ಉಡುಪಿ:ಕೃಷಿ ಸ್ವಪ್ರತಿಷ್ಠೆಯ ಕಾಯಕ ಎಂದು ಭಾವಿಸಿ ಜಮೀನು ಹಡಿಲು ಬಿಡದೆ ಕೃಷಿ ಚಟುವಟಿಕೆ ಮಾಡಬೇಕು ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ನಿಟ್ಟೂರು ಪ್ರೌಢಶಾಲಾ ಸುವರ್ಣ ಪರ್ವ ಕಾರ್ಯಕ್ರಮದ ಭಾಗವಾಗಿ ಬುಧವಾರ ಕರಂಬಳ್ಳಿಯ ಸಂಜೀವ ಶೆಟ್ಟಿ ಮಾರ್ಗದ ಬಳಿಯ ಹಡಿಲು ಭೂಮಿಯಲ್ಲಿ ಕೃಷಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶ ಸದೃಢವಾಗಿರಬೇಕಾದರೆ ಕೃಷಿ ಕ್ಷೇತ್ರ ಬಲಿಷ್ಠವಾಗಿರಬೇಕು. ದೇಶದ ಆರ್ಥಿಕತೆಗೆ ಆಹಾರ ಉತ್ಪಾದನಾ ಕ್ಷೇತ್ರದ ಕೊಡುಗೆ ದೊಡ್ಡದು. ಕೃಷಿ ಭೂಮಿಯನ್ನು ಬಂಜರಾಗಲು ಬಿಡಬಾರದು. ಈಚೆಗೆ ಜನರು ಕೃಷಿಯತ್ತ ಒಲವು ತೋರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು,ಹೀಗೆ ಮುಂದುವರಿಯಲಿ ಎಂದು ಆಶಿಸಿದರು.
ಈ ಸಂದರ್ಭ ನಗರಸಭಾ ಸದಸ್ಯ ಗಿರಿಧರ್ ಆಚಾರ್ಯ, ಬಾಲಕೃಷ್ಣ ಶೆಟ್ಟಿ, ನಿಟ್ಟೂರು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್, ಸುವರ್ಣ ಪರ್ವದ ಅಧ್ಯಕ್ಷ ಯೋಗೀಶ್ ಚಂದ್ರಾಧರ್, ಗೋಪಾಲ ಶೆಟ್ಟಿ ಇದ್ದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಂದ ನಾಟಿ:
ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ, ಯುವ ಮೋರ್ಚಾ ಮಹಿಳಾ ಮೋರ್ಚಾ ಆಶ್ರಯದಲ್ಲಿ ಅಲೆವೂರಿನ ಕರ್ವಾಲಿನಲ್ಲಿ ಬುಧವಾರ ಕಂಡಡೊಂಜಿ ದಿನ ಕಾರ್ಯಕ್ರಮವನ್ನು ಭತ್ತದ ಪೈರು ನೆಡುವ ಮೂಲಕ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಿದರು.
ನಂತರ ಮಾತನಾಡಿ, ‘ರೈತ ದೇಶದ ಬೆನ್ನೆಲೆಬು, ಕೊರೊನಾ ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರನ್ನು ಹಾಗೂ ನಿರಾಶ್ರಿತರನ್ನು ಕಾಪಾಡಿದ್ದು ರೈತ ಬೆಳೆದ ಧಾನ್ಯಗಳು. ಕೃಷಿಗೆ ಸದಾ ಪ್ರಾಧಾನ್ಯತೆ ದೊರೆಯಬೇಕು ಎಂದರು.
ಕಾರ್ಯಕ್ರಮದಲ್ಲಿ 10 ಕೃಷಿಕರನ್ನು ಸನ್ಮಾನಿಸಲಾಯಿತು. ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ದಕ್ಷಿಣ ಕನ್ನಡ ಮೀನು ಮಾರಾಟಗಾರರ ಮಹಾ ಮಂಡಲದ ಅಧ್ಯಕ್ಷ ಯಶಪಾಲ್ ಸುವರ್ಣ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸದಸ್ಯೆ ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಎಂ. ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಮುಖಂಡರಾದ ಸಚಿನ್ ಪಿತ್ರೋಡಿ, ಸುಮಾ ಶೆಟ್ಟಿ, ಗೋಪಾಲಕೃಷ್ಣ ರಾವ್, ಅನಿಲ್ ಶೆಟ್ಟಿ, ಗಂಗಾಧರ ಸುವರ್ಣ, ಬೇಬಿ ರಾಜೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.