ADVERTISEMENT

ನೀಲಾವರ ಗ್ರಾಮಸ್ಥರಿಂದ ಮಹಿಳಾ ದಿನಾಚರಣೆ

‘ಸಮಾಜದಲ್ಲಿ ಸ್ತ್ರೀ– ಪುರುಷರು ಸಮಾನರಾಗಿ ಸಾಗಿದಾಗ ಜೀವನ ಸುಗಮ’

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2025, 7:50 IST
Last Updated 15 ಮಾರ್ಚ್ 2025, 7:50 IST
ನೀಲಾವರದಲ್ಲಿ ನಡೆದ ಮಹಿಳಾ ದಿನಾಚರಣೆ ಸಶಕ್ತ ಮಹಿಳೆ ಸಶಕ್ತ ಸಮಾಜ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು
ನೀಲಾವರದಲ್ಲಿ ನಡೆದ ಮಹಿಳಾ ದಿನಾಚರಣೆ ಸಶಕ್ತ ಮಹಿಳೆ ಸಶಕ್ತ ಸಮಾಜ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು   

ನೀಲಾವರ (ಬ್ರಹ್ಮಾವರ): ನೀಲಾವರ ಗ್ರಾಮಸ್ಥರು, ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆಯನ್ನು ‘ಸಶಕ್ತ ಮಹಿಳೆ– ಸಶಕ್ತ ಸಮಾಜ’ ಕಾರ್ಯಕ್ರಮ, ‘ಜೀವನ ಪ್ರೇರಣ ಹಿತವಚನ’ ಮತ್ತು ಸಾಧಕ ಮಹಿಳೆಯರಿಗೆ ಸನ್ಮಾನಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.

ದಿಕ್ಸೂಚಿ ಭಾಷಣ ಮಾಡಿದ ತೆಂಕನಿಡಿಯೂರು ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಪ್ರಕಾಶಿನಿ, ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿದ್ದರೂ ಸಮಾಜದಲ್ಲಿ ಲಿಂಗ ಸಮಾನತೆ ಪರಿಪಕ್ವಗೊಂಡಿಲ್ಲ. ಹೆಣ್ಣನ್ನು ದ್ವಿತೀಯ ಪ್ರಜೆಯಾಗಿ ಬಿಂಬಿಸಲಾಗುತ್ತಿದೆ. ಈ ಅಸಮಾನತೆ ಹೋಗಲಾಡಿಸಲು ಎಲ್ಲರೂ ಒಟ್ಟಾಗಬೇಕು. ಇದರಿಂದ ಮಹಿಳೆಯರ ಮೇಲಾಗುವ‌ ದೌರ್ಜನ್ಯ ಕಡಿಮೆಯಾಗುತ್ತದೆ ಎಂದರು.

ಸ್ತ್ರೀ ಶಿಕ್ಷಣ ಹೆಚ್ಚಬೇಕು. ಮಹಿಳೆಯರಿಗೆ ಯೋಜನೆಗಳ ಬಗ್ಗೆ ಮಾಹಿತಿ ಸಿಗುವಂತಾಗಬೇಕು. ಸಮಾಜದಲ್ಲಿ ಸ್ತ್ರೀ– ಪುರುಷರು ಸಮಾನರಾಗಿ ಸಾಗಿದಲ್ಲಿ ಮಾತ್ರ ಜೀವನ ಸುಗಮವಾಗಿ ಸಾಗಲು ಸಾಧ್ಯ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಆಗಿರುವುದರಿಂದ ಅವರಲ್ಲಿ ಆತ್ಮವಿಶ್ವಾಸ ತುಂಬಿಸುವ, ಸಕಾರಾತ್ಮಕ  ಚಿಂತನೆ ಬೆಳೆಸುವ ಕೆಲಸ ಮಹಿಳೆಯರಿಂದ ಆಗಬೇಕು ಎಂದರು.

ADVERTISEMENT

ಕಾರ್ಯಕ್ರಮ ಸಂಚಾಲಕ ಮಹೇಂದ್ರ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ನೀಲಾವರ‌ ಮಹಿಷಮರ್ದಿನಿ‌ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘುರಾಮ ಮಧ್ಯಸ್ಥ ಶುಭ ಹಾರೈಸಿದರು. ರಾಷ್ಟ್ರ ಮಟ್ಟದ ಥ್ರೋಬಾಲ್‌ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದ ಮಟಪಾಡಿ ಬಲ್ಜಿಯ ಅನಿತಾ, ಸಮೃದ್ಧಿ ಮಹಿಳಾ ಮಂಡಳಿಯ ಲತಾ ಡಿ. ಶೆಟ್ಟಿ, ಶಿಕ್ಷಕಿ ಪ್ರಕಾಶಿನಿ ಅವರನ್ನು ಸನ್ಮಾನಿಸಲಾಯಿತು. ಮುದ್ದೂರು ವಿ.ಎಸ್‌.ಎಸ್‌ ಆಂಗ್ಲಮಾಧ್ಯಮ ಶಾಲೆ ಅಧ್ಯಕ್ಷ ಪ್ರತಾಪ ಹೆಗ್ಡೆ ಮಾರಾಳಿ, ಆಡಳಿತಾಧಿಕಾರಿ ಹೆರಾಲ್ಡ್‌ ಬಿ. ಲೇವಿಸ್‌ ಅವರನ್ನು ಗೌರವಿಸಲಾಯಿತು.

ನೀಲಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ. ಬೇಬಿ, ಅಭಿವೃದ್ಧಿ ಅಧಿಕಾರಿ ಗೀತಾ ಬಾಳಿಗ,  ಚೇರ್ಕಾಡಿ ಸಮೃದ್ಧಿ ಮಹಿಳಾ ಮಂಡಳಿ ಅಧ್ಯಕ್ಷೆ ಲತಾ ಡಿ. ಶೆಟ್ಟಿ, ಚೈತನ್ಯ ಯುವಕ ಮಂಡಲದ ಅಧ್ಯಕ್ಷ ಶ್ಯಾಮರಾಯ ಆಚಾರ್ಯ, ಎಳ್ಳಂಪಳ್ಳಿ ಟೀಂ ಸಾಂಸ್ಕೃತಿಕ ಕಲರವ ಅಧ್ಯಕ್ಷ ಜಗದೀಶ ಶೆಟ್ಟಿ, ಮಹಿಷ ಮರ್ದಿನಿ ಭಜನಾ ಮಂಡಳಿ ಅಧ್ಯಕ್ಷ ರಾಘವೇಂದ್ರ ದೇವಾಡಿಗ, ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಹೇಮಾ ವಿ. ಬಾಸ್ರಿ, ಮೂಕಾಂಬಿಕಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಆಶಾಲತಾ ಮಕ್ಕಿತ್ತಾಯ, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅನುಷಾ ಭಾಗವಹಿಸಿದ್ದರು.

ಚೈತನ್ಯ ಯುವಕ ಮಂಡಲದ ಪ್ರಶಾಂತ ನೀಲಾವರ ಸ್ವಾಗತಿಸಿದರು. ಉಪನ್ಯಾಸಕ ಸಂತೋಷ ಶೆಟ್ಟಿ ಎಳ್ಳಂಪಳ್ಳಿ ನಿರೂಪಿಸಿದರು. ನೀಲಾವರದ ಚೈತನ್ಯ ಯುವಕ ಮಂಡಲ, ಎಂ.ಎಂ.ಸಿ ಫ್ರೆಂಡ್ಸ್, ಎಳ್ಳಂಪಳ್ಳಿಯ ಟೀಮ್ ಸಾಂಸ್ಕೃತಿಕ ಕಲರವ, ಮಹಿಷಮರ್ದಿನಿ ವಿಪ್ರ ಮಹಿಳಾ ಬಳಗ, ಭಜನಾ ಮಂಡಳಿ, ತಡೆಕಲ್ಲು ಮಹಾಲಿಂಗೇಶ್ವರ ಮಹಾಗಣಪತಿ ಮಹಿಳಾ ಭಜನಾ ಮಂಡಳಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯಕ್ರಮ ಸಂಘಟಿಸಿದ್ದರು.

ಮುದ್ದೂರು ವಿ.ಎಸ್‌.ಎಸ್‌ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿಗಳಿಂದ ಕಲಾಸಿರಿ ವೈಭವ, ಗಾನ– ನೃತ್ಯ ಸಂಸ್ಕೃತಿಯ ಐಸಿರಿ ಕಾರ್ಯಕ್ರಮ ನಡೆಯಿತು.

ಮಕ್ಕಳಲ್ಲಿ ಮೌಲ್ಯ ಕಡಿಮೆಯಾಗುತ್ತಿದೆ. ಅವುಗಳನ್ನು ಅವಿಭಕ್ತ ಕುಟುಂಬ ಮಹಿಳೆಯರು ಮಾತ್ರ ನೀಡಲು ಸಾಧ್ಯ.
–ಪ್ರಕಾಶಿನಿ, ಶಿಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.