ADVERTISEMENT

ಬ್ರಹ್ಮಾವರ | ಪ್ರಕೃತಿ ನಂಬಿ ಜೀವನ ಸಾಗಿಸುವ ರೈತ: ಮಂಜುನಾಥ ಭಂಡಾರಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 4:54 IST
Last Updated 13 ಅಕ್ಟೋಬರ್ 2025, 4:54 IST
ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ನಡೆದ ಕೃಷಿ ಮೇಳದಲ್ಲಿ ಭಾನುವಾರ ವಿಚಾರಗೋಷ್ಟಿಗಳಿಗೆ ವಿಧಾನಪರಿಷತ್‌ಸದಸ್ಯ ಮಂಜುನಾಥ ಭಂಡಾರಿ ಚಾಲನೆ ನೀಡಿದರು.
ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ನಡೆದ ಕೃಷಿ ಮೇಳದಲ್ಲಿ ಭಾನುವಾರ ವಿಚಾರಗೋಷ್ಟಿಗಳಿಗೆ ವಿಧಾನಪರಿಷತ್‌ಸದಸ್ಯ ಮಂಜುನಾಥ ಭಂಡಾರಿ ಚಾಲನೆ ನೀಡಿದರು.   

ಬ್ರಹ್ಮಾವರ: ‘ವಿವಿಧ ಕೇತ್ರಗಳಲ್ಲಿ ಲಾಭ ಕಂಡು ವ್ಯಾಪಾರ ಮಾಡುತ್ತಾರೆ. ಆದರೆ ರೈತ ಪ್ರಕೃತಿಯನ್ನು ನಂಬಿ– ಲಾಭ ನಷ್ಟ ತಿಳಿಯದೆ ಕೃಷಿ ಮಾಡಿ ಜೀವನ ನಡೆಸುತ್ತಾನೆ’ ಎಂದು ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಇಲ್ಲಿನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ನಡೆದ ಕೃಷಿ ಮೇಳದಲ್ಲಿ ಭಾನುವಾರ ನಡೆದ ವಿಚಾರಗೋಷ್ಠಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜೀವನದಲ್ಲಿ ಸಮಾಧಾನದ ಕ್ಷೇತ್ರ ಎಂದರೆ ಕೃಷಿ. ಸ್ವಲ್ಪ ಸಮಯ ಕೃಷಿ, ತೋಟಗಾರಿಕೆಗೆ ನೀಡಿ, ನಮ್ಮ ಮಣ್ಣನ್ನು ಮುಟ್ಟಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಒತ್ತಡ, ಕಷ್ಟ ಎಲ್ಲವನ್ನೂ ಮರೆಯುತ್ತೇವೆ. ಇಂದು ರೈತ ದುಡ್ಡಿನ ಆಸೆಗೋಸ್ಕರ ಜಮೀನು ಮಾರಾಟ ಮಾಡಿ ನೆಮ್ಮದಿಯ ಜೀವನ ಕಾಣ ಬಯಸುತ್ತಾನೆ. ಕೃಷಿ ಭೂಮಿಯಲ್ಲಿ ಮಿಶ್ರ ಬೆಳೆಗಳನ್ನು ಬೆಳೆಸಿ ಸ್ವಂತ ಕಾಲಿನಲ್ಲಿ ನಿಲ್ಲುವ ಪ್ರಯತ್ನ ಯುವಜನರು ಮಾಡಬೇಕು ಎಂದರು.

ADVERTISEMENT

ರಾಜ್ಯದ ವಿಶ್ವವಿದ್ಯಾಲಯಗಳು ಎಕರೆಗಟ್ಟಲೆ ಜಮೀನು ಹೊಂದಿವೆ. ಸರ್ಕಾರದ ಅನುದಾನ ಪಡೆಯದೆ ಆ ಜಮೀನಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಸಿ ಆರ್ಥಿಕ ಸ್ಥಿತಿ ಸದೃಢಗೊಳಿಸಿಕೊಂಡು ಸ್ವಾವಲಂಬಿಯಾಗಿ ವಿಶ್ವವಿದ್ಯಾಲಯ ನಡೆಯುವಂತಾಗಬೇಕು. ಮಾದರಿಯಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.

ನಂತರ ನಡೆದ ಗೇರು ಬೆಳೆ, ಕರಾವಳಿಗೆ ಭವಿಷ್ಯದ ಬೆಳೆಗಳು ಮತ್ತು ತಾಂತ್ರಿಕತೆಗಳು ವಿಚಾರಗೋಷ್ಠಿಯಲ್ಲಿ ಕಾರ್ಕಳ ಶಿರ್ಲಾಲಿನ ಪ್ರಗತಿಪರ ಕೃಷಿಕ ಗುಣಪಾಲ ಕಡಂಬ, ದ.ಕ. ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಿ. ಮಂಜುನಾಥ, ಕುದಿ ಗ್ರಾಮದ ಶ್ರೀನಿವಾಸ ಭಟ್‌, ಪ್ರಗತಿಪರ ಕೃಷಿಕ ಯಡ್ತಾಡಿ ಸತೀಶ ಶೆಟ್ಟಿ ಭಾಗವಹಿಸಿದ್ದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಚೈತನ್ಯ ಎಚ್‌.ಎಸ್‌. ‘ಗೇರು ಮತ್ತು ಕೊಕ್ಕೊ ಕೃಷಿ’, ಬಂಟ್ವಾಳ ಪೆರುವಾಯಿಯ ಕೃಷಿಕ ಅನಂತರಾಮಕೃಷ್ಣ ‘ಅಡಿಕೆಯಲ್ಲಿ ಸ್ವಯಂಚಾಲಿತ ನೀರಾವರಿ’, ‘ಧೂಪದ ಮರದಲ್ಲಿ ಕಾಳುಮೆಣಸು ಕೃಷಿ’, ಪುತ್ತೂರು ಚಿಕ್ಕಮಡ್ನೂರಿನ ಕೃಷಿಕ ಅಜಿತ್‌ ಪ್ರಸಾದ ರೈ ಕಾಳುಮೆಣಸು ಕೃಷಿ ಅನುಭವ ಹಂಚಿಕೆ, ಉಡುಪಿಯ ಸಂಜೀವಿನಿ ಜಿಲ್ಲಾ ವ್ಯವಸ್ಥಾಪಕ ಅವಿನಾಶ ಅವರು ‘ಕೃಷಿ ವಿಸ್ತರಣೆಯಲ್ಲಿ ಕೃಷಿ ಸಖಿಯರ ಪಾತ್ರ’ ಬಗ್ಗೆ ಮಾಹಿತಿ ನೀಡಿದರು.

ಡಿಪ್ಲೊಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಕೆ.ವಿ. ಸುಧೀರ ಕಾಮತ್‌ ಸ್ವಾಗತಿಸಿದರು. ಕೆವಿಕೆ ಮುಖ್ಯಸ್ಥ ಧನಂಜಯ ಬಿ. ವಂದಿಸಿದರು. ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಂಗ ಸಂಸ್ಥೆಗಳಾದ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ, ಉಳ್ಳಾಲದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಅರಣ್ಯ ಇಲಾಖೆ, ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೃಷಿ ಮೇಳದಲ್ಲಿ ವಿಚಾರಗೋಷ್ಠಿಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.