ಪಡುಬಿದ್ರಿ: ‘ತಾಸೆಯ ಪೆಟ್ಟಿಗೆ’ ಹೆಣ್ಣು ಮಕ್ಕಳ ಹುಲಿ ಕುಣಿತ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಉಚ್ಚಿಲದ ಶ್ರೀಮಹಾಲಕ್ಷ್ಮಿ ದೇವಸ್ಥಾನ ಸಭಾಂಗಣದಲ್ಲಿ ಉಚ್ಚಿಲ ದಸರಾ ಪ್ರಯುಕ್ತ ಉಡಪಿಯ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ, ಶನಿವಾರ ನಡೆದ ‘ಹೆಣ್ಣು ಹುಲಿ ನೃತ್ಯ ಸ್ಪರ್ಧೆ’ಯಲ್ಲಿ 20 ತಂಡಗಳು ಭಾಗವಹಿಸಿದ್ದವು. 5 ವರ್ಷದ ಪುಟಾಣಿಯಿಂದ ಹಿಡಿದು 60 ವರ್ಷ ವಯಸ್ಸಿನೊಳಗಿನ ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡರು.
ವಿವಿಧ ರೀತಿಯ ಹುಲಿ ನೃತ್ಯಗಳು, ಅಕ್ಕಿಮುಡಿ ಎಸೆತ, ನೃತ್ಯದಲ್ಲಿ ವಿವಿಧ ಕಸರತ್ತು ಮಾಡುವ ಮೂಲಕ ಗಂಡು ಹುಲಿ ವೇಷಧಾರಿಗಳಿಗೆ ಸವಾಲೊಡ್ಡುವಂತಿತ್ತು. ದರ್ಪಣ ತಂಡ (ಪ್ರಥಮ) ₹30 ಸಾವಿರ ನಗದು ಬಹುಮಾನ, ಡಿಡಿ ಗ್ರೂಪ್ ನಿಟ್ಟೂರು (ದ್ವಿತೀಯ) ₹20 ಸಾವಿರ, ಫ್ರೆಂಡ್ಸ್ ಕೊರಂಗ್ರಪಾಡಿ (ತೃತೀಯ) ₹15 ಸಾವಿರ ನಗದಿನೊಂದಿಗೆ ಬಹುಮಾನ ಪಡೆದುಕೊಂಡಿತು. ವೈಯಕ್ತಿಕ ವಿಭಾಗದಲ್ಲಿ ಸೌಮ್ಯ ಸುರೇಂದ್ರ (ಪ್ರಥಮ) ₹6 ಸಾವಿರ, ತನಿಷ್ಕಾ ಭಂಡಾರಿ (ದ್ವಿತೀಯ) ₹4 ಸಾವಿರ, ರಮ್ಯಾ ರೂಪೇಶ್ (ತೃತೀಯ) ₹3 ಸಾವಿರ ನಗದು ಪಡೆದುಕೊಂಡರು.
ವಿಜೇತರಿಗೆ ಉಚ್ಚಿಲ ದಸರಾ ರೂವಾರಿ ಜಿ.ಶಂಕರ್ ಬಹುಮಾನ ವಿತರಿಸಿದರು. ಉಚ್ಚಿಲ ಶ್ರೀಮಹಾಲಕ್ಷ್ಮಿ ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಯಶ್ಪಾಲ್ ಸುವರ್ಣ, ಭರತನಾಟ್ಯದಲ್ಲಿ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಸೃಷ್ಟಿಸಿದ ವಿದುಷಿ ದೀಕ್ಷಾ ಬ್ರಹ್ಮಾವರ, ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಶ್ಯಾಮಿಲಿ ನವೀನ್, ವಿನಯ ಕರ್ಕೇರ, ಅಜಿತ್ ಸುವರ್ಣ ಮುಂಬೈ, ಬ್ಯಾಂಕ್ನ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್, ಅಜಿತ್ ಕೊಡವೂರು, ಶಿಲ್ಪಾ ಜಿ ಸುವರ್ಣ, ನಿರುಪಮ ಪ್ರಸಾದ್ ಶೆಟ್ಟಿ, ಸತೀಶ್ ಕುಂದರ್, ಸಂಧ್ಯಾ ದೀಪ, ಶಶಿಕಾಂತ್ ಪಡುಬಿದ್ರಿ ಇದ್ದರು.
ಚಿತ್ರಕಲಾ ಸ್ಪರ್ಧೆ: ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಮೊಗವೀರ ಭವನದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಸುಮಾರು 475ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಆರನೇ ದಿನದ ಕಾರ್ಯಕ್ರಮ: ಆರನೇ ದಿನವಾದ ಶನಿವಾರ ಮಾತೆ ಶ್ರೀಕಾತ್ಯಾಯಿನಿ ಆರಾಧನೆ, ನಿತ್ಯ ಚಂಡಿಕಾ ಹೋಮ, ಮಹಾಪೂಜೆ, ಅನ್ನಸಂತರ್ಪಣೆ, ಶ್ರೀಮಹಿಷಮರ್ದಿನಿ ಕಲ್ಪೋಕ್ತ ಪೂಜೆ, ಭಜನಾ ಸಂಕೀರ್ತನೆ, ಹೇಮಚಂದ್ರ ಎರ್ಮಾಳ್ ಮತ್ತು ಬಳಗದಿಂದ ‘ಭಕ್ತಿ ಗೀತಾಂಜಲಿ’ ಸಂಗೀತ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೋಟ ವಿವೇಕ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಮುಖ್ಯ ಶಿಕ್ಷಕಿ ಪ್ರೀತಿರೇಖಾ ಬ್ರಹ್ಮಾವರ ಅವರು, ನವರಾತ್ರಿ ಆಚರಣೆಯ ವಿಶೇಷಗಳ ಬಗ್ಗೆ ಮಾತನಾಡಿದರು. ಸಂಜೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.
ಇಂದಿನ ಕಾರ್ಯಕ್ರಮ
ಮಾತೆ ಶ್ರೀಕಾಲರಾತ್ರಿ ದೇವಿ ಆರಾಧನೆ ವಿವಿಧ ಧಾರ್ಮಿಕ ಕಾರ್ಯಕ್ರಮ ಭಜನಾ ಸಂರ್ಕೀತನೆ ನೃತ್ಯ ವಿದುಷಿ ದೀಕ್ಷಾ ವಿ. ಚಾಂತಾರು ರಾಗಸಂಗಮ-ಗಣೇಶ್ ಎರ್ಮಾಳ್ ಮತ್ತು ಬಳಗದಿಂದ ‘ಭಕ್ತಿ ಗೀತಾಂಜಲಿ’ ಸಂಗೀತ ಕಾರ್ಯಕ್ರಮ ಉಡುಪಿ ಮತ್ತು ದ.ಕ. ಜಿಲ್ಲಾ ವ್ಯಾಪ್ತಿಯ ಕುಣಿತ ಭಜನಾ ತಂಡಗಳಿಂದ ಏಕಕಾಲದಲ್ಲಿ ಶ್ರೀಕ್ಷೇತ್ರದ ರಥಬೀದಿಯಲ್ಲಿ ಸಾಮೂಹಿಕ ಕುಣಿತ ಭಜನಾ ಕಾರ್ಯಕ್ರಮ ಬಳಿಕ ರಾಜ್ಯಮಟ್ಟದ ಆಹ್ವಾನಿತ ತಂಡಗಳ ‘ನೃತ್ಯ ವೈಭವ’ ನಡೆಯಲಿದೆ. ಇಂದು ಕುಸ್ತಿ ಪಂದ್ಯ: ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದ ಕುಸ್ತಿ ಸ್ಪರ್ಧೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.