ADVERTISEMENT

ಹರ್ಷನ ಸಾವಿಗೆ ಶೀಘ್ರ ನ್ಯಾಯ ಸಿಗಲಿ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ಹರ್ಷ, ವಿಶ್ವನಾಥನ ಮನೆಗೆ ಪೇಜಾವರ ಸ್ವಾಮೀಜಿ ಭೇಟಿ, ಆರ್ಥಿಕ ನೆರವು.

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 16:13 IST
Last Updated 11 ಮಾರ್ಚ್ 2022, 16:13 IST
ಕೆಲ ವರ್ಷಗಳ ಹಿಂದೆ ಕೋಮು ಸಂಘರ್ಷದಲ್ಲಿ ಬಲಿಯಾದ ಹಿಂದೂ ಕಾರ್ಯಕರ್ತ ವಿಶ್ವನಾಥನ ನಿವಾಸಕ್ಕೆ ಭೇಟಿನೀಡಿದ ಪೇಜಾವರ ಸ್ವಾಮೀಜಿ, ಕುಟುಂಬಕ್ಕೆ ಸಾಂತ್ವನ ಹೇಳಿ ತಾಯಿ ಮೀನಾಕ್ಷಮ್ಮ ಅವರಿಗೆ ₹ 1 ಲಕ್ಷ ನೆರವು ನೀಡಿದರು.
ಕೆಲ ವರ್ಷಗಳ ಹಿಂದೆ ಕೋಮು ಸಂಘರ್ಷದಲ್ಲಿ ಬಲಿಯಾದ ಹಿಂದೂ ಕಾರ್ಯಕರ್ತ ವಿಶ್ವನಾಥನ ನಿವಾಸಕ್ಕೆ ಭೇಟಿನೀಡಿದ ಪೇಜಾವರ ಸ್ವಾಮೀಜಿ, ಕುಟುಂಬಕ್ಕೆ ಸಾಂತ್ವನ ಹೇಳಿ ತಾಯಿ ಮೀನಾಕ್ಷಮ್ಮ ಅವರಿಗೆ ₹ 1 ಲಕ್ಷ ನೆರವು ನೀಡಿದರು.   

ಉಡುಪಿ: ಶಿವಮೊಗ್ಗದಲ್ಲಿ ಈಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷನ ನಿವಾಸಕ್ಕೆ ಶುಕ್ರವಾರ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಭೇಟಿನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಹರ್ಷನ ಸಾವಿನಿಂದ ಹೆ‌ತ್ತವರು ಅನುಭವಿಸುತ್ತಿರುವ ನೋವಿನ ಬಗ್ಗೆ ಅತೀವ ಸಹಾನುಭೂತಿ ಇದೆ.‌ ಕೊಲೆಯಂತಹ ಹೇಯಕೃತ್ಯಗಳ ಮೂಲಕ ಸಂಘಟನೆಗಳ ನೈತಿಕ‌ ಸ್ಥೈರ್ಯ ಕುಗ್ಗಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಹರ್ಷನ ಸಾವಿಗೆ ನ್ಯಾಯ ಸಿಗುವ ವಿಶ್ವಾಸವಿದ್ದು, ಹೆತ್ತವರಿಗೆ ದುಃಖ ಸಹಿಸುವ ಶಕ್ತಿ ಸಿಗಲಿ. ಸಮಾಜ, ಸಂಘ ಸಂಸ್ಥೆಗಳು, ಸರ್ಕಾರ, ಸಾಧು ಸಂತರು ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿರುವುದು ಕೊಂಚ ಸಮಾಧಾನ ತಂದಿದೆ. ಇಂಥಹ ದುರ್ಘಟನೆಗಳು ಮುಂದೆ ನಡೆಯಬಾರದು ಎಂದು ಹೇಳಿದ ಶ್ರೀಗಳು ಮಠದಿಂದ ಹತ್ತು ಸಾವಿರ ನೆರವು ನೀಡಿದರು.

ADVERTISEMENT

ಕೆಲ ವರ್ಷಗಳ ಹಿಂದೆ ಕೋಮು ಸಂಘರ್ಷದಲ್ಲಿ ಬಲಿಯಾದ ಹಿಂದೂ ಕಾರ್ಯಕರ್ತ ವಿಶ್ವನಾಥನ ನಿವಾಸಕ್ಕೂ ಭೇಟಿನೀಡಿದ ಪೇಜಾವರ ಸ್ವಾಮೀಜಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಮಾನವೀಯತೆ, ದಯೆ ಅನುಕಂಪ ಪ್ರಚಾರಕ್ಕೆ ಎಂಬಂತಾಗಬಾರದು.‌ ವಿಶ್ವನಾಥನ ಮರಣದ ಸಂದರ್ಭ ನೀಡಿದ್ದ ಭರವಸೆಗಳಲ್ಲಿ ಒಂದಷ್ಟನ್ನು ಈಡೇರಿಸಿದ್ದರೂ ಇಂದು ಆತನ ತಾಯಿ ಬವಣೆ ಪಡುವ ಅಗತ್ಯ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಸಮಾಜ ವಿಶ್ವನಾಥನ ಕುಟುಂಬಕ್ಕೂ ಅಗತ್ಯ ನೆರವು ನೀಡಬೇಕು ಎಂದರು.

ವಿಶ್ವನಾಥನ ತಾಯಿ ಮೀನಾಕ್ಷಮ್ಮ ಅವರಿಗೆ ₹ 1 ಲಕ್ಷ ನೆರವು ಹಾಗೂ ಫಲ ಮಂತ್ರಾಕ್ಷತೆ ನೀಡಿದರು. ಶ್ರೀಗಳ ಆಪ್ತ ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್ ಹಾಗೂ ಸಂಘಟನೆಗಳ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.