ಉಡುಪಿ: ತಮಿಳುನಾಡಿನ ತಿರಪತ್ತೂರಿನಲ್ಲಿ ಪೊಲೀಸರಿಗೆ ಶರಣಾದ ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಅನಾರೋಗ್ಯದ ಕಾರಣದಿಂದ ಪೊಲೀಸರ ಮುಂದೆ ಶರಣಾಗಬೇಕಾಯಿತು ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಏಳೆಂಟು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದ ಹೊಸಗದ್ದೆ ಪ್ರಭಾ, ನಂತರ ನಾಪತ್ತೆಯಾಗಿದ್ದಳು. ನಾಲ್ಕೈದು ವರ್ಷಗಳ ಹಿಂದೆ, ಆಕೆಯ ಕೈಗೆ ಪಾರ್ಶ್ವವಾಯುವಾಗಿದ್ದರಿಂದ ಹಾಗೂ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರಿಂದ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಈ ಕಾರಣದಿಂದ ತಮಿಳುನಾಡಿನ ಕ್ಯೂ ಬ್ರಾಂಚ್ ಮುಂದೆ ಪ್ರಭಾ ಶರಣಾಗಬೇಕಾಯಿತು.
ಕರ್ನಾಟಕದಲ್ಲಿ ನಕ್ಸಲ್ ನಿಗ್ರಹ ಪಡೆಯ ನಿರಂತರ ಕೂಂಬಿಂಗ್ ಕಾರ್ಯಾಚರಣೆ ಹಾಗೂ ನಕ್ಸಲ್ ಚಟುವಟಿಕೆಗಳಿಗೆ ಪಶ್ಚಿಮಘಟ್ಟಗಳ ಗ್ರಾಮಸ್ಥರ ಅಸಹಕಾರದ ಪರಿಣಾಮ ನಕ್ಸಲ್ ಚಟುವಟಿಕೆಗಳು ರಾಜ್ಯದಿಂದ ಕಾಲ್ಕಿತ್ತು ನೆರೆಯ ರಾಜ್ಯಗಳಿಗೆ ಸ್ಥಳಾಂತರವಾಗಬೇಕಾಯಿತು. ಹೊಸಗದ್ದೆ ಪ್ರಭಾ ಕೂಡ ತಮಿಳುನಾಡಿನ ಅರಣ್ಯದೊಳಗೆ ಭೂಗತವಾಗಿದ್ದಳು ಎಂದು ಮೂಲಗಳು ತಿಳಿಸಿವೆ.
ಹೊಸಗದ್ದೆ ಪ್ರಭಾ ವಿರುದ್ಧ ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 41 ಪ್ರಕರಣಗಳು ದಾಖಲಾಗಿವೆ. ಶಿವಮೊಗ್ಗ ಜಿಲ್ಲೆಯ ಆಗುಂಬೆ ಸಮೀಪದ ಹೊಸಗದ್ದೆ ಆಕೆಯ ಮೂಲ ಎಂದು ನಕ್ಸಲ್ ನಿಗ್ರಹಪಡೆಯ ಎಸ್ಪಿ ಪ್ರಕಾಶ್ ನಿಕ್ಕಂ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.