರಕರಣ ದಾಖಲಾಗಿತ್ತು.
ಬೈಂದೂರಿನ ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳ ವಿರುದ್ಧ ಜಿಲ್ಲಾ ಸರ್ಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು. ನ್ಯಾಯಾಧೀಶರಾದ ಪ್ರಕಾಶ್ ಖಂಡೇರಿ ಅವರು ದಂಡದ ಮೊತ್ತದಲ್ಲಿ ₹ 45 ಸಾವಿರ ದೂರುದಾರರಿಗೆ ನೀಡುವಂತೆ ಆದೇಶಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.