
ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನಂದಿ ವಿಗ್ರಹಕ್ಕೆ ರಜತ ಕವಚ ನಿರ್ಮಾಣಕ್ಕಾಗಿ ದೇವರ ಬಾಲಾಲಯದಲ್ಲಿ ಮುಹೂರ್ತ ನೆರವೇರಿಸಲಾಯಿತು
ಪಡುಬಿದ್ರಿ: ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ತೀರ್ಥಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವ ನಂದಿ ವಿಗ್ರಹಕ್ಕೆ ರಜತ ಕವಚ ನಿರ್ಮಾಣಕ್ಕಾಗಿ ದೇವರ ಬಾಲಾಲಯದಲ್ಲಿ ಮುಹೂರ್ತ ನಡೆಸಲಾಯಿತು.
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಕೈಜೋಡಿಸಿರುವ ಮಾತೃ ಮಂಡಳಿಯ ಮುತುವರ್ಜಿಯಲ್ಲಿ ಬೆಳ್ಳಿ ಹಾಗೂ ನಗದನ್ನು ಸಂಗ್ರಹಿಸಲಾಗಿತ್ತು. ಸಂಗ್ರಹಗೊಂಡಿರುವ ಸುಮಾರು 4 ಕೆ.ಜಿ. ಬೆಳ್ಳಿ ಹಾಗೂ 5 ಗ್ರಾಂ ಚಿನ್ನವನ್ನು ಕಾರ್ಕಳದ ರಜತೋದ್ಯಮಿ ಪ್ರಕಾಶ್ ಆಚಾರ್ಯ ಅವರಿಗೆ ಹಸ್ತಾಂತರಿಸಲಾಯಿತು. ಭಕ್ತರಿಂದ ಸಂಗ್ರಹಿಸಿರುವ ₹3.13 ಲಕ್ಷ ನಗದನ್ನು ರಜತ ಕವಚ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಲಾಯಿತು.
ದೇವಸ್ಥಾನದ ಅರ್ಚಕ ಎಚ್. ಪದ್ಮನಾಭ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಪುರಾಣವಾಚಕರಾದ ಶ್ರೀನಿವಾಸ ಆಚಾರ್ಯ, ಆನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಜೀಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ. ರಾಘವೇಂದ್ರ ನಾವಡ, ರಜತ ಕವಚ ನಿರ್ಮಾಣ ಕಾರ್ಯದ ಸಂಯೋಜಕ ಪ್ರಸಾದ್ ಆಚಾರ್ಯ ಪಡುಬಿದ್ರಿ, ಮಾತೃ ಮಂಡಳಿಯ ಗೌರವಾಧ್ಯಕ್ಷೆ ಶಕುಂತಳಾ ಭವಾನಿಶಂಕರ ಹೆಗ್ಡೆ, ಅಧ್ಯಕ್ಷೆ ಸುಧಾ ಆರ್. ನಾವಡ, ಕಾರ್ಯದರ್ಶಿ ಕಸ್ತೂರಿ ರಾಮಚಂದ್ರ ಇದ್ದರು.
ಕೈಜೋಡಿಸಿ: ಫನಂದಿಯ ರಜತ ಕವಚ ನಿರ್ಮಾಣ ಕಾರ್ಯಕ್ಕೆ ನೆರವು ನೀಡಲು ಫೆ.28ರವರೆಗೆ ಅವಕಾಶವಿದೆ. ರಜತ ದಾನ ಸಂಕಲ್ಪದೊಂದಿಗೆ ಮಾತೃ ಮಂಡಳಿ ಜೊತೆ ಕೈಜೋಡಿಸಬಹುದು. ದೇವರ ಸನ್ನಿಧಾನದ ಜೀರ್ಣೋದ್ಧಾರ, ಪುನರ್ ನವೀಕರಣ ಕಾರ್ಯಗಳಲ್ಲಿ ಭಕ್ತರ ಸಹಕಾರ ಬೇಕು. ನಿರೀಕ್ಷೆಯಂತೆ ಸಾಗಿದಲ್ಲಿ ಮುಂದಿನ ಏಪ್ರಿಲ್ ವೇಳೆಗೆ ಪುನರ್ ಪ್ರತಿಷ್ಠೆ, ಮೇ ಮೊದಲ ವಾರದಲ್ಲಿ ಬ್ರಹ್ಮಕಲಶೋತ್ಸವವನ್ನು ನೆರವೇರಿಸಲು ಸಂಕಲ್ಪಿಸಲಾಗಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.